ಪಂಜಾಬ್ನ ಅಡ್ವೋಕೇಟ್ ಜನರಲ್ ಎಪಿಎಸ್ ಡಿಯೋಲ್ ರಾಜೀನಾಮೆ ಅಂಗೀಕಾರ
ಚಂಡೀಗಢ, ನವೆಂಬರ್ 9: ಪಂಜಾಬ್ನಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ನಡುವಿನ ಸಂಘರ್ಷ ಅಂತ್ಯ ಕಂಡಿದೆ. ಅಡ್ವೊಕೇಟ್ ಜನರಲ್ ಹುದ್ದೆಗೆ ಎಪಿಎಸ್ ಡಿಯೋಲ್ ಸಲ್ಲಿಸಿದ ರಾಜೀನಾಮೆಯಲ್ಲಿ ಅಂಗೀಕರಿಸಲಾಗಿದೆ. ಮಂಗಳವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ನವಜೋತ್ ಸಿಂಗ್ ಸಿಧು ಮತ್ತು ಸಿಎಂ ಚಿರಂಜಿತ್ ಸಿಂಗ್ ಚನ್ನಿ ಈ ವಿಷಯವನ್ನು ತಿಳಿಸಿದ್ದಾರೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಹಿಂದಿನ ಅಡ್ವೋಕೇಟ್ ಜನರಲ್ ಅತುಲ್ ನಂದ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಸೆಪ್ಟೆಂಬರ್ 27ರಂದು ರಾಜ್ಯದ ನೂತನ ಅಡ್ವೋಕೇಟ್ ಜನರಲ್ ಆಗಿ ಎಪಿಎಸ್ ಡಿಯೋಲ್ ಅವರನ್ನು ನೇಮಿಸಲಾಗಿತ್ತು.
ಕಾಂಗ್ರೆಸ್ಸಿಗೆ ನವಜೋತ್ ಸಿಧು ನೀಡಿದ್ದ ರಾಜೀನಾಮೆ ವಾಪಸ್: ಆದರೆ ಒಂದು ಷರತ್ತು!
ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ನಿರ್ಧಾರಕ್ಕೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಡಿಯೋಲ್ ರಾಜೀನಾಮೆಯನ್ನು ಪಡೆದುಕೊಳ್ಳುವಂತೆ ಪಟ್ಟು ಹಿಡಿದಿದ್ದರು. ಪಂಜಾಬ್ನಲ್ಲಿ ಎಜಿ ನೇಮಕಾತಿಯು ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತಿದ್ದಂತೆ ನವೆಂಬರ್ 1ರಂದೇ ಎಪಿಎಸ್ ಡಿಯೋಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಅವರ ರಾಜೀನಾಮೆಯನ್ನು ಸಿಎಂ ಚರಂಜಿತ್ ಸಿಂಗ್ ಚನ್ನಿ ಮಂಗಳವಾರದವರೆಗೂ ಸ್ವೀಕರಿಸಿರಲಿಲ್ಲ. ಆದರೆ ಮಂಗಳವಾರ ಎಲ್ಲ ಗೊಂದಲಗಳಿಗೆ ಸಿಎಂ ಚನ್ನಿ ತೆರೆ ಎಳೆದಿದ್ದಾರೆ.
