ಪಂಜಾಬ್ ಕಾಂಗ್ರೆಸ್ ಅಧ್ಯಕ್ಷಗಿರಿ ಸಿಧು 'ಕೈ'ಯಲ್ಲೇ: ಸಿಎಂ ಜೊತೆ ನವಜೋತ್ ಒಪ್ಪಂದ
ಚಂಡೀಗಢ, ಅಕ್ಟೋಬರ್ 01: ಪಂಜಾಬ್ ಕಾಂಗ್ರೆಸ್ನಲ್ಲಿ ನಡೆದ ಹೈ ಡ್ರಾಮಾಕ್ಕೆ ಕೊನೆಗೂ ತೆರೆ ಬಿದ್ದಿದೆ. ಕೊನೆಗೂ ಒಂದು ಒಪ್ಪಂದದ ಬಳಿಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲೇ ಉಳಿಯಲು ನವಜೋತ್ ಸಿಂಗ್ ಸಿಧು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಎರಡು ದಿನಗಳ ಹಿಂದೆ ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು ಗುರುವಾರ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಸಂದರ್ಭ ಮಾತುಕತೆ ನಡೆಸಿ ಒಂದು ಒಪ್ಪಂದವನ್ನು ಮಾಡಿಕೊಂಡು ಕಾಂಗ್ರೆಸ್ ಅಧ್ಯಕ್ಷಗಿರಿಯಲ್ಲಿ ಉಳಿಯುವ ನಿರ್ಧಾರವನ್ನು ನವಜೋತ್ ಸಿಂಗ್ ಸಿಧು ಮಾಡಿದ್ದಾರೆ.
ಸಿಧು-ಸಿಎಂ ಭೇಟಿ: ಕಾಂಗ್ರೆಸ್ ಮುಖ್ಯಸ್ಥರಾಗಿ ಮುಂದುವರಿಯಲ್ಲಿದ್ದಾರೆ ಎಂದ ಸಹಾಯಕ
ನಿನ್ನೆಯಷ್ಟೇ ನವಜೋತ್ ಸಿಂಗ್ ಸಿಧು ಸಲಹೆಗಾರ ಮೊಹಮ್ಮದ್ ಮುಸ್ತಾಫ, "ಸಿಧು ರಾಜೀನಾಮೆ ನೀಡಿದ ನಿರ್ಧಾರವು ಆ ಕ್ಷಣದ ಭಾವನೆಯ ಮೇಲೆ ಅವಲಂಬಿತವಾಗಿದೆ," ಎಂದು ತಿಳಿಸಿದ್ದರು. ಹಾಗೆಯೇ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ನ ಪಂಜಾಬ್ ಅಧ್ಯಕ್ಷರಾಗಿಯೇ ಉಳಿಯುವ ಬಗ್ಗೆ ಸುಳಿವನ್ನೂ ನೀಡಿದ್ದರು. "ಸಿಧುರವರು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿಯೇ ಉಳಿಯಲಿದ್ದಾರೆ. ಮುಂದಿನ ವರ್ಷದ ಚುನಾವಣೆಯಲ್ಲಿ ಕಾಂಗ್ರೆಸ್ನ ನಾಯಕತ್ವ ವಹಿಸಿ ಮುನ್ನಡೆಯಲಿದ್ದಾರೆ," ಎಂದು ತಿಳಿಸಿದ್ದರು.
ನವಜೋತ್ ಸಿಂಗ್ ಸಿಧುರ ಸಲಹೆಹಾರ ಮೊಹಮ್ಮದ್ ಮುಸ್ತಾಫ ಎನ್ಡಿಟಿವಿ ಜೊತೆ ಮಾತನಾಡಿ, "ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು," ಎಂದು ಹೇಳಿದ್ದಾರೆ. "ನವ್ಜೋತ್ ಸಿಂಗ್ ಸಿಧುರನ್ನು ಕಾಂಗ್ರೆಸ್ ನಾಯಕತ್ವವು ಅರ್ಥ ಮಾಡಿಕೊಳ್ಳುತ್ತದೆ ಹಾಗೂ ಸಿಧು ಅವರು ಇನ್ನೂ ಕೂಡಾ ಕಾಂಗ್ರೆಸ್ ನಾಯಕತ್ವದಿಂದ ದೂರವಾಗಿಲ್ಲ. ನವ್ಜೋತ್ ಸಿಂಗ್ ಸಿಧು ಕಾಂಗ್ರೆಸ್ ಹಾಗೂ ಅದರ ನಾಯಕತ್ವದ ಬಗ್ಗೆ ಯಾವುದೇ ಚಿಂತೆಯನ್ನು ನಡೆಸದ ಅಮರೀಂದರ್ ಸಿಂಗ್ ಅಲ್ಲ," ಎಂದು ಹೇಳಿದ್ದರು. "ನವ್ಜೋತ್ ಸಿಂಗ್ ಸಿಧು ಆ ಸಮಯಕ್ಕೆ ಬಂದ ಭಾವನೆಗೆ ತಕ್ಕುದಾಗಿ ವರ್ತನೆ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕತ್ವವು ಅರ್ಥ ಮಾಡಿಕೊಳ್ಳಲಿದೆ," ಎಂದು ಕೂಡಾ ಉಲ್ಲೇಖಿಸಿದ್ದರು.
