ಪಂಜಾಬ್ನಲ್ಲಿ ಬಿಜೆಪಿ ಜೊತೆ ಅಮರೀಂದರ್ ಸಿಂಗ್ ಹೊಸ ಪಕ್ಷದ ದೋಸ್ತಿ
ಚಂಡೀಘರ್, ಡಿಸೆಂಬರ್ 1: ಪಂಜಾಬ್ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೊಸ ಪಕ್ಷವನ್ನು ಕಟ್ಟುತ್ತಿರುವುದು ತಿಳಿದ ವಿಷಯ. ಈಗ ಅದೇ ಹೊಸ ಪಕ್ಷವು ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಸ್ವತಃ ಕ್ಯಾಪ್ಟನ್ ಸಿಂಗ್ ಹೇಳಿದ್ದಾರೆ.
ಬಿಜೆಪಿ ಜೊತೆಗಿನ ಮೈತ್ರಿ ಮಾಡಿಕೊಳ್ಳುವುದಕ್ಕೆ ನಾನು ಹಾಕುವ ಏಕೈಕ ಷರತ್ತು ಎಂದರೆ ಅದು ರೈತರ ಆಂದೋಲನದ ಸಮಸ್ಯೆಯನ್ನು ಪರಿಹರಿಸಬೇಕು. "ನಾನು ಈಗಾಗಲೇ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಮೈತ್ರಿ ಬಗ್ಗೆ ಮಾತನಾಡಿದ್ದೇನೆ. ಶನಿವಾರ ಬಿಜೆಪಿ ಅಧ್ಯಕ್ಷರನ್ನು ಭೇಟಿ ಮಾಡುವ ಭರವಸೆಯಿದೆ. ಶೀಘ್ರದಲ್ಲೇ ಔಪಚಾರಿಕ ಘೋಷಣೆ ನಿರೀಕ್ಷಿಸಬಹುದು," ಎಂದು ಅಮರೀಂದರ್ ಸಿಂಗ್ ಸುಳಿವು ನೀಡಿದ್ದಾರೆ.
ಪಂಜಾಬ್ ಮಹಿಳೆಯರ ಖಾತೆಗೆ 1 ಸಾವಿರ ಭರವಸೆ: ವಿಪಕ್ಷಗಳ ಟೀಕೆಗೆ ಕೇಜ್ರಿವಾಲ್ ತಿರುಗೇಟು
ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ರೈತರು ಎತ್ತಿರುವ ಇತರ ಬೇಡಿಕೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ಹೀಗಿರುವಾಗ ಬಿಜೆಪಿಯೊಂದಿಗೆ ಔಪಚಾರಿಕ ಮೈತ್ರಿ ಮಾಡಿಕೊಳ್ಳಬಹುದು ಎಂದು ಹೇಳಿದರು. ತಮ್ಮ ಬೆಂಬಲಕ್ಕೆ ಯಾವ ಶಾಸಕರೂ ಇಲ್ಲ ಎಂದ ಕಾಂಗ್ರೆಸ್ ಹೇಳಿಕೆಯನ್ನು ಸಿಂಗ್ ತಳ್ಳಿ ಹಾಕಿದ್ದಾರೆ. ಅನೇಕ ಕಾಂಗ್ರೆಸ್ ಶಾಸಕರು ತಮ್ಮ ಪಕ್ಷಕ್ಕೆ ಸೇರಲು ಉತ್ಸುಕರಾಗಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಗಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಸಿಎಂ ಚನ್ನಿ ಮಾತು:
