ಪ್ರಧಾನಿ ಮೋದಿಯವರ ಭದ್ರತಾ ಲೋಪ: ಕೇಂದ್ರಕ್ಕೆ ಪಂಜಾಬ್ ಸರ್ಕಾರ ಮಾಹಿತಿ
ಚಂಡಿಗಡ್ ಜನವರಿ07: ಬಟಿಂಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಕುರಿತು ಪಂಜಾಬ್ ಸರ್ಕಾರ ಇಂದು ಕೇಂದ್ರಕ್ಕೆ ಮಾಹಿತಿ ನೀಡಿದೆ. ಈ ವಿಷಯದ ಕುರಿತು ತನಿಖಾ ಸಮಿತಿಯನ್ನು ರಚಿಸಲಾಗಿದೆ. ತನಿಖಾ ಸಮಿತಿಯು 3 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಪಂಜಾಬ್ ಸರ್ಕಾರ ಕೇಂದ್ರಕ್ಕೆ ತಿಳಿಸಿದೆ. ನಿನ್ನೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಚನ್ನಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿ ಚರ್ಚಿಸಿದ್ದಾರೆ. ಈ ಘಟನೆಯ ಕುರಿತು ಬಿಜೆಪಿಯೊಂದಿಗೆ ಕಾಂಗ್ರೆಸ್ ರಾಜಕೀಯ ಕದನದಲ್ಲಿ ಸಿಲುಕಿಕೊಂಡಿದೆ. ಪ್ರಧಾನಿ ಆಗಮನದ ವೇಳೆ ಪ್ರತಿಭಟನಾ ನಿರತ ರೈತರನ್ನು ಚದುರಿಸಲು ರಾಜ್ಯ ಪೊಲೀಸರು ವಿಫಲಾಗಿದ್ದಾರೆ. ಜೊತೆಗೆ ಭದ್ರತಾ ಲೋಪಕ್ಕೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಆರೋಪಿಸಿದೆ.
ಬುಧವಾರ ಫಿರೋಜ್ಪುರದಲ್ಲಿ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಹೊರಟಿದ್ದ ಪ್ರಧಾನಿ ಮೋದಿ ಅವರು ಪಂಜಾಬ್ನ ಬಟಿಂಡಾದಲ್ಲಿ ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್ನಲ್ಲಿ ಸಿಲುಕಿಕೊಂಡರು. ಇದು ಪಂಜಾಬ್ ಕಾಂಗ್ರೆಸ್ ಸರ್ಕಾರದ ಭದ್ರತಾ ಲೋಪದಿಂದಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದು ಬಿಜೆಪಿ ಮತ್ತು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ನಡುವೆ ದೊಡ್ಡ ರಾಜಕೀಯ ಘರ್ಷಣೆಯನ್ನು ಉಂಟುಮಾಡಿದೆ. ಈ ವಿಷಯವು ಸುಪ್ರೀಂ ಕೋರ್ಟ್ಗೆ ತಲುಪಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆ ಆಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಭದ್ರತಾ ಲೋಪ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ನ ಫಿರೋಜ್ಪುರದಲ್ಲಿ ಸಮಾವೇಶ ರದ್ದು ಮಾಡಿದ್ದಾರೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.
ನಡೆದಿದ್ದೇನು?
ಪಂಜಾಬ್ ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30-ಕಿಮೀ ದೂರದಲ್ಲಿ, ಪ್ರಧಾನ ಮಂತ್ರಿಯ ಬೆಂಗಾವಲು ಪಡೆ ಫ್ಲೈಓವರ್ ಅನ್ನು ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿರುವುದು ಕಂಡುಬಂದಿದೆ. ಹೀಗಾಗಿ ಪ್ರಧಾನಿ 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡರು. ಇದು ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ಲೈಓವರ್ನಲ್ಲಿ ಸಿಲುಕಿದ್ದರು, ಬಳಿಕ ಬತಿಂಡಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ಏರ್ಪೋರ್ಟ್ಗೆ ತೆರಳಿದರು. ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರ ಇರುವುದೇ ಈ ವೈಫಲ್ಯಕ್ಕೆ ಕಾರಣ ಎಂದು ಗೃಹ ಸಚಿವಾಲಯ ತಿಳಿಸಿದೆ.
ಪಂಜಾಬ್ ಸಿಎಂ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್, "ಪ್ರಧಾನಿ ರಕ್ಷಣೆಗೆ ನನ್ನ ಪ್ರಾಣವನ್ನೂ ಕೊಡುತ್ತೇನೆ," ಎಂದು ಹೇಳಿದ್ದಾರೆ.ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪಂಜಾಬ್ ಸಿಎಂ, "ಪ್ರಧಾನಿಯನ್ನು ರಕ್ಷಿಸಲು ನಾನು ನನ್ನ ಪ್ರಾಣವನ್ನು ತ್ಯಜಿಸುತ್ತೇನೆ. ಆದರೆ ನಿಜವಾಗಿಯೂ ಹೇಳುವುದಾದರೆ ಯಾವುದೇ ಭದ್ರತಾ ಲೋಪವಾಗಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುರಕ್ಷಿತವಾಗಿದ್ದರು, ಅವರಿಗೆ ಯಾವುದೇ ಅಪಾಯವಾಗಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.