ಕಾಂಗ್ರೆಸ್ಗೆ 'ಕೈ' ಕೊಟ್ಟ ನವಜೋತ್ ಸಿಂಗ್ ಸಿಧು?: ಪಂಜಾಬ್ ರಾಜಕಾರಣದಲ್ಲಿ ಏನಾಗುತ್ತಿದೆ?
ಚಂಡೀಘರ್, ಸೆಪ್ಟೆಂಬರ್ 29: ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷವಷ್ಟೇ ಬಾಕಿ ಉಳಿದಿರುವ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ನವಜೋತ್ ಸಿಂಗ್ ಸಿಧು ಮರ್ಮಾಘಾತ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ವಲಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ.
ದಲಿತ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತನ್ನದೇ ಕಾರ್ಯತಂತ್ರ ರೂಪಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರಗಳು ತೆಲೆ ಕೆಳಗಾಗುವ ಲಕ್ಷಣ ಗೋಚರಿಸುತ್ತಿವೆ. ನವಜೋತ್ ಸಿಂಗ್ ಸಿಧು ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ಮನೆಯಿಂದ ಹಲವು ನಾಯಕರು ಹೊರ ನಡೆದಿದ್ದಾರೆ.
ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು 5 ಕಾರಣವೇನು?
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ನವಜೋತ್ ಸಿಂಗ್ ಸಿಧು ರಾಜೀನಾಮೆ ಹಾಗೂ ಅನಂತರದ ಬೆಳವಣಿಗೆಗಳ ಸುತ್ತ ಒಂದು ಕ್ವಿಕ್ ರೌಂಡ್ ಅಪ್ ಇಲ್ಲಿದೆ ಓದಿ.
ಪಂಜಾಬ್ ಕಾಂಗ್ರೆಸ್ಸಿನಲ್ಲಿ ರಾಜಕೀಯ ಬೆಳವಣಿಗೆಗಳು:
* ಪಂಜಾಬ್ ಸಚಿವ ಸಂಪುಟದಲ್ಲಿನ ಬದಲಾವಣೆಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ನವಜೋತ್ ಸಿಂಗ್ ಸಿಧು, ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಕ್ಕೆ ಸಂಬಂಧಿಸಿದ ಪತ್ರವನ್ನು ಟ್ವೀಟ್ ಮಾಡಿದರು. ರಾಜಿ ಮಾಡಿಕೊಳ್ಳುವುದರ ಮೂಲಕ ಮನುಷ್ಯನ ಪಾತ್ರದ ಕುಸಿಯಲು ಆರಂಭವಾಗುತ್ತದೆ. ಪಂಜಾಬ್ನ ಭವಿಷ್ಯ ಮತ್ತು ಪಂಜಾಬ್ನ ಕಲ್ಯಾಣದ ವಿಷಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ, ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ," ಎಐಸಿಸಿ ವಕ್ತಾರೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ಎಂದು ನವಜೋತ್ ಸಿಧು ಉಲ್ಲೇಖಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ಜುಲೈ ತಿಂಗಳಿನಲ್ಲಿ ಸಿಧು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
* ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮಾಡಿದ ಸಚಿವ ಸಂಪುಟದಲ್ಲಿನ ಬದಲಾವಣೆಗಳ ಬಗ್ಗೆ ಸಿಧು ತೀವ್ರ ಅಸಮಾಧಾನ ಹೊಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಕೆಲವು ನಿರ್ಧಾರಗಳ ವಿಷಯದಲ್ಲಿ ನವಜೋತ್ ಸಿಂಗ್ ಸಿಧು "ಸೂಪರ್ ಸಿಎಂ" ರೀತಿಯಲ್ಲಿ ವರ್ತಿಸುತ್ತಿದ್ದರು, ಆದರೆ ಇತ್ತೀಚಿಗೆ ತೆಗೆದುಕೊಂಡ ಸರ್ಕಾರ ನೇಮಕಾತಿ ಮತ್ತು ಸಂಪುಟ ರಚನೆಯಲ್ಲಿ ಸಿಧುರನ್ನು ತೀವ್ರವಾಗಿ ನಿರ್ಲಕ್ಷಿಸಲಾಗಿತ್ತು ಎಂದು ವರದಿಯಾಗಿದೆ. ಅದರಲ್ಲೂ "ಸಕ್ರಿಲೇಜ್" ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾದ ಪ್ರಮುಖ ಹುದ್ದೆಗಳ ಬಗ್ಗೆ ಸಿಧು ಕೋಪಗೊಂಡಿದ್ದರು ಎಂದು ಗೊತ್ತಾಗಿದೆ.