ಪಂಜಾಬಿನಲ್ಲಿ ಯಾವುದೇ ಬೆಂಬಲವಿಲ್ಲ ಎಂದು ಹೇಳಿಕೊಳ್ಳುವ ಭಾರತೀಯ ಜನತಾ ಪಕ್ಷದೊಂದಿಗೆ ಮಾಜಿ ಸಿಎಂ ಅಮರೀಂದರ್ ಸಿಂಗ್ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ರಾಜ್ಯದಲ್ಲಿ ತಮಗಿರುವ ಅವಕಾಶಗಳನ್ನೂ ಸಹ ಕಳೆದುಕೊಳ್ಳುತ್ತಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಹೇಳಿದ್ದರು. ಆದರೆ, ಚನ್ನಿ ಹೇಳಿಕೆಯನ್ನು ಸಿಂಗ್ ನಿರಾಕರಿಸಿದ್ದಾರೆ. "ಇಂದಿನ ಪರಿಸ್ಥಿತಿ ಪ್ರಕಾರ, ನಮಗೆ ಸಿಕ್ಕಿರುವ ಮಾಹಿತಿ ಬೇರೆಯಿದೆ. ರಾಜ್ಯದಲ್ಲಿ ಜನರು ಬಿಜೆಪಿ ಕಡೆಗೆ ಹೊರಳುತ್ತಿದ್ದಾರೆ. ಬಹುಪಾಲು ಹಿಂದೂಗಳು ಬಿಜೆಪಿ ಹಾಗೂ ತಮ್ಮ ಪಕ್ಷವನ್ನು ಬೆಂಬಲಿಸಲಿದ್ದಾರೆ. ಪಂಜಾಬಿನಲ್ಲಿ ಶೇ.36ರಷ್ಟು ಹಿಂದೂಗಳಿದ್ದು, ನಾವು ಕಾಂಗ್ರೆಸ್ಸಿಗಿಂತಲೂ ಹೆಚ್ಚು ಸ್ಥಾನಗಳನ್ನು ಗಳಿಸಲಿದ್ದೇವೆ. ರೈತರಿಂದಲೂ ಹೆಚ್ಚಿನ ಬೆಂಬಲ ಸಿಗುವ ಬಗ್ಗೆ ನಾವು ಆಶಿಸುತ್ತಿದ್ದೇವೆ," ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
ಶಿರೋಮಣಿ ಅಕಾಲಿದಳದ ಬಗ್ಗೆ ಉಲ್ಲೇಖ:
ಬಿಜೆಪಿಯ ಕೋಮು ಭಾಷೆ ಮತ್ತು ನಡೆಯ ವಿಷಯದಲ್ಲಿ ಯಾವುದೇ ತೊಂದರೆಯನ್ನು ಎಂದಿರುವ ಅಮರೀಂದರ್ ಸಿಂಗ್, ಎರಡು ದಶಕಗಳಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಶಿರೋಮಣಿ ಅಕಾಲಿದಳವನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಅಕಾಲಿಗಳು ಸಿಖ್ಖರ ಪಕ್ಷವಾಗಿದ್ದು, ಅವರಿಗೆ ಬಿಜೆಪಿಯೊಂದಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಪಂಜಾಬ್ನಲ್ಲಿ ಕೋಮುವಾದದ ಸಮಸ್ಯೆ ಇಲ್ಲ ಎಂದು ಸಿಂಗ್ ಒತ್ತಿ ಹೇಳಿದರು. "ಪಂಜಾಬ್ನಲ್ಲಿ ಸೇರಿದಂತೆ ನಾನು ಯಾವುದೇ ಕೋಮು ಸಂಬಂಧಿತ ವಿಷಯಗಳಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲ. ಇದು ಪಂಜಾಬಿಯತ್ನ ಎಂದು ಕರೆಯುವ ಒಂದು ರಾಜ್ಯವಾಗಿದೆ, ಅಂದರೆ ಎಲ್ಲಾ ಧರ್ಮಗಳು ಒಂದೇ ಕುಟುಂಬದ ಭಾಗವಾಗಿದೆ" ಎಂದು ಸಿಂಗ್ ಹೇಳಿದರು.
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ರೈತರ ಬಗ್ಗೆ ಹಿಂಸಾತ್ಮಕ ಮತ್ತು ನಿಂದನೆ ಕುರಿತು ಕೇಳಿದಾಗ, ಅದು ಆಕ್ಷಣಕ್ಕೆ ತೆಗೆದುಕೊಂಡಿರುವ ವಾಕ್ಚಾತುರ್ಯದ ಟೀಕೆಗಳಷ್ಟೇ ಎಂದು ಹೇಳಿದರು.
