ಪಂಜಾಬಿನಲ್ಲಿ ನವಜೋತ್ ಸಿಧು ಪಕ್ಷದ ಸರ್ವೋಚ್ಛ ನಾಯಕ ಎಂದ ಸಿಎಂ ಚರಣ್ಜಿತ್ ಸಿಂಗ್
ಚಂಡೀಘರ್, ಸೆಪ್ಟೆಂಬರ್ 29: ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ನವಜೋತ್ ಸಿಂಗ್ ಸಿಧುರಿಗೆ ಯಾವ ವಿಷಯಗಳ ಬಗ್ಗೆ ಆಕ್ಷೇಪಣೆಯಿದೆ ಎಂಬುದರ ಕುರಿತು ಚರ್ಚೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
ಬುಧವಾರ ನಡೆಸಿದ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಉದ್ದೇಶಪೂರ್ವಕವಾಗಿ ಏನನ್ನೂ ಮಾಡಿಲ್ಲ ಎಂದರು. ಯಾವುದೇ ನೇಮಕಾತಿಯಲ್ಲಿ ಯಾರಾದರೂ ಆಕ್ಷೇಪಣೆ ಹೊಂದಿದ್ದರೆ, ನಾನು ಆ ಬಗ್ಗೆ ಕಠಿಣ ನಿಲುವು ಹೊಂದಿಲ್ಲ, ನನಗೆ ಅಹಂ ಮತ್ತು ಜಗಳಗಳಿಲ್ಲ. ನಾನು ಅವರಿಗೆ ಪಕ್ಷದ ಸರ್ವೋಚ್ಚ ನಾಯಕ ಎಂದು ತಿಳಿದುಕೊಂಡಿದ್ದೇನೆ, ಮಾತನಾಡೋಣ ಬನ್ನಿ," ಎಂದು ಮುಖ್ಯಮಂತ್ರಿ ಚನ್ನಿ ಆಹ್ವಾನ ನೀಡಿದ್ದಾರೆ.
'ದಲಿತ ವ್ಯಕ್ತಿ ಸಿಎಂ ಆಗಿದ್ದು ನವಜ್ಯೋತ್ಗೆ ತಡೆಯಲು ಆಗಿಲ್ಲ': ಆಪ್
ಪಂಜಾಬ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಸಂಪುಟ ರಚನೆ ಆಗುತ್ತಿದ್ದಂತೆ ಪಕ್ಷದೊಂದಿಗೆ ಯಾವುದೇ ರೀತಿ ಸಮಾಲೋಚನೆ ನಡೆಸದೇ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮಧ್ಯೆ ಬುಧವಾರ ವಿಡಿಯೋ ಸಂದೇಶವೊಂದನ್ನು ನೀಡಿರುವ ಸಿಧು, ತಮ್ಮ ಕೊನೆಯುಸಿರು ಇರುವವರೆಗೂ ಸತ್ಯಕ್ಕಾಗಿ ನ್ಯಾಯಕ್ಕಾಗಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
ಸತ್ಯಕ್ಕಾಗಿ ನನ್ನ ಹೋರಾಟ ಎಂಬ ಸಂದೇಶ:
ಪಂಜಾಬ್ನಲ್ಲಿ ಕಾರ್ಯಚೂಚಿ ಹಾಗೂ ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ನವಜೋತ್ ಸಿಂಗ್ ಸಿಧು ತಮ್ಮ ವಿಡಿಯೋ ಸಂದೇಶದಲ್ಲಿ ಸಾರಿ ಹೇಳಿದ್ದಾರೆ. ನನ್ನ ಕೊನೆಯ ಉಸಿರು ಇರುವವರೆಗೂ ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಟ ನಡೆಸುತ್ತೇನೆ. ರಾಜಿ ಮಾಡಿಕೊಳ್ಳುವುದರ ಮೂಲಕ ಮನುಷ್ಯನ ಪಾತ್ರದ ಕುಸಿಯಲು ಆರಂಭವಾಗುತ್ತದೆ. ಪಂಜಾಬ್ನ ಭವಿಷ್ಯ ಮತ್ತು ಪಂಜಾಬ್ನ ಕಲ್ಯಾಣದ ವಿಷಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ, ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ," ಎಂದು ಹೇಳಿದ್ದಾರೆ.
ರಾಜೀನಾಮೆ ಹಿಂಪಡೆಯುವಂತೆ ನಾಯಕರ ಒತ್ತಾಯ:
ಪಂಜಾಬ್ ವಿಧಾನಸಭೆ ಚುನಾವಣೆಗೆ ನಾಲ್ಕು ತಿಂಗಳಷ್ಟೇ ಬಾಕಿ ಇರುವಂತೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಸಲ್ಲಿಸಿರುವುದು ಪಕ್ಷದೊಳಗೆ ಹೊಸ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರಿಂದ ಮನವೊಲಿಕೆಯ ಕಸರತ್ತು ಜೋರಾಗಿ ನಡೆಯುತ್ತಿದೆ. ಸಿಧು ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಹೈಕಮಾಂಡ್ ನಾಯಕರು ನವಜೋತ್ ಸಿಂಗ್ ಸಿಧುರಿಗೆ ಒತ್ತಾಯಿಸಿದ್ದಾರೆ. ಆಂತರಿಕ ಮಟ್ಟದಲ್ಲಿ ಸ್ವತಃ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಿಧು ಜೊತೆಗೆ ಚರ್ಚಿಸಿ ತಮ್ಮ ನಿರ್ಧಾರ ಬದಲಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಸಿಧು ಬೆಂಬಲಿಗರಿಂದ ರಾಜೀನಾಮೆ:
ಪಂಜಾಬ್ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎರಡೇ ದಿನಗಳಲ್ಲಿ ಮಲೆರ್ಕೋಟ್ಲಾ ಶಾಸಕಿ ರಜಿಯಾ ಸುಲ್ತಾನಾ ಮಂಗಳವಾರ "ನವಜೋತ್ ಸಿಂಗ್ ಸಿಧುಗೆ ಬೆಂಬಲವಾಗಿ" ರಾಜೀನಾಮೆ ನೀಡಿದ್ದಾರೆ. "ಸಿದ್ದು ಸಾಹಬ್ ತತ್ವಗಳ ವ್ಯಕ್ತಿ. ಅವರು ಪಂಜಾಬ್ ಮತ್ತು ಪಂಜಾಬಿಯತ್ ಗಾಗಿ ಹೋರಾಡುತ್ತಿದ್ದಾರೆ" ಎಂದು ಸುಲ್ತಾನಾ ಹೇಳಿದ್ದಾರೆ. ಪಂಜಾಬ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗಿಂದರ್ ಧಿಂಗ್ರಾ ಮತ್ತು ಖಜಾಂಚಿ ಗುಲ್ಜಾರ್ ಇಂದರ್ ಚಹಲ್ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.