ಪಂಜಾಬ್ ನಲ್ಲಿ ಮತ್ತೆ ರಾತ್ರಿ ಕರ್ಫ್ಯೂ ವಿಸ್ತರಣೆ
ಚಂಡೀಗಢ, ಡಿಸೆಂಬರ್ 11: ಪಂಜಾಬ್ ನಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯು ನಿರಂತರವಾಗಿ ಏರುತ್ತಿರುವ ಕಾರಣ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ರಾತ್ರಿ ಕರ್ಫ್ಯೂವನ್ನು ವಿಸ್ತರಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಜನವರಿ 1, 2021ವರೆಗೂ ರಾತ್ರಿ ಕರ್ಫ್ಯೂ ವಿಸ್ತರಿಸಿದ್ದು, ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಈ ಮುನ್ನ ಡಿಸೆಂಬರ್ 1ರಿಂದ ಡಿ.15ರವರೆಗೂ ಕರ್ಫ್ಯೂ ವಿಧಿಸಲಾಗಿದ್ದು, ಈ ತಿಂಗಳ ಕೊನೆಯವರೆಗೆ ನಿಷೇಧ ಮುಂದುವರೆದಿದೆ. ಜೊತೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಜನರ ಓಡಾಟದ ಮೇಲೂ ನಿಗಾ ಇಡಲಾಗಿದೆ.
ಕೋವ್ಯಾಕ್ಸಿನ್ ಲಸಿಕೆ ಪಡೆದ ಮೇಲೆ ಹರ್ಯಾಣ ಸಚಿವ ಅನಿಲ್ ವಿಜ್ಗೆ ಕೊರೊನಾ ಸೋಂಕು
ಈ ಕುರಿತು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಲು ರಾಜ್ಯದ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಅದರಲ್ಲೂ ಮದುವೆ ಮನೆಗಳಲ್ಲಿ ನಿಯಮಗಳ ಉಲ್ಲಂಘನೆ ಕುರಿತು ನಿಗಾ ಇಡಲು ಸೂಚಿಸಲಾಗಿದೆ. ರಾಜ್ಯದಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆಯ ಪ್ರಕರಣಗಳು ಮಿತಿ ಮೀರಿದ್ದು, ಸಿಎಂ ಅಮರಿಂದರ್ ಸಿಂಗ್, ಡಿಜಿಪಿ ದಿನಕರ್ ಗುಪ್ತಾ ಅವರಿಗೆ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದ್ದಾರೆ.
ಸದ್ಯಕ್ಕೆ ಮದುವೆ ಸಮಾರಂಭಕ್ಕೆ ಒಳಾಂಗಣದಲ್ಲಿ 100 ಮಂದಿಗೆ ಹಾಗೂ ಹೊರಾಂಗಣದಲ್ಲಿ 250 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ದಂಡವನ್ನೂ ಹಾಕಲಾಗುತ್ತಿದೆ.
ಶುಕ್ರವಾರ ಉನ್ನತ ಮಟ್ಟದ ಕೋವಿಡ್ ವಿಶ್ಲೇಷಣಾ ಸಭೆಯನ್ನು ಹಮ್ಮಿಕೊಂಡಿದ್ದು, ಹೋಂ ಐಸೊಲೇಷನ್ ನಲ್ಲಿರುವ ವ್ಯಕ್ತಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿರುವುದಾಗಿ ಆರೋಗ್ಯ ಕಾರ್ಯದರ್ಶಿ ಹುಸಾನ್ ಲಾಲ್ ತಿಳಿಸಿದ್ದಾರೆ. ಕಳೆದ ಮೂರು ವಾರಗಳಿಂದ ಪಂಜಾಬ್ ನಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಆದರೂ ಮರಣ ಪ್ರಮಾಣ ಆತಂಕ ತಂದಿದೆ ಎಂದು ಹೇಳಿದ್ದಾರೆ.
ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್
ಪ್ರತಿನಿತ್ಯ 30000 ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲು ಸಿಎಂ ಸೂಚಿಸಿದ್ದು, ದೆಹಲಿಯ ಪ್ರತಿಭಟನೆ ಮುಗಿಸಿ ವಾಪಸ್ಸಾಗುತ್ತಿರುವ ರೈತರನ್ನೂ ಪರೀಕ್ಷೆಗೆ ಒಳಪಡಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.