ಪಂಜಾಬ್ನಲ್ಲಿ ಅಮರೀಂದರ್ ಸಿಂಗ್ ಲೋಕ ಕಾಂಗ್ರೆಸ್ ಪಕ್ಷ:
ಪಂಜಾಬ್ ಕಾಂಗ್ರೆಸ್ಸಿನಲ್ಲಿ ಆಂತರಿಕ ಬಿಕ್ಕಟ್ಟು ಹಾಗೂ ಪಕ್ಷದೊಳಗಿನ ಕೆಲವು ಶಾಸಕರ ಬಂಡಾಯದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಲೋಕ ಕಾಂಗ್ರೆಸ್ ಪಕ್ಷವನ್ನು ಘೋಷಿಸಿದ ಸಿಂಗ್, "ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 117 ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದರು. ಅವರ ಪಕ್ಷ, ಬಿಜೆಪಿ ಮತ್ತು ಅಕಾಲೀಸ್ನ ದಿಂಡಾ ಬಣದ ಜೊತೆ ಹಂಚಿಕೆಯಾಗುವ ಸೀಟುಗಳ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ನಮ್ಮದೇ ಆಗಿರುವ ರಾಜಕೀಯ ಲೆಕ್ಕಾಚಾರಗಳ ನಂತರದಲ್ಲಿ ಮಿತ್ರಪಕ್ಷಗಳೊಂದಿಗೆ ಯಾವ ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ," ಎಂದು ಸಿಂಗ್ ಹೇಳಿದ್ದಾರೆ.
ಪ್ರತಿದಿನ ಮೂರರಿಂದ ನಾಲ್ಕು ಮಂದಿ ಸಂಪರ್ಕ:
ಪಂಜಾಬಿನಲ್ಲಿ ಲೋಕ ಕಾಂಗ್ರೆಸ್ ಪಕ್ಷದ ಕಚೇರಿ ಇನ್ನೂ ಆರಂಭವಾಗಿಲ್ಲ. ಈಗಲೇ ಪ್ರತಿನಿತ್ಯ ಮೂರರಿಂದ ನಾಲ್ಕು ಶಾಸಕರು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದಿರುವ ಕ್ಯಾಪ್ಟನ್ ಸಿಂಗ್, ಒಟ್ಟು ಎಷ್ಟು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಮಾತ್ರ ಬಹಿರಂಗಪಡಿಸಲಿಲ್ಲ. "ನಾವು ಈಗಾಗಲೇ 30-40 ಅರ್ಜಿದಾರರನ್ನು ಹೊಂದಿದ್ದೇವೆ, ಆದರೆ ನಮ್ಮೊಂದಿಗೆ ಇರುವ ಹಾಲಿ ಶಾಸಕರು ಮತ್ತು ಸಂಸದರ ಸಂಖ್ಯೆಯನ್ನು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ" ಎಂದು ಸಿಂಗ್ ಹೇಳಿದರು. ಕಾಂಗ್ರೆಸ್ ಮಾತ್ರವಲ್ಲದೆ ಎಲ್ಲಾ ಪಕ್ಷಗಳ ನಾಯಕರು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ತಿಳಿಸಿದರು.
"ಮೊದಲು, ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡುತ್ತಾರೆ ಎಂದು ನೋಡೋಣ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು 35 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದಾರೆ. ಅವರಲ್ಲಿ ಯಾರಾದರೂ ಮಸೂದೆಗೆ ಸರಿಹೊಂದುತ್ತಾರೆಯೇ ಎಂದು ನಾವು ನೋಡುತ್ತೇವೆ, ಅವರಿಗಿಂತ ನನಗೆ ಚೆನ್ನಾಗಿ ತಿಳಿದಿದೆ," ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿಕೊಂಡಿದ್ದಾರೆ.