ಮತ್ತೆ ಅಮರಿಂದರ್ ಸಚಿವ ಸಂಪುಟಕ್ಕೆ ಸೇರುತ್ತಾರಾ ಸಿಧು?
ಚಂಡೀಗಡ, ನವೆಂಬರ್ 25: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಶಾಸಕ ನವಜೋತ್ ಸಿಂಗ್ ಸಿಧು ಅವರು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಚಂಡೀಗಡದಲ್ಲಿರುವ ಅಮರಿಂದರ್ ಸಿಂಗ್ ಅವರ ಫಾರ್ಮ್ಹೌಸ್ನಲ್ಲಿ ಇಬ್ಬರೂ ಪಂಜಾಬ್ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಮಹತ್ವದ ರಾಜಕೀಯ ಸಂಗತಿಗಳನ್ನು ಚರ್ಚಿಸಿದರು ಎನ್ನಲಾಗಿದೆ.
ನವಜೋತ್ ಸಿಂಗ್ ಸಿಧು ಅವರನ್ನು ಅಮರಿಂದರ್ ಸಿಂಗ್ ಮಂಗಳವಾರ ಭೋಜನಕ್ಕೆ ಆಹ್ವಾನಿಸಿದ್ದರು. ಕಳೆದ ವರ್ಷ ತೀವ್ರ ಗದ್ದಲ, ವಿವಾದದ ಬಳಿಕ ಸಚಿವ ಸಂಪುಟದ ಸ್ಥಾನ ಕಳೆದುಕೊಂಡಿದ್ದ ಸಿಧು ಅವರನ್ನು ಪುನಃ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಅಸಮಾಧಾನ ತಿಳಿಗೊಳಿಸುವ ಪ್ರಯತ್ನ ನಡೆಸಲಾಗಿದೆ ಎಂದು ಹೇಳಲಾಗಿದೆ.
ಪ್ರತಿಕ್ರಿಯೆ ನೀಡಿ, ಇಲ್ಲದಿದ್ದರೂ ಪಾಕ್ಗೆ ಹೋಗ್ತೀನಿ: ಮೋದಿ ಸರ್ಕಾರದ ಮೇಲೆ ಸಿಧು ಕೋಪ
ಇಬ್ಬರೂ ನಾಯಕರು ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಅವರು ಟ್ವೀಟ್ ಮಾಡಿದ್ದಾರೆ. ಆದರೆ ಈ ಭೇಟಿಯಲ್ಲಿನ ವಿಷಯಗಳ ಬಗ್ಗೆ ಅವರು ಹೆಚ್ಚಿನ ವಿವರ ನೀಡಿಲ್ಲ.
ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟಕ್ಕೆ ಸಿಧು ಮರಳಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷದ ಜುಲೈನಲ್ಲಿ ಅಮರಿಂದರ್ ಸಿಂಗ್ ಸಂಪುಟಕ್ಕೆ ಸಿಧು ರಾಜೀನಾಮೆ ನೀಡಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ನೀಡಿದ್ದ ಕಳಪೆ ಪ್ರದರ್ಶನಕ್ಕೆ ಸಿಧು ಅವರು ಸ್ಥಳೀಯ ಸರ್ಕಾರ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯನ್ನು ದುರ್ಬಲವಾಗಿ ನಿಭಾಯಿಸಿದ ಬಗೆಯ ಕಾರಣ ಎಂದು ಅಮರಿಂದರ್ ಸಿಂಗ್ ನೇರವಾಗಿ ಆರೋಪಿಸಿದ್ದರು. ಇದರಿಂದ ಇಬ್ಬರೂ ನಾಯಕರ ನಡುವೆ ವೈಮನಸ್ಸು ತಲೆದೋರಿತ್ತು. ರಾಜ್ಯ ಸಂಪುಟಕ್ಕೆ ರಾಜೀನಾಮೆ ನೀಡಿದ ಬಳಿಕ ಸಿಧು ಕಾಂಗ್ರೆಸ್ನ ಎಲ್ಲ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು.
ಮೋದಿಗೆ 'ಡಿಫರೆಂಟ್' ಆಗಿ ಧನ್ಯವಾದ ಸಲ್ಲಿಸಿದ ನವಜೋತ್ ಸಿಧು
ಆದರೆ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಕಳೆದ ತಿಂಗಳು ರಾಹುಲ್ ಗಾಂಧಿ ಮತ್ತು ಅಮರಿಂದರ್ ಸಿಂಗ್ ನೇತೃತ್ವದಲ್ಲಿ ನಡೆಸಿದ್ದ ಟ್ರ್ಯಾಕ್ಟರ್ ಸಮಾವೇಶದಲ್ಲಿ ಸಿಧು ಭಾಗವಹಿಸಿದ್ದರು.