ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು: ನಾನು ರಾಹುಲ್ ಗಾಂಧಿ, ಪ್ರಿಯಾಂಕಾ ಪರ ಎಂದ ಸಿಧು!
ಚಂಡೀಘರ್, ಅಕ್ಟೋಬರ್ 2: ಪಂಜಾಬ್ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಆತಂರಿಕ ಬಿಕ್ಕಟ್ಟಿನಿಂದ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿರುವುದು ಗೊತ್ತಿರುವ ವಿಷಯ. ಈ ಮಧ್ಯೆ ರಾಜ್ಯದಲ್ಲಿ ಯಾವುದೇ ರಾಜಕೀಯ ಸ್ಥಾನವಿರಲಿ ಅಥವಾ ಇಲ್ಲದಿರಲಿ ನಾನು ಯಾವಾಗಲೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪರವಾಗಿ ಇರುತ್ತೇನೆ ಎಂದು ಸಿಧು ಘೋಷಿಸಿದ್ದಾರೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜೀನಾಮೆಯು ಕಳೆದ ತಿಂಗಳು ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟಿಗೆ ಕಾರಣವಾಯಿತು. ಕ್ಯಾಪ್ಟನ್ ಸಿಂಗ್ ಜೊತೆಗಿನ ಹಗೆತನದ ಮಧ್ಯೆ ಗಾಂಧಿ ಕುಟುಂಬದ ಬೆಂಬಲ ಪಡೆದ ನವಜೋತ್ ಸಿಂಗ್ ಸಿಧು, "ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ತತ್ವಗಳನ್ನು ಎತ್ತಿಹಿಡಿಯುವುದಾಗಿ" ಪ್ರತಿಜ್ಞೆ ಮಾಡಿದ್ದಾರೆ.
"ಗಾಂಧೀಜಿ ಮತ್ತು ಶಾಸ್ತ್ರೀ ಜೀಯವರ ತತ್ವ ಸಿದ್ಧಾಂತಗಳನ್ನು ಎತ್ತಿ ಹಿಡಿಯಬೇಕಿದೆ. ಹುದ್ದೆ ಇರಲಿ ಅಥವಾ ಹುದ್ದೆ ಇಲ್ಲದಿರಲಿ ನಾವು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಪರವಾಗಿ ನಿಲ್ಲುತ್ತೇವೆ. ಎಲ್ಲರೀತಿಯ ನಕಾರಾತ್ಮಕ ಶಕ್ತಿಗಳನ್ನು ಬಳಸಿಕೊಂಡು ನನ್ನನ್ನು ಸೋಲಿಸಲು ಪ್ರಯತ್ನಿಸಲಿ, ಸಕಾರಾತ್ಮಕ ಅಂಶಗಳು ಪಂಜಾಬ್ ಅನ್ನು ಗೆಲ್ಲಿಸುತ್ತದೆ. ಪಂಜಾಬಿಯತ್ ಗೆಲ್ಲುತ್ತಾರೆ, ಪ್ರತಿಯೊಬ್ಬ ಪಂಜಾಬಿಯು ಗೆಲ್ಲುತ್ತಾರೆ," ಎಂದು ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಘಟಕದ ಅಧ್ಯಕ್ಷರಾಗಿ ಸಿಧು ಮುಂದುವರಿಕೆ?:
ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಈ ವಿಷಯದಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿತ್ತು. ಇದಕ್ಕೂ ಮೊದಲು ಪಂಜಾಬ್ ಪೊಲೀಸ್ ಮುಖ್ಯಸ್ಥ ಮತ್ತು ಅಡ್ವೊಕೇಟ್-ಜನರಲ್ ಹುದ್ದೆಗಳನ್ನು ಒಳಗೊಂಡಂತೆ ಹೊಸ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮಾಡಿದ ಕೆಲವು ನೇಮಕಾತಿಗಳಿಂದ ಸಿಧು ಕೋಪಗೊಂಡಿದ್ದರು ಎಂದು ವರದಿಯಾಗಿತ್ತು.
ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಸಂದೇಶ:
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ನವಜೋತ್ ಸಿಂಗ್ ಸಿಧು ಹೈಕಮಾಂಡ್ ನಾಯಕರಿಗೆ ವಿಡಿಯೋ ಸಂದೇಶವೊಂದನ್ನು ರವಾನಿಸಿದ್ದರು. "ನನ್ನ ಕೊನೆಯುಸಿರು ಇರುವವರೆಗೂ ಸತ್ಯಕ್ಕಾಗಿ ನಾನು ಹೋರಾಟ ಮಾಡುತ್ತೇನೆ," ಎಂದು ಸಿಧು ಹೇಳಿದ್ದರು. "ಇದು ನನ್ನ ವೈಯಕ್ತಿಕ ಹೋರಾಟವಲ್ಲ, ಬದಲಿಗೆ ತತ್ವಗಳ ಹೋರಾಟ. ನಾನು ತತ್ವಗಳಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಕಳಂಕಿತರನ್ನು ಮರಳಿ ಮಂತ್ರಿ ಸ್ಥಾನಕ್ಕೆ ಕರೆ ತರುವುದನ್ನು ನಾನು ಒಪ್ಪುವುದಿಲ್ಲ," ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದರು.
