ಸೋನಿಪತ್ ಆಸ್ಪತ್ರೆಯಲ್ಲಿರಿಸಿದ್ದ ರೈತನ ಮೃತ ದೇಹವನ್ನು ಕಿತ್ತು ತಿಂದ ಇಲಿಗಳು
ಚಂಡೀಗಢ,ಫೆಬ್ರವರಿ 19: ದೆಹಲಿ ಗಡಿಯಲ್ಲಿ ಪ್ರತಿಭಟನೆ ವೇಳೆ ಮೃತಪಟ್ಟಿದ್ದ ರೈತನ ಮೃತದೇಹವನ್ನು ಆಟೊಪ್ಸಿಗೆಂದು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇಲಿಗಳು ದೇಹವನ್ನು ತಿಂದಿರುವ ಘಟನೆ ಬೆಳಕಿಗೆ ಬಂದಿದೆ.
70 ವರ್ಷದ ರೈತ ಹೃದಯಾಘಾತದಿಂದ ಮೃತಪಟ್ಟಿದ್ದರು. ಆಸ್ಪತ್ರೆಗೆ ಈ ಬೇಜಾವಾಬ್ದಾರಿತನಕ್ಕೆ ರೈತರು,ಗ್ರಾಮಸ್ಥರು ಆಕ್ರೋಶ ವ್ಯಯಕ್ತಪಡಿಸಿದ್ದಾರೆ.
ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ರಾಜ್ಯದಲ್ಲಿ ರೈತ ಸಮಾವೇಶ: ಚುಕ್ಕಿ ನಂಜುಂಡಸ್ವಾಮಿ
ಪ್ರತಿಭಟನಾ ಸ್ಥಳದ ಸಮೀಪವಿರುವ ತನ್ನ ಹಳ್ಳಿಯಲ್ಲಿ ವಯೋವೃದ್ಧ ರಾಜೇಂದ್ರ ಸರೋಹ್ ಬುಧವಾರ ಮೃತಪಟ್ಟಿದ್ದರು. ಸಾವಿಗೆ ಕಾರಣವನ್ನು ಖಚಿತಪಡಿಸಲು ಗುರುವಾರ ಶವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು.
ಶವವನ್ನು ಫ್ರೀಜರ್ನಿಂದ ಹೊರತೆಗೆದಾಗ ಮುಖ ಹಾಗೂ ಕಾಲಿನ ಭಾಗವನ್ನು ಇಲಿಗಳು ತಿಂದಿರುವುದು ಕಂಡುಬಂದಿದೆ.
ಸೋನಿಪತ್ ನ ಬೈಯನ್ ಪುರ ಗ್ರಾಮದ ರೈತ ರಾಜೇಂದ್ರ ಈಗ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬುಧವಾರ ರಾತ್ರಿ ಅವರಿಗೆ ಏಕಾಏಕಿ ಅನಾರೋಗ್ಯ ಕಾಡಿದ್ದು,ಸೋನಿಪತ್ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಆಸ್ಪತ್ರೆಗೆ ತಲುಪುವಾಗ ಅವರು ಮೃತಪಟ್ಟಿದ್ದರು, 3 ತಿಂಗಳ ಹಿಂದೆ ರೈತರ ಪ್ರತಿಭಟನೆ ಆರಂಭವಾದ ಬಳಿಕ ಕುಂಡ್ಲಿಯಲ್ಲಿ ಸಂಭವಿಸಿರುವ 19ನೇ ಸಾವು ಇದಾಗಿದೆ.
ರೈತನ ಸಾವಿಗೆ ನಿಖರ ಕಾರಣ ತಿಳಿಯಲು ಶವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು,ಮೃತದೇಹವನ್ನು ಆಸ್ಪತ್ರೆಯ ಶವಾಗಾರದ ಪ್ರೀಜರ್ನಲ್ಲಿ ಇಡಲಾಗಿತ್ತು. ಗುರುವಾರ ಮೃತದೇಹವನ್ನು ಫ್ರೀಜರ್ನಿಂದ ಹೊರ ತೆಗೆದಾಗ ದೇಹವನ್ನು ಇಲಿ ತಿಂದಿರುವುದು ಕಂಡುಬಂದಿದೆ.
ಘಟನೆಯ ತನಿಖೆಗಾಗಿ ನಾವು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ, ಅದರ ವರದಿಯ ಮೇರೆಗೆ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.