ರೈತರ ಮೇಲಿನ ತ್ಯಾಜ್ಯ ಸುಡುವ ಪ್ರಕರಣಗಳನ್ನು ರದ್ದು ಮಾಡಿದ ಪಂಜಾಬ್ ಸಿಎಂ
ಚಂಡೀಗಢ ನವೆಂಬರ್ 17: ಹುಲ್ಲು ಅಥವಾ ಕೃಷಿ ತ್ಯಾಜ್ಯವನ್ನು ಸುಡುವ ರೈತರ ವಿರುದ್ಧದ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಪಂಜಾಬ್ ಸರ್ಕಾರ ರದ್ದುಗೊಳಿಸಲಿದೆ ಎಂದು ಮುಖ್ಯಮಂತ್ರಿ ಚರಂಜಿತ್ ಚನ್ನಿ ಬುಧವಾರ ಹೇಳಿದ್ದಾರೆ. ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಬೆನ್ನಲ್ಲೆ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುವ ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹೀಗೆ ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಸರ್ಕಾರ ರದ್ದುಗೊಳಿಸಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಬೆನ್ನಲ್ಲೆ ನೆರೆಯ ಪ್ರದೇಶಗಳ ರೈತರಿಗೆ ಕಳೆ ಸುಡದಂತೆ ಆದೇಶಿಸಲಾಗಿತ್ತು. ರೈತರು ಕೃಷಿ ತ್ಯಾಜ್ಯವನ್ನು ಸುಡುವುದು ಮುಂದಿನ ಬೆಳೆಗೆ ಮಾಡಬೇಕಾದ ಬಹುಮುಖ್ಯವಾದ ಕೆಲಸ. ಆದರೆ ಇದಕ್ಕೆ ತಡೆಯೊಡ್ಡಿದ್ದರಿಂದ ರೈತರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧ ವ್ಯಕ್ತಪಡಿಸಿದ ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇಂಥ ಪ್ರತಿಭಟನೆ ವೇಳೆ ದಾಖಲಾಗಿರುವ ಪ್ರಕರಣಗಳನ್ನೂ ಕೈಬಿಡಲಾಗುವುದು ಎಂದು ಮುಖ್ಯಮಂತ್ರಿ ಚನ್ನಿ ಹೇಳಿದ್ದಾರೆ.
ಇಂದು 32 ಒಕ್ಕೂಟಗಳ ರೈತ ಮುಖಂಡರನ್ನುದ್ದೇಶಿಸಿ ಮಾತನಾಡಿದ ಚನ್ನಿ ಅವರು "ರೈತರು ಕಳೆ ಸುಡುವುದನ್ನು ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ. ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನಾವು ಇಲ್ಲಿಯವರೆಗೆ ಹುಲ್ಲು ಸುಡುವಿಕೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನು ರದ್ದುಗೊಳಿಸುತ್ತಿದ್ದೇವೆ. ಜೊತೆಗೆ ರೈತರಿಗೆ ಹುಲ್ಲು ಸುಡದಂತೆ ಮನವಿ ಮಾಡುತ್ತಿದ್ದೇವೆ" ಎಂದರು.
"ಈ ಆಂದೋಲನ ಪ್ರಾರಂಭವಾದಾಗಿನಿಂದ ರಾಜ್ಯ ಸರ್ಕಾರವು ರೈತರ ವಿರುದ್ಧ ಅನೇಕ ಎಫ್ಐಆರ್ಗಳನ್ನು ದಾಖಲಿಸಿದೆ. ನಾವು ಕೃಷಿ ಆಂದೋಲನಕ್ಕೆ ಸಂಬಂಧಿಸಿದ ಎಲ್ಲಾ ಎಫ್ಐಆರ್ಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ" ಎಂದು ಮುಖ್ಯಮಂತ್ರಿ ಹೇಳಿದರು.
