ನವಜೋತ್ ಸಿಂಗ್ ರಾಜೀನಾಮೆ: ತುರ್ತು ಸಂಪುಟ ಸಭೆ ಕರೆದ ಪಂಜಾಬ್ ಸಿಎಂ ಚನ್ನಿ
ಚಂಡೀಗಢ, ಸೆಪ್ಟೆಂಬರ್ 29: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ತುರ್ತು ಸಂಪುಟ ಸಭೆ ಕರೆದಿದ್ದಾರೆ.
ನವಜೋತ್ ಸಿಂಗ್ ಸಿಧು ಅವರ ರಾಜೀನಾಮೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನವಜೋತ್ ಸಿಂಗ್ ಸಿಧು ರಾಜೀನಾಮೆ ಬೆನ್ನಲ್ಲೇ ಹಲವು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇರುವ ಹಿನ್ನೆಯಲ್ಲಿ ಈ ಕುರಿತು ಚರ್ಚಿಸಲು ಚನ್ನಿ ಸಂಪುಟ ಸಭೆ ಕರೆದಿದ್ದಾರೆ.
'ದಲಿತ ವ್ಯಕ್ತಿ ಸಿಎಂ ಆಗಿದ್ದು ನವಜ್ಯೋತ್ಗೆ ತಡೆಯಲು ಆಗಿಲ್ಲ': ಆಪ್
ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಅವರು ಸಿಧು ಅವರಿಗೆ ರಾಜೀನಾಮೆ ಹಿಂಪಡೆಯುವಂತೆ ಒತ್ತಾಯ ಮಾಡಿದ್ದರು. ಸಿಧು ಅವರು ಪಂಜಾಬ್ನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಕುರಿತು ಧ್ವನಿಎತ್ತಿದವರು. ಅವರ ಸ್ಥಾನಕ್ಕೆ ಬೇರೆ ಯಾರೂ ಸರಿಸಾಟಿ ಇಲ್ಲ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಒತ್ತಡ ಹಾಕಲಾಗುತ್ತಿದೆ.
ರಾಜೀನಾಮೆ ಕುರಿತು ಸೋನಿಯಾಗಾಂಧಿಗೆ ನವಜೋತ್ಸಿಂಗ್ ಪತ್ರ ಬರೆದಿದ್ದು, "ರಾಜಿಯೊಂದಿಗೆ ಮನುಷ್ಯನ ನಡತೆಯ ಕುಸಿತವು ಆರಂಭವಾಗುತ್ತದೆ. ಪಂಜಾಬ್ನ ಭವಿಷ್ಯ ಮತ್ತು ಪಂಜಾಬ್ನ ಕಲ್ಯಾಣಕ್ಕಾಗಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಆದ್ದರಿಂದ, ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ," ಎಂದು ಹೇಳಿದ್ದಾರೆ.
ಆದರೆ ನಾನು ಕಾಂಗ್ರೆಸ್ನ ಸೇವೆ ಮುಂದುವರಿಸುತ್ತೇನೆ ಎಂದು ನವಜೋತ್ ಸಿಧು ಸೋನಿಯಾ ಗಾಂಧಿಗೆ ಬರೆದಿರುವ ಪತ್ರದಲ್ಲಿ ಭರವಸೆ ನೀಡಿದ್ದಾರೆ. ಸಿಧು ರಾಜೀನಾಮೆಗೆ ಕಾರಣ ಏನು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಒಂದು ಮೂಲಗಳ ಪ್ರಕಾರ ಹಾಲಿ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಜತೆಗೂ ಸಿಧು ಮುನಿಸಿಕೊಂಡಿದ್ದರು ಎನ್ನಲಾಗಿದೆ.
ಮರಳು ಮಾಫಿಯಾದಲ್ಲಿ ಶಾಮೀಲಾಗಿರುವ ಆರೋಪ ಹೊತ್ತು ಅಮರೀಂದರ್ ಸಿಂಗ್ ಸಂಪುಟದಿಂದ ನಿರ್ಗಮಿಸಿದ್ದ ರಾಣಾ ಗುರ್ಜಿತ್ ಸಿಂಗ್ ಅವರ ಸಂಪುಟ ಸೇರ್ಪಡೆಗೆ ಕಾಂಗ್ರೆಸ್ನ ಕೆಲವು ಶಾಸಕರು, ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ನವಜೋತ್ ಸಿಂಗ್ ಸಿಧು ಅವರಿಗೆ ಮನವಿಯನ್ನೂ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಗುರ್ಜಿತ್ ಸಿಂಗ್ ಅವರನ್ನು ಕೈ ಬಿಡುವಂತೆ ಸಿಧು ಸಿಎಂಗೆ ಮನವಿ ಮಾಡಿದ್ದರು. ಆದರೆ ಸಿಧು ಮಾಡಿದ ಮನವಿಯನ್ನು ಚನ್ನಿ ಪರಿಗಣಿಸಿರಲಿಲ್ಲ.
