ಪಂಜಾಬ್: ಪ್ರಧಾನಿ ದೀರ್ಘಾಯುಷ್ಯಕ್ಕಾಗಿ ಚರಂಜಿತ್ ಚನ್ನಿ ಪದ್ಯ ಪಠಣ
ಚಂಡೀಗಢ, ಜನವರಿ 14: ಪಂಜಾಬ್ ಭೇಟಿ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತೆ ಉಲ್ಲಂಘನೆ ಬಗ್ಗೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜನವರಿ 5ರ ಘಟನೆ ಬಳಿಕ ಮೊದಲ ಭೇಟಿಯಲ್ಲಿ ಪ್ರಧಾನಿಗೆ ದೀರ್ಘಾಯುಷ್ಯವನ್ನು ಕೋರಲು ಪದ್ಯವನ್ನು ಪಠಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊವಿಡ್-19 ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಮೋದಿಯವರ ವಿಡಿಯೋ ಸಂವಾದದ ಸಂದರ್ಭವನ್ನು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಪ್ರಧಾನಿಗೆ ಸಂದೇಶವನ್ನು ರವಾನಿಸಲು ಬಳಸಿಕೊಂಡರು. ಪಂಜಾಬ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದಿರುವ ಘಟನೆ ಬಗ್ಗೆ ಪಶ್ಚಾತ್ತಾಪ ಪಡುತ್ತೇನೆ ಎಂದು ಚನ್ನಿ ಮೋದಿಗೆ ತಿಳಿಸಿದ್ದಾರೆ.
ಪಂಜಾಬ್: ಪ್ರಧಾನಿ ಭದ್ರತಾ ವೈಫಲ್ಯದ ನೆಪದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರದ ಹುನ್ನಾರ; ಸಿಎಂ ಚನ್ನಿ
"ಪ್ರಳಯದವರೆಗೂ ನೀವು ಸುರಕ್ಷಿತವಾಗಿರಿ ಮತ್ತು ದೇವರೇ ಆ ಪ್ರಳಯವಾಗದಿರಲಿ," ಅವರಿಗೆ ದೀರ್ಘಾಯುಷ್ಯದ ಶುಭಾಶಯಗಳನ್ನು ವ್ಯಕ್ತಪಡಿಸಲು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಪದ್ಯವನ್ನು ಪಠಿಸಿದರು. ಕಳೆದ ಜನವರಿ 5ರಂದು ನಡೆದ ಘಟನೆಯ ನಂತರ ಚನ್ನಿ ಅವರು ಪ್ರಧಾನಿಯವರೊಂದಿಗೆ ನಡೆಸಿದ ಮೊದಲ ಸಂವಾದ ಇದಾಗಿದೆ. ಕಳೆದ ವಾರ ಮೋದಿ ಭೇಟಿಯ ಸಮಯದಲ್ಲಿ ಅವರ ಭದ್ರತೆಯ ಉಲ್ಲಂಘನೆಯ ಬಗ್ಗೆ ಬಿಜೆಪಿಗರು ಪಂಜಾಬ್ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪ್ರಧಾನಿಯವರಿಗೆ ಯಾವುದೇ ಬೆದರಿಕೆಯಿಲ್ಲ:
ಪಂಜಾಬ್ ಭೇಟಿ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತಾ ವೈಫಲ್ಯದ ಕುರಿತಾಗಿ ಈ ಹಿಂದೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಹಲವು ಬಾರಿ ವಿಷಾದ ವ್ಯಕ್ತಪಡಿಸಿದ್ದರು. ಅಲ್ಲದೇ ರಾಜ್ಯದಲ್ಲಿ ಪ್ರಧಾನಿಯವರಿಗೆ ಯಾವುದೇ ಬೆದರಿಕೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಕೆಲವೊಮ್ಮೆ ವಾಸ್ತವ ಅಂಶಗಳನ್ನು ಉಲ್ಲೇಖಿಸಿ ಲೇವಡಿಯನ್ನೂ ಸಹ ಮಾಡಿದ್ದರು.