ಪಂಜಾಬ್ ಸಚಿವ ಸಂಪುಟದಲ್ಲಿನ ಬದಲಾವಣೆಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ನವಜೋತ್ ಸಿಂಗ್ ಸಿಧು, ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಕ್ಕೆ ಸಂಬಂಧಿಸಿದ ಪತ್ರವನ್ನು ಟ್ವೀಟ್ ಮಾಡಿದ್ದರು.
"ರಾಜಿ ಮಾಡಿಕೊಳ್ಳುವುದರ ಮೂಲಕ ಮನುಷ್ಯನ ಪಾತ್ರ ಕುಸಿಯಲು ಆರಂಭವಾಗುತ್ತದೆ. ಪಂಜಾಬ್ನ ಭವಿಷ್ಯ ಮತ್ತು ಪಂಜಾಬ್ನ ಕಲ್ಯಾಣದ ವಿಷಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ, ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ," ಎಂದು ಎಐಸಿಸಿ ವಕ್ತಾರೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ನವಜೋತ್ ಸಿಧು ಉಲ್ಲೇಖಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಸಿಧು ರಾಜೀನಾಮೆ ಹಿಂದಿನ ಕಾರಣ?:
ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮಾಡಿದ ಸಚಿವ ಸಂಪುಟದಲ್ಲಿನ ಬದಲಾವಣೆಗಳ ಬಗ್ಗೆ ಸಿಧು ತೀವ್ರ ಅಸಮಾಧಾನ ಹೊಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಕೆಲವು ನಿರ್ಧಾರಗಳ ವಿಷಯದಲ್ಲಿ ನವಜೋತ್ ಸಿಂಗ್ ಸಿಧು "ಸೂಪರ್ ಸಿಎಂ" ರೀತಿಯಲ್ಲಿ ವರ್ತಿಸುತ್ತಿದ್ದರು, ಆದರೆ ಇತ್ತೀಚಿಗೆ ತೆಗೆದುಕೊಂಡ ಸರ್ಕಾರ ನೇಮಕಾತಿ ಮತ್ತು ಸಂಪುಟ ರಚನೆಯಲ್ಲಿ ಸಿಧುರನ್ನು ತೀವ್ರವಾಗಿ ನಿರ್ಲಕ್ಷಿಸಲಾಗಿತ್ತು ಎಂದು ವರದಿಯಾಗಿದೆ. ಅದರಲ್ಲೂ "ಸಕ್ರಿಲೇಜ್" ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾದ ಪ್ರಮುಖ ಹುದ್ದೆಗಳ ಬಗ್ಗೆ ಸಿಧು ಕೋಪಗೊಂಡಿದ್ದರು ಎಂದು ಗೊತ್ತಾಗಿದೆ.
ಒಂದು ಫೋನ್ ಸಂಭಾಷಣೆ ಬಳಿಕ ಯು-ಟರ್ನ್:
ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ನಡುವಿನ ಒಂದು ಫೋನ್ ಸಂಭಾಷಣೆಯು ನಿರ್ಧಾರವನ್ನು ಬದಲಿಸುವಂತೆ ಮಾಡಿದೆ. "ಕಾಂಗ್ರೆಸ್ ನಾಯಕತ್ವ ನವಜೋತ್ ಸಿಧುರನ್ನು ಅರ್ಥಮಾಡಿಕೊಂಡಿದೆ. ಸಿಧು ಕಾಂಗ್ರೆಸ್ ನಾಯಕತ್ವದ ಪರಿಧಿಯನ್ನು ಮೀರಿಲ್ಲ. ಕಾಂಗ್ರೆಸ್ ಮತ್ತು ಅವರ ನಾಯಕತ್ವದ ಬಗ್ಗೆ ಕ್ಯಾರೇ ಎನ್ನದಂತೆ ವರ್ತಿಸುವುದಕ್ಕೆ ಅವರು ಅಮರೀಂದರ್ ಸಿಂಗ್ ಅಲ್ಲ," ಎಂದು ನವಜೋತ್ ಸಿಂಗ್ ಸಿಧು ಸಲಹೆಗಾರರು ಹೇಳಿದ್ದಾರೆ.
ಕಳೆದ ಬುಧವಾರ ಮಾತನಾಡಿದ್ದ ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ, ಯಾವುದೇ ನೇಮಕಾತಿಯಲ್ಲಿ ಯಾರಾದರೂ ಆಕ್ಷೇಪಣೆ ಹೊಂದಿದ್ದರೆ, ನಾನು ಆ ಬಗ್ಗೆ ಕಠಿಣ ನಿಲುವು ಹೊಂದಿಲ್ಲ, ನನಗೆ ಅಹಂ ಮತ್ತು ಜಗಳಗಳಿಲ್ಲ. ನಾನು ಅವರಿಗೆ ಪಕ್ಷದ ಸರ್ವೋಚ್ಚ ನಾಯಕ ಎಂದು ತಿಳಿದುಕೊಂಡಿದ್ದೇನೆ, ಮಾತನಾಡೋಣ ಬನ್ನಿ," ಎಂದು ಆಹ್ವಾನ ನೀಡಿದ್ದರು.