* ಮೂಲಗಳ ಪ್ರಕಾರ, ನವಜೋತ್ ಸಿಧು ಪ್ರತಿಸ್ಪರ್ಧಿ ಎನಿಸಿರುವ ಎಸ್ ಎಸ್ ರಾಂಧವರಿಗೆ ಗೃಹ ಖಾತೆಯನ್ನು ನೀಡಿರುವುದರ ಬಗ್ಗೆ ಅತೃಪ್ತಿ ಹೊಂದಿದ್ದರು. ಸಿಧು ಬರೆದ ಪತ್ರದ ಎರಡು ಕಡೆಗಳಲ್ಲಿ ರಾಜಿ ಎಂಬ ಪದವನ್ನು ಬಳಸಲಾಗಿದ್ದು, ಸಂಪುಟ ರಚನೆ ಸಮಯದಲ್ಲಿ ಕೆಲವು ಕೆಟ್ಟ ಆಯ್ಕೆಗಳ ಬಗ್ಗೆ ಅಸಮಾಧಾನ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
* ನವಜೋತ್ ಸಿಂಗ್ ಸಿಧು ಕಾಲಾವಧಿಯಲ್ಲೇ ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಅಮರೀಂದರ್ ಸಿಂಗ್ ಅವರನ್ನು ಬದಲಾಯಿಸಲಾಗಿತ್ತು. "ನಾನು ನಿಮಗೆ ಹೇಳಿದೆ ಅಲ್ಲವೇ, ಅವರು ಪಂಜಾಬ್ನಂತಹ ಗಡಿ ರಾಜ್ಯಕ್ಕೆ ಸರಿಹೊಂದುವ ಸ್ಥಿರ ವ್ಯಕ್ತಿ ಅಲ್ಲ" ಎಂದು ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದರು.
* ಪಂಜಾಬ್ ಕಾಂಗ್ರೆಸ್ಸಿನ ಇಬ್ಬರು ನಾಯಕರು ಈ ರೀತಿ ನಿರ್ಗಮಿಸುವುದರೊಂದಿಗೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಅವ್ಯವಸ್ಥೆ ಹೆಚ್ಚುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಾಂಗ್ರೆಸ್ಸಿಗೆ ಆಗಿರುವ ನಷ್ಟವು ಅರವಿಂದ ಕೇಜ್ರಿವಾಲ್ ಪಾಲಿಗೆ ಲಾಭವಾಗಿರಬಹುದು; ಪಂಜಾಬ್ನಲ್ಲಿ ಅವರ ಆಮ್ ಆದ್ಮಿ ಪಾರ್ಟಿ ತೀವ್ರ ಪ್ರಚಾರ ನಡೆಸುತ್ತಿದ್ದು, ನಾಳೆ ಕೇಜ್ರಿವಾಲ್ ಕೂಡ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
* ಪಂಜಾಬ್ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎರಡೇ ದಿನಗಳಲ್ಲಿ ಮಲೆರ್ಕೋಟ್ಲಾ ಶಾಸಕಿ ರಜಿಯಾ ಸುಲ್ತಾನಾ ಮಂಗಳವಾರ "ನವಜೋತ್ ಸಿಂಗ್ ಸಿಧುಗೆ ಬೆಂಬಲವಾಗಿ" ರಾಜೀನಾಮೆ ನೀಡಿದ್ದಾರೆ. "ಸಿದ್ದು ಸಾಹಬ್ ತತ್ವಗಳ ವ್ಯಕ್ತಿ. ಅವರು ಪಂಜಾಬ್ ಮತ್ತು ಪಂಜಾಬಿಯತ್ ಗಾಗಿ ಹೋರಾಡುತ್ತಿದ್ದಾರೆ" ಎಂದು ಸುಲ್ತಾನಾ ಹೇಳಿದ್ದಾರೆ. ಪಂಜಾಬ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗಿಂದರ್ ಧಿಂಗ್ರಾ ಮತ್ತು ಖಜಾಂಚಿ ಗುಲ್ಜಾರ್ ಇಂದರ್ ಚಹಲ್ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
