ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು: ಚಿಂತೆ ಬೇಕಿಲ್ಲ ಎಲ್ಲವೂ ಸರಿಯಾಗಲಿದೆ ಎಂದ ಕೆ ಸಿ ವೇಣುಗೋಪಾಲ್
ಚಂಡೀಘರ್, ಸೆಪ್ಟೆಂಬರ್ 29: ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ನವಜೋತ್ ಸಿಂಗ್ ಸಿಧು ಪತ್ರವನ್ನು "ಭಾವನಾತ್ಮಕ ಪ್ರತಿಕ್ರಿಯೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ. ಚಿಂತೆ ಮಾಡುವುದಕ್ಕೆ ಏನೂ ಇಲ್ಲ, ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಗೆ ನಾಲ್ಕು ತಿಂಗಳಷ್ಟೇ ಬಾಕಿ ಇರುವಂತೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಸಲ್ಲಿಸಿರುವುದು ಪಕ್ಷದೊಳಗೆ ಹೊಸ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರಿಂದ ಮನವೊಲಿಕೆಯ ಕಸರತ್ತು ಜೋರಾಗಿ ನಡೆಯುತ್ತಿದೆ.
"ಸತ್ಯಕ್ಕಾಗಿ ನನ್ನ ಹೋರಾಟ"; ಕಾಂಗ್ರೆಸ್ಸಿಗೆ ನವಜೋತ್ ಸಿಧು ವಿಡಿಯೋ ಸಂದೇಶ
ಮೂಲಗಳ ಪ್ರಕಾರ, ನವಜೋತ್ ಸಿಂಗ್ ಸಿಧು ನೀಡಿರುವ ರಾಜೀನಾಮೆಯನ್ನು ಹೈಕಮಾಂಡ್ ನಾಯಕರು ನಿರಾಕರಿಸಿದ್ದಾರೆ ಎಂದು ಗೊತ್ತಾಗಿದೆ. ಸಿಧು ರಾಜೀನಾಮೆಯನ್ನು ತಿರಸ್ಕರಿಸಿರುವ ಹೈಕಮಾಂಡ್ ನಾಯಕರು ರಾಜ್ಯ ಮಟ್ಟದಲ್ಲಿಯೇ ಬಿಕ್ಕಟ್ಟು ಬಗೆಹರಿಸಿಕೊಳ್ಳುವಂತೆ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಇದರ ಹೊರತಾಗಿಯೂ ಕಾಂಗ್ರೆಸ್ ಕಾದುನೋಡುವ ತಂತ್ರ ಅನುಸರಿಸುತ್ತಿದೆ ಎಂದು ಹೇಳಲಾಗುತ್ತಿದೆ.
ರಾಜೀನಾಮೆ ಹಿಂಪಡೆಯುವಂತೆ ನಾಯಕರ ಒತ್ತಾಯ:
ತಾವು ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಹೈಕಮಾಂಡ್ ನಾಯಕರು ನವಜೋತ್ ಸಿಂಗ್ ಸಿಧುರಿಗೆ ಒತ್ತಾಯಿಸಿದ್ದಾರೆ. ಆಂತರಿಕ ಮಟ್ಟದಲ್ಲಿ ಸ್ವತಃ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಿಧು ಜೊತೆಗೆ ಚರ್ಚಿಸಿ ತಮ್ಮ ನಿರ್ಧಾರ ಬದಲಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಬಗ್ಗೆ ಪತ್ರ:
ಪಂಜಾಬ್ ಸಚಿವ ಸಂಪುಟದಲ್ಲಿನ ಬದಲಾವಣೆಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ನವಜೋತ್ ಸಿಂಗ್ ಸಿಧು, ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಕ್ಕೆ ಸಂಬಂಧಿಸಿದ ಪತ್ರವನ್ನು ಟ್ವೀಟ್ ಮಾಡಿದ್ದರು. "ರಾಜಿ ಮಾಡಿಕೊಳ್ಳುವುದರ ಮೂಲಕ ಮನುಷ್ಯನ ಪಾತ್ರ ಕುಸಿಯಲು ಆರಂಭವಾಗುತ್ತದೆ. ಪಂಜಾಬ್ನ ಭವಿಷ್ಯ ಮತ್ತು ಪಂಜಾಬ್ನ ಕಲ್ಯಾಣದ ವಿಷಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ, ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ," ಎಂದು ಎಐಸಿಸಿ ವಕ್ತಾರೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ನವಜೋತ್ ಸಿಧು ಉಲ್ಲೇಖಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸತ್ಯಕ್ಕಾಗಿ ನನ್ನ ಹೋರಾಟ ಎಂಬ ವಿಡಿಯೋ ಸಂದೇಶ:
ಪಂಜಾಬ್ನಲ್ಲಿ ಕಾರ್ಯಚೂಚಿ ಹಾಗೂ ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ನವಜೋತ್ ಸಿಂಗ್ ಸಿಧು ತಮ್ಮ ವಿಡಿಯೋ ಸಂದೇಶದಲ್ಲಿ ಸಾರಿ ಹೇಳಿದ್ದಾರೆ. ನನ್ನ ಕೊನೆಯ ಉಸಿರು ಇರುವವರೆಗೂ ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಸಿಧು ರಾಜೀನಾಮೆ ಹಿಂದಿನ ಕಾರಣ?:
ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮಾಡಿದ ಸಚಿವ ಸಂಪುಟದಲ್ಲಿನ ಬದಲಾವಣೆಗಳ ಬಗ್ಗೆ ಸಿಧು ತೀವ್ರ ಅಸಮಾಧಾನ ಹೊಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಕೆಲವು ನಿರ್ಧಾರಗಳ ವಿಷಯದಲ್ಲಿ ನವಜೋತ್ ಸಿಂಗ್ ಸಿಧು "ಸೂಪರ್ ಸಿಎಂ" ರೀತಿಯಲ್ಲಿ ವರ್ತಿಸುತ್ತಿದ್ದರು, ಆದರೆ ಇತ್ತೀಚಿಗೆ ತೆಗೆದುಕೊಂಡ ಸರ್ಕಾರ ನೇಮಕಾತಿ ಮತ್ತು ಸಂಪುಟ ರಚನೆಯಲ್ಲಿ ಸಿಧುರನ್ನು ತೀವ್ರವಾಗಿ ನಿರ್ಲಕ್ಷಿಸಲಾಗಿತ್ತು ಎಂದು ವರದಿಯಾಗಿದೆ. ಅದರಲ್ಲೂ "ಸಕ್ರಿಲೇಜ್" ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾದ ಪ್ರಮುಖ ಹುದ್ದೆಗಳ ಬಗ್ಗೆ ಸಿಧು ಕೋಪಗೊಂಡಿದ್ದರು ಎಂದು ಗೊತ್ತಾಗಿದೆ.
ಸಿಧು ಬೆಂಬಲಿಗರಿಂದ ರಾಜೀನಾಮೆ ಪರ್ವ:
ಪಂಜಾಬ್ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎರಡೇ ದಿನಗಳಲ್ಲಿ ಮಲೆರ್ಕೋಟ್ಲಾ ಶಾಸಕಿ ರಜಿಯಾ ಸುಲ್ತಾನಾ ಮಂಗಳವಾರ "ನವಜೋತ್ ಸಿಂಗ್ ಸಿಧುಗೆ ಬೆಂಬಲವಾಗಿ" ರಾಜೀನಾಮೆ ನೀಡಿದ್ದಾರೆ. "ಸಿದ್ದು ಸಾಹೆಬ್ ತತ್ವಗಳ ವ್ಯಕ್ತಿ. ಅವರು ಪಂಜಾಬ್ ಮತ್ತು ಪಂಜಾಬಿಯತ್ ಗಾಗಿ ಹೋರಾಡುತ್ತಿದ್ದಾರೆ" ಎಂದು ಸುಲ್ತಾನಾ ಹೇಳಿದ್ದಾರೆ. ಪಂಜಾಬ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗಿಂದರ್ ಧಿಂಗ್ರಾ ಮತ್ತು ಖಜಾಂಚಿ ಗುಲ್ಜಾರ್ ಇಂದರ್ ಚಹಲ್ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.