ಡಿಯೋಲ್ ನೇಮಕಾತಿಗೆ ತೀವ್ರ ವಿರೋಧ:
ಪಂಜಾಬ್ನ ಅಡ್ವೊಕೇಟ್ ಜನರಲ್ ಹುದ್ದೆಯಿಂದ ಎಪಿಎಸ್ ಡಿಯೋಲ್ ರನ್ನು ತೆಗೆದುಹಾಕುವಂತೆ ಸಿಧು ಬೇಡಿಕೆಯಿಟ್ಟಿದ್ದಾರೆ. ಆದರೆ ಇತ್ತೀಚೆಗಷ್ಟೇ ಡಿಯೋಲ್ ಸಲ್ಲಿಸಿದ ರಾಜೀನಾಮೆಯನ್ನು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ತಿರಸ್ಕರಿಸಿದ್ದರು. ಅದರ ಹೊರತಾಗಿ ನವಜೋತ್ ಸಿಂಗ್ ಸಿಧು ಸೇರಿದಂತೆ ಪಕ್ಷದ ಹಲವು ಹಿರಿಯ ಮುಖಂಡರು ಎಪಿಎಸ್ ಡಿಯೋಲ್ ನೇಮಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
36,000 ಉದ್ಯೋಗಗಳನ್ನು ಖಾಯಂಗೊಳಿಸಲು ನಿರ್ಧಾರ:
ರಾಜ್ಯ ಸರ್ಕಾರವು 36,000 ಉದ್ಯೋಗಿಗಳ ಸೇವೆಯನ್ನು ಖಾಯಂಗೊಳಿಸಲು ನಿರ್ಧರಿಸಿದೆ. ಇದರ ಜೊತೆ ದಿನಗೂಲಿ ವೇತನವನ್ನು 415.59 ರೂಪಾಯಿಗೆ ಹೆಚ್ಚಿಸುವ ಬೇಡಿಕೆಯನ್ನು ಒಪ್ಪಿಕೊಳ್ಳಲಾಗಿದೆ. ಇಟ್ಟಿಗೆ ಗೂಡುಗಳು ಗಣಿಗಾರಿಕೆ ನೀತಿಯ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಸಾಂದರ್ಭಿಕ ತೆರಿಗೆಯನ್ನು ಸಹ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
ರಾಜೀನಾಮೆ ಹಿಂಪಡೆದು ಷರತ್ತು ವಿಧಿಸಿದ್ದ ಸಿಧು:
ಕಳೆದ ನವೆಂಬರ್ 5ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ನವಜೋತ್ ಸಿಂಗ್ ಸಿಧು "ನಾನು ನನ್ನ ರಾಜೀನಾಮೆಯನ್ನು ಹಿಂಪಡೆದಿದ್ದೇನೆ" ಎಂದು ಹೇಳಿದ್ದರು. ಅಲ್ಲದೇ "ಯಾವಾಗ ಹೊಸ ಅಡ್ವೊಕೇಟ್ ಜನರಲ್ ರನ್ನು ನೇಮಕಗೊಳಿಸುತ್ತಾರೋ ಆಗ ನಾನು ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋಗಿ ಅಧಿಕಾರ ವಹಿಸಿಕೊಳ್ಳುತ್ತೇನೆ" ಎಂದು ಸಿಧು ಹೇಳಿದ್ದರು.
2015ರ ಹತ್ಯೆ ಮತ್ತು ಪೊಲೀಸ್ ಫೈರಿಂಗ್ ಪ್ರಕರಣದಲ್ಲಿ ಇಬ್ಬರು ಆರೋಪಿತ ಪೊಲೀಸರ ಪ್ರತಿನಿಧಿ ಎಂದು ಡಿಯೋಲ್ ವಿರುದ್ಧ ನವಜೋತ್ ಸಿಂಗ್ ಸಿಧು ಆರೋಪಿಸಿದ್ದರು. ಡಿಯೋಲ್ ಅವರನ್ನು ಅಡ್ವೊಕೇಟ್ ಜನರಲ್ ಸ್ಥಾನದಿಂದ ತೆಗೆದು ಹಾಕುವಂತೆ ನಿರಂತವಾಗಿ ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆ ಸೋಮವಾರ ಡಿಯೋಲ್ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿರಿಗೆ ಸಲ್ಲಿಸಿದ್ದರು ಎಂದು ವರದಿಯಾಗಿದೆ. ಆದರೆ ಅವರ ರಾಜೀನಾಮೆ ಅಂಗೀಕಾರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ರಾಜ್ಯ ಸರ್ಕಾರ ಇನ್ನೂ ಸ್ಪಷ್ಟಪಡಿಸಬೇಕಿದೆ. ಇದನ್ನು ಸ್ವೀಕರಿಸಲು ಚನ್ನಿ ನಿರಾಕರಿಸಿದ್ದು, ಸಿದ್ದು ಅವರನ್ನು ಇನ್ನಷ್ಟು ಕೆರಳಿಸಿದೆ ಎಂದು ಮೂಲಗಳು ತಿಳಿಸಿವೆ.
ಡಿಯೋಲ್ ಆಯ್ಕೆಗೆ ಏಕೆ ವಿರೋಧ?:
ಎಪಿಎಸ್ ಡಿಯೋಲ್ ಅವರು ಸಿಖ್ ಧಾರ್ಮಿಕ ಗ್ರಂಥವಾದ ಗುರು ಗ್ರಂಥ ಸಾಹಿಬ್ ಮತ್ತು ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡಿನ ದಾಳಿಗೆ ಸಂಬಂಧಿಸಿದ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಮಾಜಿ ಪೊಲೀಸ್ ಮುಖ್ಯಸ್ಥ ಸುಮೇಧ್ ಸೈನಿ ಪರ ವಕೀಲರಾಗಿದ್ದರು.