ಚುನಾವಣೆ ಒಂದು ವಾರ ಮುಂದೂಡುವಂತೆ ಪಂಜಾಬ್ ಸಿಎಂ ಚನ್ನಿ ಮನವಿ
ಚಂಡೀಗಢ, ಜನವರಿ 16: ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಪಂಜಾಬ್ನಲ್ಲಿ ಒಂದು ವಾರ ಚುನಾವಣೆ ಮುಂದೂಡುವಂತೆ ಮನವಿ ಮಾಡಿದ್ದಾರೆ. ಫೆ.16ರಂದು ಗುರು ರವಿದಾಸ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ವಾರಣಾಸಿಗೆ ರಾಜ್ಯದ ಬಹುತೇಕ ಪರಿಶಿಷ್ಟ ಜಾತಿಯ ಜನರು ಭೇಟಿ ನೀಡುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿ ಫೆ.14ರಂದು ನಡೆಯಲಿರುವ ಚುನಾವಣೆಯನ್ನು ಕನಿಷ್ಠ ಆರು ದಿನ ಮುಂದೂಡಬೇಕು ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಫೆಬ್ರವರಿ 10 ರಿಂದ 16ರವರೆಗೆ ಉತ್ತರ ಪ್ರದೇಶದ ವಾರಣಾಸಿಗೆ ಗುರು ರವಿದಾಸ್ ಅವರ ಜನ್ಮದಿನದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಲಿದ್ದಾರೆ ಎಂದು ದಲಿತ ಸಮುದಾಯದ ಪ್ರತಿನಿಧಿಯೊಬ್ಬರು ತಮಗೆ ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ ವಾರಣಾಸಿಗೆ ಸುಮಾರು 20 ಲಕ್ಷ ಭಕ್ತರು ಆಗಮಿಸುವ ಸಾಧ್ಯತೆಯಿದ್ದು, ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮತದಾನದ ದಿನಾಂಕ ಬದಲಿಸುವಂತೆ ಚರಂಜಿತ್ ಸಿಂಗ್ ಚನ್ನಿ ಮನವಿ ಮಾಡಿದ್ದಾರೆ.
ಪಂಜಾಬ್ನಲ್ಲಿ ಸುಮಾರು 32 ಪ್ರತಿಶತದಷ್ಟು ಜನರು ಪರಿಶಿಷ್ಟ ಜಾತಿಯವರು. ಫೆಬ್ರವರಿ 16 ಗುರು ರವಿದಾಸ್ ಅವರ 645 ನೇ ಜನ್ಮದಿನವಾಗಿದೆ. ಪ್ರತಿ ವರ್ಷದಂತೆ, ಪಂಜಾಬ್ ಮತ್ತು ವಿಶೇಷವಾಗಿ ದೋಬಾ ಪ್ರದೇಶದ ಜನರು ಗುರು ರವಿದಾಸ್ ಅವರ ಜನ್ಮಸ್ಥಳವಾದ ಉತ್ತರ ಪ್ರದೇಶದ ಬನಾರಸ್ನ ಗೋವರ್ಧನಪುರಕ್ಕೆ ಹೋಗುತ್ತಾರೆ. ಇದರಿಂದಾಗಿ ಅವರು ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಚುನಾವಣೆ ದಿನಾಂಕವನ್ನು ಫೆಬ್ರವರಿ 20 ಕ್ಕೆ ಮಾಡಲು ಚನ್ನಿ ವಿನಂತಿಸಿದ್ದಾರೆ.
ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ 86 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವದಿಂದ ಸ್ಪರ್ಧಿಸಲಿದ್ದರೆ, ರಾಜ್ಯದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
Punjab CM Charanjit S Channi wrote to Chief Election Commissioner on Jan 13, requesting him "to postpone Feb 14 State Assembly polls for at least six days as many people from SC community from the State likely to visit Varanasi,in view of Guru Ravidas birth anniversary on Feb 16" pic.twitter.com/TzLzR3t2fn
— ANI (@ANI) January 15, 2022
ಇನ್ನು ಪಂಜಾಬ್ ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಡೇರಾ ಬಾಬಾ ನಾನಕ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ರಾಜ್ಯ ಸಾರಿಗೆ ಸಚಿವ ರಾಜಾ ಅಮರಿಂದರ್ ವಾರಿಂಗ್ ಅವರು ಗಿಡ್ದರ್ಬಾಹಾದಿಂದ ಸ್ಪರ್ಧಿಸಿದ್ದಾರೆ. ಮೊಗಾ ಕ್ಷೇತ್ರದಿಂದ ಸ್ಪರ್ಧಿಸಲು ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಅವರಿಗೆ ಟಿಕೆಟ್ ನೀಡಲಾಗಿದೆ. ಪಂಜಾಬಿ ಗಾಯಕ ಸಿಧು ಮುಸೇವಾಲಾ ಅವರನ್ನು ಮಾನ್ಸಾದಿಂದ ಕಣಕ್ಕಿಳಿಸಲಾಗಿದೆ. ಮಜಿತಾ - ಜಗವಿಂದರ್ ಪಾಲ್ ಸಿಂಗ್ (ಜಗ್ಗ ಮಜಿತಾ) ,ಅಮೃತಸರ ಪಶ್ಚಿಮ - ರಾಜ್ ಕುಮಾರ್ ವೆರ್ಕಾ ಫತೇಘರ್ ಸಾಹಿಬ್ - ಕುಲ್ಜೀತ್ ನಗ್ರಾ ಭಟಿಂಡಾ ಅರ್ಬನ್ - ಮನ್ಪ್ರೀತ್ ಸಿಂಗ್ ಬಾದಲ್, ಸಂಗ್ರೂರ್ - ವಿಜಯ್ ಇಂದರ್ ಸಿಂಗ್ಲಾ ಫತೇಘರ್ ಚುರಿಯನ್ - ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ
ಘೋಷಿಸಲಾದ ಇತರ ಸ್ಥಾನಗಳ ಪೈಕಿ, ಮುಖ್ಯಮಂತ್ರಿ ತನ್ನ ಸಹೋದರನಿಗೆ ಬಯಸಿದ್ದ ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಗುರುಪ್ರೀತ್ ಸಿಂಗ್ ಅವರನ್ನು ಕಣಕ್ಕೆ ಇಳಿಸಿದೆ. ಸಚಿವ ಬ್ರಹ್ಮ್ ಮೊಹಿಂದ್ರಾ ಅವರ ಪುತ್ರ ಮೋಹಿತ್ ಅವರು ಪಟಿಯಾಲ (ಗ್ರಾಮೀಣ) ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಅವರು ಗುರುದಾಸ್ಪುರದ ಖಾಡಿಯನ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕಳೆದ ವರ್ಷ ಎಎಪಿಯಿಂದ ಕಣಕ್ಕಿಳಿದಿದ್ದ ರೂಪಿಂದರ್ ಕೌರ್ ಮಾಲೌಟ್ ಕ್ಷೇತ್ರದ ಟಿಕೆಟ್ ಪಡೆದಿದ್ದಾರೆ. ಕಳೆದ ತಿಂಗಳು ಬಿಜೆಪಿ ಸೇರಲು ತೊರೆದ ಶಾಸಕ ಬಲ್ವಿಂದರ್ ಸಿಂಗ್ ಲಡ್ಡಿ ಆರು ದಿನಗಳ ನಂತರ ಕಾಂಗ್ರೆಸ್ಗೆ ಮರಳಿದರು. ಆದರೆ ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಲಡ್ಡಿ ಶ್ರೀ ಹರಗೋಬಿಂದಪುರದ (ಮೀಸಲು ಸ್ಥಾನ) ಶಾಸಕರಾಗಿದ್ದು, ಇದೀಗ ಮನ್ದೀಪ್ ಸಿಂಗ್ ರಂಗರ್ ನಂಗಲ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ನಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದ ಸುಖಪಾಲ್ ಸಿಂಗ್ ಖೈರಾ ಅವರಿಗೆ ಭೋಲಾತ್ ಟಿಕೆಟ್ ನೀಡಲಾಗಿದೆ. ಈಗಾಗಲೇ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ ಮತ್ತು ಎಎಪಿಯಿಂದ ಪ್ರಬಲ ಸವಾಲುಗಳನ್ನು ನಿರೀಕ್ಷಿಸಲಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ತಾನು ಸಂಪೂರ್ಣವಾಗಿ ಅಧಿಕಾರ ನಡೆಸುವ ಕೆಲವೇ ಕೆಲವು ರಾಜ್ಯಗಳ ಪೈಕಿ ಪಂಜಾಬ್ನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಪಂಜಾಬ್ನಲ್ಲಿ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.