'ಚಂಡೀಗಢದಲ್ಲಿರುವ ಪರಮ್ ಬೀರ್ ಸಿಂಗ್, ಶೀಘ್ರವೇ ತನಿಖೆಗೆ ಹಾಜರು'
ಮುಂಬೈ ನವೆಂಬರ್ 24: ಸುಲಿಗೆ ಪ್ರಕರಣದ ಘೋಷಿತ ಅಪರಾಧಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಚಂಡೀಗಢದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಶೀಘ್ರದಲ್ಲೇ ತಾವು ಮುಂಬೈನಲ್ಲಿ ಅವರ ವಿರುದ್ಧದ ಪ್ರಕರಣಗಳ ತನಿಖೆಯಲ್ಲಿ ಭಾಗಿಯಾಗುವುದಾಗಿ ಹೇಳಿಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ನಾಪತ್ತೆಯಾಗಿರುವ ಪರಮ್ ಬೀರ್ ಸಿಂಗ್ ವಿರುದ್ಧ ಮುಂಬೈ ಮತ್ತು ಥಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಸೋಮವಾರ ಸುಪ್ರೀಂ ಕೋರ್ಟ್ ಪರಮ್ ಬೀರ್ ಸಿಂಗ್ ಅವರಿಗೆ ಸುಲಿಗೆ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ನೀಡಿತ್ತು. ಜೊತೆಗೆ ಪರಮ್ ಬೀರ್ ಸಿಂಗ್ ತನಿಖೆಗೆ ಹಾಜರಾಗುವಂತೆ ಸೂಚಿಸಿತ್ತು.
ವಿಚಾರಣೆಯ ಸಂದರ್ಭದಲ್ಲಿ ಪರಮ್ ಬೀರ್ ಸಿಂಗ್ ಪರ ವಕೀಲರು ಅವರು ದೇಶದಲ್ಲೇ ಇದ್ದಾರೆ ಎಂದು ಹೇಳಿದ್ದಾರೆ. "ಅವರು ಪರಾರಿಯಾಗಲು ಬಯಸುವುದಿಲ್ಲ. ಅವರು ಓಡಿಹೋಗಲು ಬಯಸುವುದಿಲ್ಲ. ಆದರೆ ಸಮಸ್ಯೆ ಏನೆಂದರೆ ಅವರು ಮಹಾರಾಷ್ಟ್ರಕ್ಕೆ ಪ್ರವೇಶಿಸಿದ ತಕ್ಷಣ ಅವರ ಜೀವಕ್ಕೆ ಬೆದರಿಕೆ ಇದೆ" ಎಂದು ಸಿಂಗ್ ಪರ ವಕೀಲರು ಹೇಳಿದ್ದಾರೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಎಲ್ಲಿ?
ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಮುಜುಗರ ತಂದ 100 ಕೋಟಿ ರೂ. ಹಫ್ತಾ ವಸೂಲಿ ಪ್ರಕರಣದ ಕೇಂದ್ರ ಬಿಂದುವಾಗಿದ್ದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ನಾಪತ್ತೆಯಾಗಿದ್ದಾರೆ. 100 ಕೋಟಿ ಹಫ್ತಾ ವಸೂಲಿ ಮಾಡಲು ಇಲಾಖೆಗೆ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರಿಂದ ಸೂಚನೆ ಬಂದಿತ್ತು ಎಂದು ಗಂಭೀರ ಆರೋಪ ಮಾಡಿದ್ದ ಪರಮ್ ಬೀರ್ ಸಿಂಗ್, ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಮಹಾರಾಷ್ಟ್ರ ವಿಕಾಸ್ ಅಘಾಡಿಯಲ್ಲೂ ಈ ಪತ್ರ ಸಂಚಲನ ಮೂಡಿಸಿತ್ತು. ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಪೋಟಕ ವಾಹನ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಪರಮ್ ಬೀರ್ ಸಿಂಗ್ ಅವರನ್ನು ಹುಡುಕಲಾಗುತ್ತಿದೆ.
