ಪಂಜಾಬ್ ಸಂಪುಟ ವಿಸ್ತರಣೆ: ನೂತನ ಸಚಿವರಾಗಿ 15 ಶಾಸಕರು ಪ್ರಮಾಣ ವಚನ ಸ್ವೀಕಾರ
ಚಂಡೀಗಢ, ಸೆಪ್ಟೆಂಬರ್ 26: ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಭಾನುವಾರ ಸಂಪುಟ ವಿಸ್ತರಣೆ ಮಾಡಿದ್ದು, 15 ಶಾಸಕರು ಪಂಜಾಬ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಏಳು ಹೊಸ ಮುಖಗಳು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಮೊದಲು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸಮ್ಮುಖದಲ್ಲಿ ಬ್ರಹ್ಮ ಮೊಹಿಂದ್ರಾ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಬಳಿಕ ಬಟಿಂಡಾ (ನಗರ) ವನ್ನು ಪ್ರತಿನಿಧಿಸುವ ಮನ್ ಪ್ರೀತ್ ಸಿಂಗ್ ಬಾದಲ್ ಮೊಹಿಂದ್ರಾ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆ ಬಳಿಕ ಫತೇಘರ್ ಚುರಿಯನ್ ಕ್ಷೇತ್ರವನ್ನು ಪ್ರತಿನಿಧಿಸುವ ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, ದಿನಾ ನಗರವನ್ನು ಪ್ರತಿನಿಧಿಸುವ ಅರುಣಾ ಚೌಧರಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಜ ಸಂಸಿಯನ್ನು ಪ್ರತಿನಿಧಿಸುವ ಸುಖಬಿಂದರ್ ಸಿಂಗ್ ಸರ್ಕಾರಿಯಾ ಮತ್ತು ವಿವಾದಿತ ಶಾಸಕ ಗುರ್ಜಿತ್ ಸಿಂಗ್ ರಾಣಾ ಕೂಡ ಪಂಜಾಬ್ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಪಂಜಾಬ್ ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ
ಕಪುರ್ತಲಾ ಪ್ರತಿನಿಧಿಸುವ ಶಾಸಕ ಗುರ್ಜಿತ್ ಸಿಂಗ್, ಪಂಜಾಬ್ ರಾಜ್ಯ ಸಂಪುಟಕ್ಕೆ ಸೇರ್ಪಡೆಯಾಗುವುದಕ್ಕೆ ಹಲವಾರು ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕ ಗುರ್ಜಿತ್ ಸಿಂಗ್ ಈ ಹಿಂದಿನ ಅಮರೀಂದರ್ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ 2018 ರಲ್ಲಿ ಅವರ ವಿರುದ್ದ ಮರಳು ಗಣಿಗಾರಿಕೆಯ ಹರಾಜಿನಲ್ಲಿ ಹಗರಣದ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. ಈಗ ಮತ್ತೆ ಹಗರಣದ ಆರೋಪವಿರು ಗುರ್ಜಿತ್ ಸಿಂಗ್ರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿರುವ ವಿವಾದಕ್ಕೆ ಕಾರಣವಾಗಿದೆ.
ಗುರ್ಜಿತ್ ಸಿಂಗ್ರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವುದನ್ನು ಆರು ಪಂಜಾಬ್ ಶಾಸಕರು ತೀವ್ರವಾಗಿ ವಿರೋಧಿಸಿದ್ದಾರೆ. ಹಾಗೆಯೇ ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮಹೀಂದರ್ ಸಿಂಗ್ ಕೂಡಾ ಗುರ್ಜಿತ್ ಸಿಂಗ್ರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಆರು ಶಾಸಕರು ಹಾಗೂ ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮಹೀಂದರ್ ಸಿಂಗ್ ಭಾನುವಾರ ಗುರ್ಜಿತ್ ಸಿಂಗ್ರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವುದನ್ನು ವಿರೋಧ ಮಾಡಿ ಕಾಂಗ್ರೆಸ್ ಪಂಜಾಬ್ ರಾಜ್ಯ ಮುಖ್ಯಸ್ಥ ನವ್ಜೋತ್ ಸಿಂಗ್ ಸಿಧು ಹಾಗೂ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿಗೆ ಪತ್ರ ಬರೆದಿದ್ದಾರೆ.
