ಶೇ.100ರಷ್ಟು ಮಂದಿ ಲಸಿಕೆ ಪಡೆದರೆ ಆ ಗ್ರಾಮದ ಅಭಿವೃದ್ಧಿಗೆ 10 ಲಕ್ಷ ರೂ
ಚಂಡೀಗಢ, ಮೇ 18: ಪಂಜಾಬ್ ಸರ್ಕಾರವು ಪ್ರತಿ ಹಳ್ಳಿಗಳಿಗೂ ಕೊರೊನಾ ಲಸಿಕೆ ತಲುಪಿಸುವ ಅಭಿಯಾನವನ್ನು ಶುರು ಮಾಡಿದೆ.
ಈ ಅಭಿಯಾನದಲ್ಲಿ ಶೇ. 100% ಲಸಿಕೆ ಗುರಿ ಸಾಧಿಸುವ ಪ್ರತಿ ಹಳ್ಳಿಗೂ 10 ಲಕ್ಷ ರೂ.ಗಳ ವಿಶೇಷ ಅಭಿವೃದ್ಧಿ ಅನುದಾನ ನೀಡಲಾಗುವುದು ಎಂದು ಪಂಜಾಬ್ ಸರ್ಕಾರ ಮಂಗಳವಾರ ಪ್ರಕಟಿಸಿದೆ. ಕೋವಿಡ್ ಸೌಮ್ಯ ರೋಗ ಲಕ್ಷಣಗಳಿರುವ ಜನರು ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸಬೇಕು ಮತ್ತು ಅವರಿಗೆ ಲಸಿಕೆ ನೀಡುವಂತೆ ಸೂಚಿಸಿದರು.
ಸಾವಿನ ಅಪಾಯ: ಭಾರತೀಯರ ಉಸಿರು ಕಸಿಯುತ್ತಿರುವ ಕೊರೊನಾವೈರಸ್!
ತುರ್ತು ಕೋವಿಡ್ ಚಿಕಿತ್ಸೆಗಾಗಿ ಪಂಚಾಯತ್ ನಿಧಿಯಿಂದ ಗರಿಷ್ಠ 50,000 ರೂ. ವರೆಗೆ ಖರ್ಚು ಮಾಡಲು ಸರ್ಕಾರ ಈಗಾಗಲೇ ಸರ್ಪಂಚ್ ಗಳಿಗೆ ಅನುಮತಿ ನೀಡಿದೆ ಎಂದು ಸಿಎಂ ಹೇಳಿದರು. 2,000ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಮುಖ್ಯಸ್ಥರು ಮತ್ತು ಸದಸ್ಯರೊಂದಿಗೆ ಇಂದು ವರ್ಚುವಲ್ ಮೂಲಕ ಸಭೆ ನಡೆಸಿದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಕೋವಿಡ್ ವಿರುದ್ಧದ ಹೋರಾಟದಲ್ಲಿ ತಮ್ಮ ಗ್ರಾಮಗಳನ್ನು ಮುನ್ನಡೆಸುವಂತೆ ರಾಜ್ಯಾದ್ಯಂತ ಸರ್ಪಂಚ್ ಮತ್ತು ಪಂಚ್ ಗಳಿಗೆ ಮನವಿ ಮಾಡಿದರು.
ಭಾರತದಲ್ಲಿ ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 4,329 ರೋಗಿಗಳು ಉಸಿರು ನಿಲ್ಲಿಸಿದ್ದು, ಸಾವಿನ ಸಂಖ್ಯೆ 2,78,719ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಒಂದೇ ದಿನ 2,63,533 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 4,22,436 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಭಾರತದಲ್ಲಿ ಒಟ್ಟು 2,52,28,996 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,15,96,512 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 2,78,719 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 33,53,765 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.