ಸಿಬಿಐಗೆ 'ಗೇಟ್ಪಾಸ್' ನೀಡಿದ 9ನೇ ರಾಜ್ಯ ಪಂಜಾಬ್
ಚಂಡೀಗಡ, ನವೆಂಬರ್ 9: ರಾಜ್ಯದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಯಾವುದೇ ಪ್ರಕರಣದ ತನಿಖೆ ನಡೆಸಲು ನೀಡಲಾಗಿದ್ದ ಒಪ್ಪಿಗೆಯನ್ನು ಪಂಜಾಬ್ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ. ಈ ಮೂಲಕ ಕೆಲವೇ ತಿಂಗಳ ಅಂತರಗಳಲ್ಲಿ ಸಿಬಿಐಗೆ ನೀಡಿದ್ದ ಸಮ್ಮತಿಯನ್ನು ವಾಪಸ್ ಪಡೆದ ಒಂಬತ್ತನೇ ರಾಜ್ಯ ಎಂದೆನಿಸಿಕೊಂಡಿದೆ.
ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ತೆಗೆದುಕೊಂಡಿರುವ ಈ ನಿರ್ಧಾರವು ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಎನಿಸಿರುವ ಸಿಬಿಐಗೆ ಹಿನ್ನಡೆ ಉಂಟುಮಾಡಿದೆ. ನವೆಂಬರ್ 8ರಂದು ಪಂಜಾಬ್ ಸರ್ಕಾರದ ಗೆಜೆಟ್ನಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿ ದೆಹಲಿ ವಿಶೇಷ ಪೊಲೀಸ್ ದಳಕ್ಕೆ ನೀಡಲಾಗಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂದಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ.
ನಮ್ಮನ್ನು ಕೇಳದೆ ಒಳಗೆ ಬರುವಂತಿಲ್ಲ: ಸಿಬಿಐಗೆ ಮಹಾರಾಷ್ಟ್ರ ತಾಕೀತು!
ದೆಹಲಿ ಪೊಲೀಸ್ ವಿಶೇಷ ಅಧಿಕಾರ ಕಾಯ್ದೆ 1946ರ ಸೆಕ್ಷನ್ 6ರ ಅಡಿ ಪಂಜಾಬ್ ಸರ್ಕಾರವು ತನ್ನ ಅಧಿಕಾರವನ್ನು ಬಳಸಿಕೊಂಡು ಈ ನಿರ್ಧಾರ ತೆಗೆದುಕೊಂಡಿದೆ. ಅಧಿಸೂಚನೆ ಅನುಸಾರ ಸಿಬಿಐ ಇನ್ನು ಪಂಜಾಬ್ನಲ್ಲಿ ಯಾವುದೇ ಅಪರಾಧ ಅಥವಾ ಸೆಕ್ಷನ್ 3ರ ಅಡಿಯಲ್ಲಿನ ಅಪರಾಧ ವರ್ಗಗಳ ಪ್ರಕರಣದಿಂದ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ಪೂರ್ವಾನುಮತಿ ಪಡೆದುಕೊಳ್ಳಬೇಕಾಗಲಿದೆ.
ಆಂಧ್ರಪ್ರದೇಶಲ್ಲಿ ಚಂದ್ರಬಾಬು ನಾಯ್ಡು ಸರ್ಕಾರವು ಮೊದಲು ಸಿಬಿಐ ತನಿಖೆಯ ಅನುಮತಿಯನ್ನು ವಾಪಸ್ ಪಡೆದುಕೊಂಡಿತ್ತು. ಅದರ ಬಳಿಕ ಪಶ್ಚಿಮ ಬಂಗಾಳ ಕೂಡ ಸಾಮಾನ್ಯ ಸಮ್ಮತಿಯನ್ನು ರದ್ದುಗೊಳಿಸಿತ್ತು. ನಂತರ ತ್ರಿಪುರಾ ಮತ್ತು ಮಿಜೋರಾಂ ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದವು. ಇತ್ತೀಚೆಗೆ ಕೇರಳ, ಛತ್ತೀಸಗಡ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಜಾರ್ಖಂಡ್ ಕೂಡ ಸಿಬಿಐ ತನಿಖೆಯ ಸಾಮಾನ್ಯ ಅನುಮತಿಯನ್ನು ರದ್ದುಗೊಳಿಸಿದ್ದವು.