* ಪಂಜಾಬ್ ಕ್ಯಾಬಿನೆಟ್ ಬಿಕ್ಕಟ್ಟಿನ ಕುರಿತು ಬುಧವಾರ ಬೆಳಿಗ್ಗೆ ಚಂಡೀಗಢದಲ್ಲಿ ಮತ್ತೊಂಜು ಸುತ್ತಿನ ಸಭೆ ನಡೆಯಲಿದೆ. ಪಂಜಾಬ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪರ್ಗತ್ ಸಿಂಗ್ ಅವರಿಗೆ ಪ್ರಸ್ತುತ ಪಟಿಯಾಲದಲ್ಲಿರುವ ಸಿಧುರನ್ನು ಸಮಾಧಾನ ಪಡಿಸಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
* ಕಾಂಗ್ರೆಸ್ ನಾಯಕನಿಗೆ "ಅಮರೀಂದರ್ ಸಿಂಗ್ ಜೊತೆ ಯಾವುದೇ ವೈಯಕ್ತಿಕ ಜಿದ್ದು ಇಲ್ಲ. ಹೊಸ ಸರ್ಕಾರವು ಮೊದಲ ದಿನದಿಂದಲೇ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಸಮಸ್ಯೆಗಳನ್ನು ಪರಿಹರಿಸಬೇಕು. ಪಕ್ಷವು ಈ ಬಗ್ಗೆ ಗಮನಹರಿಸಬೇಕಾಗಿದ್ದು, ಸಿಧು ರಾಜೀನಾಮೆಯನ್ನು ವಾಪಸ್ ಪಡೆಯುತ್ತಾರೆಯೇ ಇಲ್ಲವೇ ಎಂಬುದನ್ನು ನಾನು ಹೇಳುವುದಕ್ಕೆ ಆಗುವುದಿಲ್ಲ," ಎಂದು ಸಿಧು ಸಲಹೆಗಾರ ಸುರೀಂದರ್ ಡಲ್ಲಾ ತಿಳಿಸಿದ್ದಾರೆ.
* ಅಮರೀಂದರ್ ಸಿಂಗ್ ವಿಷಯದಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲೇ ಈ ರೀತಿ ಬೆಳವಣಿಗೆ ನಡೆದಿದ್ದು ಸಂಸದ ರಾಹುಲ್ ಗಾಂಧಿಯವರು ನವಜೋತ್ ಸಿಂಗ್ ಸಿಧು ಜೊತೆಗೆ ಸಭೆ ನಡೆಸಬೇಕಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ. ಕಾಂಗ್ರೆಸ್ಸಿಗೆ ಜಿಗ್ನೇಶ್ ಮೆವಾನಿ ಹಾಗೂ ಕನ್ಹಯ್ಯಕುಮಾರ್ ಅಂತಹ ನಾಯಕರನ್ನು ಸ್ವಾಗತಿಸಿದ ದಿನವೇ ಇನ್ನೊಂದು ದಿಕ್ಕಿದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ.
* ನವಜೋತ್ ಸಿಂಗ್ ಸಿಧು ರಾಜೀನಾಮೆಯು ವೈಯಕ್ತಿಕ ಎನ್ನುವಂತೆ ತೋರಿದರೂ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ದೆಹಲಿ ಭೇಟಿಯೊಂದಿಗೆ ನಂಟು ಬೆಸೆದುಕೊಂಡಿದೆ. ಕ್ಯಾಪ್ಟನ್ ಹಾಗೂ ಬಿಜೆಪಿ ನಾಯಕರ ನಡುವಿನ ಭೇಟಿಯು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ 10 ದಿನಗಳ ಹಿಂದೆಯಷ್ಟೇ ಅಮರೀಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ನಿರಂತರ ಅವಮಾನದ ಬಗ್ಗೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಇನ್ನೊಂದು ದಿಕ್ಕಿನಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿಧು, ಪಕ್ಷದಲ್ಲಿಯೇ ಮುಂದುವರಿಯುವುದಾಗಿ ಹೇಳಿಕೊಂಡಿದ್ದಾರೆ.