ನಿಮ್ಮಿಂದ ಆಗದಿದ್ದರೆ ಉಗ್ರನನ್ನು ನಾವೇ ಹಿಡಿಯುತ್ತೇವೆ: ಪಾಕ್ಗೆ ಅಮರಿಂದರ್ ತಪರಾಕಿ
ಚಂಡೀಗಢ, ಫೆಬ್ರವರಿ 19: ಅತ್ತ ಪಂಜಾಬಿನ ಕಾಂಗ್ರೆಸ್ ಸರ್ಕಾರದ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಪುಲ್ವಾಮಾ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಪರ ಬ್ಯಾಟಿಂಗ್ ನಡೆಸಿದ್ದರೆ, ಇನ್ನೊಂದೆಡೆ ಅವರ 'ಬಾಸ್' ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂಬ ಆರೋಪಕ್ಕೆ ಸಾಕ್ಷ್ಯ ನೀಡಿ ಎಂದು ಭಾರತವನ್ನು ಆಗ್ರಹಿಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅಮರಿಂದರ್ ಸಿಂಗ್ ತಪರಾಕಿ ನೀಡಿದ್ದಾರೆ.
ನಾವೇ ದಾಳಿ ಮಾಡಿದ್ದು ಅನ್ನೋದಕ್ಕೆ ಸಾಕ್ಷ್ಯ ಕೊಡಿ ಎಂದ ಪಾಕ್!
ದಾಳಿಯ ಸಂಚುಕೋರ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲಿಯೇ ಇದ್ದಾನೆ. ಒಂದು ವೇಳೆ ನಿಮ್ಮ ದೇಶಕ್ಕೆ ಉಗ್ರನನ್ನು ಹಿಡಿಯಲು ಆಗದೆ ಇದ್ದರೆ ನಾವೇ ನಿಮಗೆ ಹಿಡಿದುಕೊಡುತ್ತೇವೆ ಎಂದು ಅಮರಿಂದರ್ ವ್ಯಂಗ್ಯವಾಗಿ ಹೇಳಿದ್ದಾರೆ.
'ಮಾನ್ಯ ಇಮ್ರಾನ್ ಖಾನ್, ಬಹವಲ್ಪುರದಲ್ಲಿ ಕುಳಿತು ಐಎಸ್ಐ ಸಹಾಯದೊಂದಿಗೆ ದಾಳಿಗಳ ಸಂಚು ರೂಪಿಸುವ ಜೈಶ್ ಮುಖ್ಯಸ್ಥ ಮಸೂದ್ ಅಜರ್ ನಿಮ್ಮ ಬಳಿಯೇ ಇದ್ದಾನೆ. ಆತನನ್ನು ಅಲ್ಲಿಯೇ ನೀವು ಬಂಧಿಸಬಹುದು. ನಿಮ್ಮಿಂದ ಸಾಧ್ಯವಾಗದೆ ಇದ್ದರೆ ನಮಗೆ ತಿಳಿಸಿ. ನಿಮಗಾಗಿ ನಾವೇ ಅದನ್ನು ಮಾಡುತ್ತೇವೆ.
Dear @ImranKhanPTI you have Jaish chief Masood Azhar sitting in Bahawalpur & masterminding the attacks with ISI help. Go pick him up from there. If you can’t let us know, we’ll do it for you. BTW what has been done about the proofs of Mumbai’s 26/11 attack. Time to walk the talk. pic.twitter.com/Zct6I7QieY
— Capt.Amarinder Singh (@capt_amarinder) 19 February 2019
ಇರಲಿ, ಮುಂಬೈ 26/11ರ ದಾಳಿಗೆ ಸಂಬಂಧಿಸಿದಂತೆ ನೀಡಲಾದ ಪುರಾವೆಗಳು ಏನಾದವು? ಇದು ಮಾತುಕತೆಯನ್ನು ಮುರಿತು ನಡೆಯುವ ಸಮಯ' ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಪುಲ್ವಾಮಾ ದಾಳಿ: ಮತ್ತೆ ಮೋದಿ ಸರ್ಕಾರವನ್ನು ಹಳಿದ ಸಿಧು
ದಾಳಿ ನಡೆದು ಐದು ದಿನಗಳ ಬಳಿಕ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎನ್ನುವುದಕ್ಕೆ ಸಾಕ್ಷ್ಯ ನೀಡಿ ಎಂದು ಭಾರತಕ್ಕೆ ಸವಾಲು ಹಾಕಿದ್ದರು.