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಮತ್ತು ಉಳಿದ ಇಬ್ಬರನ್ನು "ಘೋಷಿತ ಅಪರಾಧಿಗಳು" ಎಂದು ಪ್ರಕಟಿಸಲು ಕೋರಿ ಮುಂಬೈ ಪೊಲೀಸರು ಶನಿವಾರ ನಗರದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಿಂಗ್ ಹಾಗೂ ಇತರ ಇಬ್ಬರು ಆರೋಪಿಗಳಾದ ವಿನಯ್ ಸಿಂಗ್ ಅಲಿಯಾಸ್ ಬಬ್ಲು, ಅಮಾನತುಗೊಂಡ ಪೋಲೀಸ್ ರಿಯಾಜ್ ಭಾಟಿ ವಿರುದ್ಧ ಅರ್ಜಿ ಸಲ್ಲಿಸಲಾಗಿತ್ತು. ಹೋಟೆಲ್ ಉದ್ಯಮಿ ಬಿಮಲ್ ಅಗರ್ವಾಲ್ ನೀಡಿದ ದೂರಿನ ಆಧಾರದ ಮೇಲೆ ಈ ಮೂವರು ಹಾಗೂ ವಜಾಗೊಂಡ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತಮ್ಮಿಂದ 11 ಲಕ್ಷ ಮೌಲ್ಯದ ನಗದು ಮತ್ತು ವಸ್ತುಗಳನ್ನು ಸಿಂಗ್ ಮತ್ತು ವಾಜೆ ಸುಲಿಗೆ ಮಾಡಿದ್ದಾರೆ ಎಂದು ಅಗರ್ವಾಲ್ ಆರೋಪಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ವಾಜೆ ಅವರನ್ನು ನ. 15ರವರೆಗೆ ಕ್ರೈಂ ಬ್ರಾಂಚ್ ವಶಕ್ಕೆ ಒಪ್ಪಿಸಲಾಗಿದೆ.
ಇತ್ತೀಚೆಗಷ್ಟೇ ಮುಂಬೈ ನ್ಯಾಯಾಲಯ ಈ ಮೂವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ವಾರೆಂಟ್ ಜಾರಿಗಾಗಿ ಕ್ರೈಂ ಬ್ರಾಂಚ್ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿತ್ತು. ಅಧಿಕಾರಿಗಳು ಮೂವರೂ ಆರೋಪಿಗಳ ವಿಳಾಸಕ್ಕೆ ಭೇಟಿ ನೀಡಿದ್ದರೂ ಅವರ ಪತ್ತೆಯಾಗಿರಲಿಲ್ಲ. ಆರೋಪಿಗಳು ಮನೆಗಳಿಗೆ ಬಂದಿಲ್ಲ ಅವರು ಎಲ್ಲಿದ್ದಾರೋ ತಿಳಿದು ಬಂದಿಲ್ಲ ಎಂಬ ಪ್ರತಿಕ್ರಿಯೆ ಪೊಲೀಸರಿಗೆ ದೊರೆತಿತ್ತು. ಮಲಬಾರ್ ಹಿಲ್ ಪ್ರದೇಶದಲ್ಲಿರುವ ಸಿಂಗ್ ಅವರ ಮನೆಗೆ ಮುಂಬೈ ಪೊಲೀಸರು ಭೇಟಿ ನೀಡಿದಾಗ ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಅಡುಗೆಯವರು ʼಸಿಂಗ್ ಮತ್ತು ಅವರ ಕುಟುಂಬ ಸದಸ್ಯರು ಕಳೆದ ಮೂರು ತಿಂಗಳಿನಿಂದ ಅಲ್ಲಿ ವಾಸಿಸುತ್ತಿಲ್ಲ. ಅವರು ಎಲ್ಲಿದ್ದಾರೋ ತಿಳಿದಿಲ್ಲ. ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂಬುದಾಗಿ ತಿಳಿಸಿದ್ದರು. ಹಲವು ಜಾಮೀನು ರಹಿತ ವಾರೆಂಟ್ಗಳನ್ನು ಹೊರಡಿಸಲಾಗಿದ್ದರೂ ಮೂವರೂ ಆರೋಪಿಗಳು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 82ರ ಪ್ರಕಾರ ಮೂವರನ್ನೂ ʼತಲೆಮರೆಸಿಕೊಂಡಿದ್ದಾರೆʼ ಎಂಬುದಾಗಿ ಘೋಷಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.