ಇನ್ನು ಈ ನಡುವೆ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿರನ್ನು ನವಜೋತ್ ಸಿಂಗ್ ಸಿಧು ಭೇಟಿಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, "ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ನನ್ನನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಚಂಡೀಗಢದ ಪಂಜಾಬ್ ಭವನಕ್ಕೆ ತೆರಳಿ ಮಾತುಕತೆ ನಡೆಸಲಿದ್ದೇನೆ. ಮಧಾಹ್ನ 3 ಗಂಟೆ ಸುಮಾರಿಗೆ ಭೇಟಿಯಾಗಲಿದ್ದೇನೆ. ಯಾವುದೇ ಮಾತುಕತೆ ನಡೆಸಲು ನಾನು ಅವರಿಗೆ ಸ್ವಾಗತ ನೀಡುತ್ತೇನೆ," ಎಂದಿದ್ದರು.
ಪಂಜಾಬಿನಲ್ಲಿ ನವಜೋತ್ ಸಿಧು ಪಕ್ಷದ ಸರ್ವೋಚ್ಛ ನಾಯಕ ಎಂದ ಸಿಎಂ ಚರಣ್ಜಿತ್ ಸಿಂಗ್
ಇದಕ್ಕೂ ಮುನ್ನ ನವ್ಜೋತ್ ಸಿಂಗ್ ಸಿಧು ಜೊತೆ ಫೋನ್ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ, "ನವಜೋತ್ ಸಿಂಗ್ ಸಿಧುರಿಗೆ ಯಾವ ವಿಷಯಗಳ ಬಗ್ಗೆ ಆಕ್ಷೇಪಣೆಯಿದೆ ಎಂಬುದರ ಕುರಿತು ಚರ್ಚೆ ನಡೆಸುತ್ತೇವೆ," ಎಂದು ತಿಳಿಸಿದ್ದಾರೆ. ಯಾವುದೇ ನೇಮಕಾತಿಯಲ್ಲಿ ಯಾರಾದರೂ ಆಕ್ಷೇಪಣೆ ಹೊಂದಿದ್ದರೆ, ನಾನು ಆ ಬಗ್ಗೆ ಕಠಿಣ ನಿಲುವು ಹೊಂದಿಲ್ಲ, ನನಗೆ ಅಹಂ ಮತ್ತು ಜಗಳಗಳಿಲ್ಲ. ನಾನು ಅವರಿಗೆ ಪಕ್ಷದ ಸರ್ವೋಚ್ಚ ನಾಯಕ ಎಂದು ತಿಳಿದುಕೊಂಡಿದ್ದೇನೆ, ಮಾತನಾಡೋಣ ಬನ್ನಿ," ಎಂದು ಆಹ್ವಾನ ಮಾಡಿದ್ದರು.
ಇನ್ನು ಕೆಲವೇ ತಿಂಗಳಿನಲ್ಲಿ ಪಂಜಾಬ್ನಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಇತ್ತೀಚೆಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಚರಣ್ಜೀತ್ ಸಿಂಗ್ ಚನ್ನಿರನ್ನು ಮುಖ್ಯಮಂತ್ರಿಯನ್ನಾಗಿಸಲಾಗಿದೆ. ಆದರೆ ಈ ನಡುವೆ ಹಲವು ವಿಚಾರಗಳಿಂದಾಗಿ ಮನಸ್ತಾಪ ಉಂಟಾಗಿ ನವಜೋತ್ ಸಿಂಗ್ ಸಿಧು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸಿಧು ಹಾಗೂ ಚನ್ನಿ ನಡುವೆ ಹೊಸ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ನೇಮಕಾತಿ ವಿಚಾರದಲ್ಲಿ ಒಪ್ಪಂದ ನಡೆದಿದೆ ಎಂದು ಹೇಳಲಾಗಿದೆ. ಹೊಸ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ನೇಮಕಾತಿಗಾಗಿ 10 ಸದಸ್ಯರ ಸಮಿತಿಯನ್ನು ಯುಪಿಎಸ್ಸಿಗೆ (ಯೂನಿಯನ್ ಸಾರ್ವಜನಿಕ ಸೇವಾ ಆಯೋಗ) ಕಳುಹಿಸಲಾಗಿದೆ. ಇಕ್ಬಾಲ್ ಪ್ರೀತ್ ಸಿಂಗ್ ಸಹೋತಾ ಅವರನ್ನು ಪಂಜಾಬ್ ಪೊಲೀಸ್ ಮುಖ್ಯಸ್ಥರನ್ನಾಗಿ ಕೈಬಿಡಲು ಚನ್ನಿ ಸಿದ್ಧರಾಗಿದ್ದಾರೆ ಎಂದು ಮೂಲಗಳು ಸೂಚಿಸಿವೆ.
(ಒನ್ಇಂಡಿಯಾ ಸುದ್ದಿ)