ಸದ್ಯ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಳ ಸುಪ್ರೀಂ ಕೋರ್ಟ್ ಕೇಂದ್ರಬಿಂದುವಾಗಿದೆ. ಈ ಬಗ್ಗೆ ಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡು ಕೂಡಲೇ ತುರ್ತು ಕ್ರಮಗಳೊಂದಿಗೆ ವಾಯುಮಾಲಿನ್ಯ ನಿಯಂತ್ರಣಕ್ಕೆ ಸೂಚಿಸಿತ್ತು. ಅಧಿಕ ವಾಯುಮಾಲಿನ್ಯ ಶ್ವಾಸಕೋಶದ ಕ್ಯಾನ್ಸರ್, ಹೃದಯ ಮತ್ತು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಕೋರ್ಟ್ ಆತಂಕ ವ್ಯಕ್ತಪಡಿಸಿತ್ತು. ಅದಲ್ಲದೆ ವಾಯುಮಾಲಿನ್ಯದ ಹೆಚ್ಚಳಕ್ಕೆ ಕೃಷಿ ತ್ಯಾಜ್ಯ ಸುಡುವಿಕೆಯೂ ಕೂಡ ಒಂದು ಕಾರಣವಾಗಿದೆ. ಪಂಜಾಬ್ 67,000 ಕೃಷಿ ತ್ಯಾಜ್ಯ ಸುಡಿವಿಕೆಯ ಪ್ರಕರಣಗಳನ್ನು ದಾಖಲಿಸಿದೆ ಎಂದು ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರು ತಿಳಿಸಿದ್ದಾರೆ.
SAFAR ಪ್ರಕಾರ ಬುಧವಾರ ದೆಹಲಿ ಎನ್ಸಿಆರ್ನಲ್ಲಿ ಮಾಲಿನ್ಯಕ್ಕೆ ಕೃಷಿ ಬೆಂಕಿಯ ಪಾಲು ಕನಿಷ್ಠ ಆರು ಪ್ರತಿಶತಕ್ಕೆ ಇಳಿದಿದೆ. ಆದರೆ ಇದು ಕಳೆದ ವಾರ ಗರಿಷ್ಠ 35 ಪ್ರತಿಶತ ಮತ್ತು ದೀಪಾವಳಿ ನಂತರ 48 ಪ್ರತಿಶತದಷ್ಟಿತ್ತು. ನವೆಂಬರ್ 17 ರಂದು ದೆಹಲಿಯಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಶೇಕಡಾ ಆರರಷ್ಟು ವಾಯುಮಾಲಿನ್ಯಕ್ಕೆ ಕೊಡುಗೆ ನೀಡಿದೆ. ಇನ್ನೂ 10 ಪ್ರತಿಶತದಷ್ಟು ಮಾಲಿನ್ಯ ಕಳೆ ಸುಡುವಿಕೆಯಿಂದ ಉಂಟಾಗುತ್ತದೆ ಎಂದು ಕೇಂದ್ರ ಹೇಳಿದೆ. ಹೀಗಾಗಿ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರು "ರೈತರು ಒಂದು ವಾರದವರೆಗೆ ಹುಲ್ಲು ಸುಡದಂತೆ ವಿನಂತಿಸಬೇಕು" ಎಂದು ಸರ್ಕಾರಗಳನ್ನು ಸೂಚಿಸಿದರು.ಈ ವೇಳೆ ಕೆಲ ಯಂತ್ರಗಳ ಬಳಕೆಯ ಸಲಹೆಯನ್ನೂ ನೀಡಲಾಗಿತ್ತು.
ಪಂಜಾಬ್ ಸರ್ಕಾರವು ಸಂಪರ್ಕಿಸಿದ ರೈತರು ಈ ಯಂತ್ರಗಳ ಬಳಕೆಯನ್ನು ನಿರಾಕರಿಸಿದ್ದಾರೆ. ಅದು "ಕಾರ್ಯಸಾಧ್ಯವಲ್ಲ" ಎಂದ ರೈತರು ತ್ಯಾಜ್ಯ ನಿರ್ವಹಣೆಗಾಗಿ ಬೋನಸ್ಗಳನ್ನು ಕೋರಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇನ್ನೂ ದೆಹಲಿ ಸರ್ಕಾರ ವಾಯುಮಾಲಿನ್ಯದಿಂದ ಪರಿಣಾಮ ತಡೆಗಟ್ಟಲು ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚುವುದು ಮತ್ತು ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ಹೇಳಿದೆ. ಹಾಗೆಯೇ 11 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಆರನ್ನು ಮುಚ್ಚಲು ಸೂಚಿಸಲಾಗಿದೆ. ಜೊತೆಗೆ ಟ್ರಕ್ಗಳ ಪ್ರವೇಶವನ್ನು ನಿಷೇಧಿಸಿದೆ.
Recommended Video