ಏನಿದು ಪ್ರಧಾನಿ ಭದ್ರತಾ ವೈಫಲ್ಯ ಘಟನೆ?:
ಕಳೆದ ಜನವರಿ 5ರಂದು ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30-ಕಿಮೀ ದೂರದಲ್ಲಿ, ಪ್ರಧಾನ ಮಂತ್ರಿಯ ಬೆಂಗಾವಲು ಪಡೆ ಫ್ಲೈಓವರ್ ಅನ್ನು ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿರುವುದು ಕಂಡುಬಂದಿತ್ತು. ಈ ವೇಳೆ ಬಿಜಿಪಿ ಬಾವುಟ ಹಿಡಿದ ಕೆಲವು ಜನರು ಬಿಜೆಪಿ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುತ್ತಾ ಕಾರಿಗೆ ಅಡ್ಡ ಹಾಕಲು ಪ್ರಯತ್ನಿಸಿದ್ದರು. ಇದರಿಂದಾಗಿ 15 ರಿಂದ 20 ನಿಮಿಷಗಳವರೆಗೂ ಪ್ರಧಾನಿ ಮೋದಿಯವರು ಹೆದ್ದಾರಿಯಲ್ಲೇ ಸಿಲುಕಿಕೊಳ್ಳುವಂತಾಗಿತ್ತು.
ಹೆಲಿಕಾಪ್ಟರ್ ಬದಲಿಗೆ ರಸ್ತೆ ಮಾರ್ಗದಲ್ಲಿ ಸಂಚಾರ:
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳ ಕುರಿತು ಕೊನೆಕ್ಷಣದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಪಂಜಾಬ್ ಸರ್ಕಾರ ಆರೋಪಿಸಿತ್ತು. ವಿಧಾನಸಭೆ ಚುನಾವಣಾ ಪ್ರಚಾರದ ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ತೆರಳಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಾಯುಮಾರ್ಗದ ಬದಲಿಗೆ 111 ಕಿಲೋ ಮೀಟರ್ ದೂರದ ದಾರಿಯನ್ನು ರಸ್ತೆ ಮಾರ್ಗದ ಮೂಲಕ ಸಂಚರಿಸಲು ತೀರ್ಮಾನಿಸಲಾಯಿತು ಎಂದು ರಾಜ್ಯ ಸರ್ಕಾರ ಈ ಹಿಂದೆ ಘಟನೆ ಬಗ್ಗೆ ಉಲ್ಲೇಖಿಸಿತ್ತು. ಪ್ರಧಾನಮಂತ್ರಿ ಸಂಚಾರ ಮಾರ್ಗದ ಬಗ್ಗೆ ಮೊದಲೇ ಸೂಚನೆ ನೀಡಿದ್ದರೂ ಸಹ, ರಾಜ್ಯ ಸರ್ಕಾರ ಮತ್ತು ಪೊಲೀಸರು ಭದ್ರತಾ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.
ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ರಾಜಕೀಯ ಕಿತ್ತಾಟ:
ಪಂಜಾಬ್ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭದ್ರತಾ ವೈಫಲ್ಯದ ಘಟನೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರ ನಡುವೆ ರಾಜಕೀಯ ಪ್ರೇರಿತ ವಾಕ್ಸಮರ ನಡೆದಿದೆ.
ಪಂಜಾಬ್ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ. ಕಳೆದ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಗದ್ದುಗೆ ನೀಡಿದ್ದರು. 117 ಕ್ಷೇತ್ರಗಳಲ್ಲಿ ಕಾಂಗ್ರೆಸ್ 78 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಆಮ್ ಆದ್ಮಿ ಪಕ್ಷವು 20 ಕಡೆಗಳಲ್ಲಿ ವಿಜಯ ಪತಾಕೆ ಹಾರಿಸಿತ್ತು. ಶಿರೋಮಣಿ ಅಕಾಲಿ ದಳ 18 ಹಾಗೂ ಇತರರು ಎರಡು ಕಡೆಗಳಲ್ಲಿ ಗೆಲುವು ಸಾಧಿಸಿದ್ದರು.