"ಹಗರಣದ ಆರೋಪ ಹೊತ್ತಿರುವ ಗುರ್ಜಿತ್ ಸಿಂಗ್ರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಬಾರದು," ಎಂದು ಈ ನಾಯಕರುಗಳು ಆಗ್ರ ಮಾಡಿದ್ದಾರೆ. ಆದರೂ ಈಗ ಗುರ್ಜಿಂತ್ ಸಿಂಗ್ರನ್ನು ಸಚಿವರನ್ನಾಗಿಸಿರುವುದು ಪಂಜಾಬ್ ರಾಜಕೀಯದಲ್ಲಿ ಮತ್ತೆ ಕಿಡಿ ಹತ್ತಿಸಲಿದೆಯೇ ಎಂಬ ಅನುಮಾನ ಮೂಡಿಸಿದೆ.
ಕರ್ನಾಟಕ, ಗುಜರಾತ್ ಮಾದರಿಯಲ್ಲೇ ಪಂಜಾಬ್ಗೂ ಅಚ್ಚರಿಯ ಸಿಎಂ
ಇನ್ನು ಮಲೆರ್ಕೋಟ್ಲಾ ಶಾಸಕಿ ರಜಿಯಾ ಸುಲ್ತಾನಾ, ಗಿಡ್ಡೇರ್ಬಾಹಾ ಶಾಸಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ನವಜೋತ್ ಸಿಂಗ್ ಸಿಧು ಆಪ್ತ ಪರ್ಗತ್ ಸಿಂಗ್, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಬಂಡಾಯವೆದ್ದವರ ಪೈಕಿ ಓರ್ವರಾದ ಪರ್ಗತ್ ಸಿಂಗ್, ರಾಜ್ ಕುಮಾರ್ ವರ್ಕಾ ಮತ್ತು ಸಂಗತ್ ಸಿಂಗ್ ಗಿಲ್ಜಿಯಾನ್, ಗುರ್ಕೀರತ್ ಕೊಟ್ಲಿ ಪಂಜಾಬ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಲವಾರು ತಿಂಗಳುಗಳಿಂದ ಪಂಜಾಬ್ನಲ್ಲಿ ನಾಯಕತ್ವದ ವಿಚಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಾರ್ಕಿಕ ಅಂತ್ಯ ಕಂಡಿತ್ತು. ತನ್ನ ರಾಜೀನಾಮೆಯ ಬಗ್ಗೆ ಮಾತನಾಡಿದ್ದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, "ನಾನು ರಾಜೀನಾಮೆ ನೀಡಲು ಹೋಗುತ್ತಿದ್ದೇನೆ ಎಂದು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಿಳಿಸಿದ್ದೇನೆ. ಇದು ಮೂರನೇ ಬಾರಿ ನಡೆಯುತ್ತಿದೆ. ನಾನು ಅವಮಾನಕ್ಕೆ ಒಳಗಾಗಿದ್ದೇನೆ. ಅವರು ಯಾರನ್ನು ನಂಬಬಲ್ಲರೋ ಅವರನ್ನು ಮುಖ್ಯಮಂತ್ರಿ ಮಾಡಬಹುದು. ಕಾಂಗ್ರೆಸ್ ಅಧ್ಯಕ್ಷೆ ಏನು ನಿರ್ಧಾರ ಮಾಡುತ್ತಾರೋ ಅದು ಸರಿ. ನಾನು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದೇನೆ, ನನ್ನ ಬೆಂಬಲತರನ್ನು ಭೇಟಿಯಾದ ಬಳಿಕ ನಾನು ನನ್ನ ಮುಂದಿನ ಜೀವನದ ರಾಜಕೀಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ," ಎಂದು ಹೇಳಿದ್ದರು. ಆ ಬಳಿಕ ಚರಂಜಿತ್ ಸಿಂಗ್ ಚನ್ನಿರನ್ನು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಗಿತ್ತು.
(ಒನ್ಇಂಡಿಯಾ ಸುದ್ದಿ)