ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಪ್ರಾರಂಭಿಸಿದ ಪಂಜಾಬ್ ಸಿಎಂ
ಚಂಡೀಗಢ, ಮಾರ್ಚ್ 23: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬುಧವಾರ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದ್ದಾರೆ. ಈ ಸಹಾಯವಾಣಿಯು ಲಂಚ ಕೇಳುವ ಅಥವಾ ಇತರ ದುಷ್ಕೃತ್ಯಗಳಲ್ಲಿ ತೊಡಗಿರುವ ಅಧಿಕಾರಿಗಳ ವೀಡಿಯೊಗಳನ್ನು ಅಪ್ಲೋಡ್ ಮಾಡಲು ಜನರಿಗೆ ಅನುವು ಮಾಡಿಕೊಡುತ್ತದೆ.
ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನದಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆ 9501200200 ಅನ್ನು ಆರಂಭ ಮಾಡಿದ್ದಾರೆ. ಇದನ್ನು "ಭ್ರಷ್ಟಾಚಾರ ವಿರೋಧಿ ಕ್ರಮ" ಎಂದು ಕರೆದಿದ್ದಾರೆ.
ಮಾರ್ಚ್ 16 ರಂದು ಖಟ್ಕರ್ ಕಲಾನ್ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭಗವಂತ್ ಮಾನ್, ಒಂದು ತಿಂಗಳೊಳಗೆ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೆಸೆಯಲು ಜನರ ಸಹಾಯ ಬೇಕು. ಜನರ ಬೆಂಬಲ ಅತ್ಯಗತ್ಯ, ಈ ಸಹಾಯವಾಣಿಯ ಮೂಲಕ ನೀವು ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಬಹುದಾಗಿದೆ ಎಂದು ಸಹಾಯವಾಣಿಯನ್ನು ಬಿಡುಗಡೆ ಮಾಡಿ ಹೇಳಿದ್ದಾರೆ.
"ಮಾರ್ಚ್ 23 ರಂದು ನಾನು ಫೋನ್ ಸಂಖ್ಯೆಯನ್ನು ಪ್ರಾರಂಭಿಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡಿದ್ದೇನೆ. ದನ್ನು ಭ್ರಷ್ಟಾಚಾರ ವಿರೋಧಿ ಆಕ್ಷನ್ ಲೈನ್ ಎಂದು ಕರೆಯಲಾಗುವುದು," ಎಂದು ಭವಗಂತ್ ಮಾನ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. "ಸಂಖ್ಯೆ 9501200200," ಎಂದು ಕೂಡಾ ತಿಳಿಸಿದ್ದಾರೆ.
ಅಧಿಕಾರಿಯಾಗಿದ್ದರೂ, ಸಚಿವರು ಅಥವಾ ಶಾಸಕರಾಗಿದ್ದರೂ ಕ್ರಮ ಎಂದ ಮಾನ್ ಯಾವುದೇ ಕೆಲಸಕ್ಕೆ ಲಂಚ ಅಥವಾ ಕಮಿಷನ್ಗೆ ಬೇಡಿಕೆಯಿರುವವರ ವೀಡಿಯೊಗಳನ್ನು ಈ ಸಂಖ್ಯೆಗೆ ಕಳುಹಿಸಿ ಎಂದು ಜನರಿಗೆ ಹೇಳಿದ ಮುಖ್ಯಮಂತ್ರಿ ಭಗವಂತ್ ಮಾನ್, "ಸಿಬ್ಬಂದಿಗಳು ಅದರ ಬಗ್ಗೆ ವಿಚಾರಣೆ ನಡೆಸುತ್ತಾರೆ. ಯಾರೇ ತಪ್ಪಿತಸ್ಥರು, ಅದು ಅಧಿಕಾರಿಯಾಗಿರಬಹುದು, ನಮ್ಮ ಸಚಿವರು ಅಥವಾ ಶಾಸಕರಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು," ಎಂದು ಭರವಸೆ ನೀಡಿದ್ದಾರೆ.
ಈ ನಂಬರ್ನಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಮಾತ್ರ ಹಂಚಿಕೊಳ್ಳಿ, ಬೇರೆ ಯಾವುದೇ ವಿಡಿಯೋ ಸಂದೇಶವನ್ನು ಕಳುಹಿಸಬೇಡಿ ಎಂದು ಜನರಿಗೆ ಈ ಸಂದರ್ಭದಲ್ಲೇ ಮುಖ್ಯಮಂತ್ರಿ ಭಗವಂತ್ ಮಾನ್ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪಂಜಾಬ್ ಜನರ ಬೆಂಬಲವನ್ನು ಕೋರಿದರು. "ಈ ಅಭಿಯಾನದಲ್ಲಿ, ನನಗೆ ಮೂರು ಕೋಟಿ ಪಂಜಾಬಿಗಳ ಬೆಂಬಲ ಬೇಕು. ನೀವು ಬೆಂಬಲಿಸಿದರೆ, ನಾವು ಪಂಜಾಬ್ ಅನ್ನು ಒಂದು ತಿಂಗಳೊಳಗೆ ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ," ಎಂದರು.
ಇದು ತನ್ನ ವೈಯಕ್ತಿಕ ವ್ಯಾಟ್ಸ್ಆಪ್ ಸಂಖ್ಯೆ ಎಂದ ಪಂಜಾಬ್ ಸಿಎಂ, "ತಮ್ಮ ಸರ್ಕಾರವು ಸ್ವಚ್ಛ ಮತ್ತು ಪಾರದರ್ಶಕ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಹುತಾತ್ಮರ ಕನಸುಗಳನ್ನು ನನಸಾಗಿಸಲು ನಮ್ಮ ಸರ್ಕಾರವು ಪ್ರತಿ ಮನೆಗೆ ಹುತಾತ್ಮರ ಸಂದೇಶವನ್ನು ತಲುಪಿಸಲಿದೆ," ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನವಾದ ಮಾರ್ಚ್ 23 ರಂದು ಭ್ರಷ್ಟಾಚಾರ-ವಿರೋಧಿ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭ ಮಾಡುತ್ತೇವೆ. ಅದು ನನ್ನ ವೈಯಕ್ತಿಕ ವ್ಯಾಟ್ಸ್ಆಪ್ ಸಂಖ್ಯೆ ಎಂದು ಕೂಡಾ ಹೇಳಿದರು.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಟ್ವೀಟ್ನಲ್ಲಿ, "ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಅರ್ಪಿಸಿದ ಮಹಾನ್ ಹುತಾತ್ಮರ ಕನಸುಗಳನ್ನು ನನಸಾಗಿಸುವ ಮೂಲಕ ಪಂಜಾಬ್ ಅನ್ನು ಭ್ರಷ್ಟಾಚಾರ ಮುಕ್ತ ಮತ್ತು ಸಮೃದ್ಧ ಪಂಜಾಬ್ ಮಾಡೋಣ" ಎಂದು ಹೇಳಿದ್ದಾರೆ. ಇನ್ನು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನವಾದ ಮಾರ್ಚ್ 23 ರಂದು ಪಂಜಾಬ್ ಸರ್ಕಾರ ರಜೆ ಘೋಷಿಸಿದೆ. (ಒನ್ಇಂಡಿಯಾ ಸುದ್ದಿ)