ಪಂಜಾಬ್ ಚುನಾವಣೆ: ಎಎಪಿಯ ಸಿಎಂ ಅಭ್ಯರ್ಥಿ ಭಗವಂತ್ ಧುರಿ ಕ್ಷೇತ್ರದಿಂದ ಸ್ಪರ್ಧೆ
ಚಂಡೀಗಢ, ಜನವರಿ 20: ಇದೇ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮನ್ ಧುರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕುರಿತು ರಾಘವ್ ಛಡ್ಡಾ ಮಾಹಿತಿ ನೀಡಿದ್ದು, ಪ್ರಸ್ತುತ ಆಡಳಿತ ಪಕ್ಷ ಕಾಂಗ್ರೆಸ್ ಧುರಿ ವಿಧಾನಸಭಾ ಕ್ಷೇತ್ರವನ್ನು ಆಕ್ರಮಿಸಿಕೊಂಡಿದೆ ಹಾಗೆಯೇ ಪಕ್ಷದ ದಲ್ವಿಂದರ್ ಖಂಗುರಾ ಶಾಸಕರಾಗಿದ್ದಾರೆ. ಭಗವಂತ್ ಮನ್ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಎಎಪಿ ಸಂಸದರಾಗಿದ್ದರು.
ಪಂಜಾಬ್ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮನ್ ಯಾರು?
117 ಸದಸ್ಯ ಬದಲ ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20ರಂದು ಚುನಾವಣೆ ನಡೆಯಲಿದೆ, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್ ನ ಸಂಗ್ರೂರು ಕ್ಷೇತ್ರದ ಆಮ್ ಆದ್ಮಿ ಪಕ್ಷದ ಲೋಕಸಭಾ ಸದಸ್ಯ ಭಗವಂತ್ ಮನ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದಾರೆ ಎಂದು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಇಂದು ಚಂಡೀಗಢದಲ್ಲಿ ಸಾರ್ವಜನಿಕರ ಮುಂದೆ ವೇದಿಕೆಯಲ್ಲಿ ಈ ಘೋಷಣೆ ಮಾಡಿದ ಅವರು, ಪಕ್ಷವು ಇತ್ತೀಚೆಗೆ ಫೋನ್ ಲೈನ್ ಅನ್ನು ತೆರೆದು ಅಭ್ಯರ್ಥಿಯ ಆಯ್ಕೆಯನ್ನು ನೀಡುವಂತೆ ಜನರನ್ನು ಕೇಳಿಕೊಂಡಿದ್ದೆವು. ಜನರ ಅಭಿಪ್ರಾಯ ಸಂಗ್ರಹಿಸಿ ಸಿಕ್ಕಿರುವ ಫಲಿತಾಂಶದಂತೆ ಭಗವಂತ್ ಮನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ತೀರ್ಮಾನಿಸಿದ್ದೇವೆ ಎಂದು ಪ್ರಕಟಿಸಿದರು.
ಭಗವಂತ್ ಮನ್ ಸಂಗ್ರೂರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಕಳೆದ ಎರಡೂ ಚುನಾವಣೆಗಳಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದೀಗ ಶೇ. 93ಕ್ಕೂ ಹೆಚ್ಚು ಜನರು ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ ಹಿನ್ನೆಲೆಯಲ್ಲಿ ಎಎಪಿ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ಸ್ಟಾಂಡಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮನ್ ಹಲವು ಸಿನಿಮಾಗಳಲ್ಲೂ ಹಾಸ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. 2011ರಲ್ಲಿ ಮೊದಲ ಬಾರಿಗೆ ರಾಜಕೀಯದ ಅಂಗಳಕ್ಕೆ ಧುಮುಕಿದ ಅವರು ಮನ್ಪ್ರೀತ್ ಸಿಂಗ್ ಬಾದಲ್ ನೇತೃತ್ವದ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಸೇರಿದ್ದರು. 2012ರಲ್ಲಿ ಲೆಹ್ರಾ ಕ್ಷೇತ್ರದಿಂದ ಸ್ಪರ್ಧಿಸಿದ ಮನ್ ಮೊದಲ ಯತ್ನದಲ್ಲೇ ಸೋಲು ಕಂಡಿದ್ದರು.
ಆದರೆ ಎಎಪಿಯಲ್ಲಿ ಅವರಿಗೆ ಅವಕಾಶದ ಬಾಗಿಲು ತೆರೆಯಿತು. 2014ರಲ್ಲಿ ಎಎಪಿ ಸೇರಿದ ಭಗವಂತ್ ಮನ್ ಅದೇ ವರ್ಷ ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೆಳಮನೆ ಪ್ರವೇಶಿಸಿದರು.
2017ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಭರ್ಜರಿಯಾಗಿ ಸಂಘಟಿಸಿ ಅಧಿಕೃತ ವಿರೋಧ ಪಕ್ಷದ ಸ್ಥಾನಕ್ಕೆ ಎಳೆದು ತಂದರಾದರೂ ಪ್ರಭಾವಿ ನಾಯಕ ಸುಖ್ಬೀರ್ ಸಿಂಗ್ ಬಾದಲ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡರು.
ಹೀಗಾಗಿ ಲೋಕಸಭಾ ಸದಸ್ಯರಾಗಿಯೇ ಮುಂದುವರಿದ ಅವರು 2019ರ ಲೋಕಸಭೆ ಚುನಾವಣೆಯಲ್ಲಿಯೂ ಮತ್ತೆ ಜಯಶಾಲಿಯಾಗಿ ಇದೀಗ ಎರಡನೇ ಬಾರಿಗೆ ಸಂಗ್ರೂರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.