ಸಿಎಂಗೂ ಗೊತ್ತಿರಲಿಲ್ಲ ರಾಜೀನಾಮೆ: ಪಂಜಾಬ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನವಜೋತ್ಸಿಂಗ್ ಸಿಧು ಅವರು ಸಲ್ಲಿಸಿದ ರಾಜೀನಾಮೆ ವಿಚಾರ ಅವರ ಆಪ್ತ ಬಳಗದಲ್ಲಿ ಒಬ್ಬರಾದ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರಿಗೂ ಗೊತ್ತಿರಲಿಲ್ಲವಂತೆ. ಸಿಧು ದಿಢೀರ್ ರಾಜೀನಾಮೆ ಬೆನ್ನಲ್ಲೇ ಪ್ರತಿಕ್ರಿಸಿದ ಚನ್ನಿ ಸಿಧು ಅವರ ರಾಜೀನಾಮೆ ಬಗ್ಗೆ ನಮಗೇನೂ ಗೊತ್ತಿಲ್ಲ. ಸಿಧು ಅವರು ನಮ್ಮ ನಾಯಕ ಹಾಗೂ ಒಳ್ಳೆಯ ಮುಖಂಡರು, ಸಿಧು ಅವರ ರಾಜೀನಾಮೆ ಬೆಳವಣಿಗೆ ಬಗ್ಗೆ ಏನೂ ಗೊತ್ತಿಲ್ಲದಿದ್ದಾಗ ನಾನೇನು ಹೇಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಎಲ್ಲರ ವಿರುದ್ಧವೂ ಸಿಧು ಸದಾ ಮುನಿಸು: ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿಧು ಮೊದಲಿನಿಂದಲೂ ಬಂಡಾಯಗಾರ. ನಿಂತಲ್ಲಿ ನಿಲ್ಲದ, ಯಾವುದೇ ಕ್ಷಣದಲ್ಲಾದರೂ ಯಾವುದೇ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದಾದಂತಹ ವ್ಯಕ್ತಿತ್ವ.
2004ರಲ್ಲಿ ಬಿಜೆಪಿಗೆ ಸೇರ್ಪಡೆಯೊಂದಿಗೆ ರಾಜಕೀಯಕ್ಕೆ ಕಾಲಿಟ್ಟ ಸಿಧು,2004ರಲ್ಲಿ ಲೋಕಸಭೆಗೆ ಆಯ್ಕೆಯಾದರು. 2014ರವರೆಗೆ ಅವರು ಬಿಜೆಪಿ ಸಂಸದರಾಗಿದ್ದರು. 2014ರಲ್ಲಿ ಬಿಜೆಪಿ ಅವರಿಗೆ ಲೋಕಸಭೆ ಟಿಕೆಟ್ ನಿರಾಕರಿಸಿತು. ಅದಕ್ಕೆ ಪ್ರತಿಯಾಗಿ 2016ರಲ್ಲಿ ಅವರನ್ನು ರಾಜ್ಯಸಭೆಗೆ ಕಳುಹಿಸಿತು. ಆದರೆ ಹೈಕಮಾಂಡ್ ವಿರುದ್ಧ ಮುನಿಸಿಕೊಂಡ ಸಿಧು ರಾಜ್ಯಸಭೆ ಸದಸ್ಯತ್ವ ಹಾಗೂ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದರು.
ಸಿಧು ಮುನಿಸಿಗೆ ಕಾರಣವೇನು?: ಸಿಎಂ ಹುದ್ದೆ ರೇಸ್ನಲ್ಲಿ ಸೋತ ಸುಖ್ಜಿಂದರ್ ರಂಧಾವಾಗೆ ಸಂಪುಟ ವಿಸ್ತರಣೆ ವೇಳೆ ಗೃಹ ಖಾತೆ ನೀಡಿದ್ದು, ಭ್ರಷ್ಟಾಚಾರದ ಕಾರಣಕ್ಕೆ ಅಮರಿಂದರ್ ಸಂಪುಟದಿಂದ ಹೊರಬಿದ್ದಿದ್ದ ಗುರ್ಜೀತ್ಸಿಂಗ್ಗೆ ಮತ್ತೆ ಸಂಪುಟದಲ್ಲಿ ಸ್ಥಾನ ನೀಡಿದ್ದು, ಎಪಿಎಸ್ ಡಿಯೋಲ್ಗೆ ಅಡ್ವೊಕೇಟ್ ಜನರಲ್ ಹುದ್ದೆ ನೀಡಿದ್ದು ಸಿಧು ಅವರನ್ನು ಕೆರಳಿಸಿದೆ. ಇದು ಪದತ್ಯಾಗಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.