ಸಾಂಸ್ಥಿಕ ವಿಚಾರದ ಬಗ್ಗೆ ಚರ್ಚೆ: ಸಿಧು-ವೇಣುಗೋಪಾಲ್ ಗುರುವಾರ ಭೇಟಿ
ನವದೆಹಲಿ, ಅಕ್ಟೋಬರ್ 12: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಪಂಜಾಬ್ ಉಸ್ತುವಾರಿ ಹರೀಶ್ ರಾವತ್ರನ್ನು ಗುರುವಾರ ದೆಹಲಿಯಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಭೇಟೆಯಾಗಲಿದ್ದಾರೆ.
ಈ ಸಭೆಯು ಪಂಜಾಬ್ನ ನೂತನ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ಮಾತುಕತೆ ನಡೆದು ಒಪ್ಪಂದ ಆದ ಬಳಿಕದ ಬೆಳವಣಿಗೆ ಆಗಿದೆ. ಈ ಸಭೆಯ ಬಗ್ಗೆ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, "ಇದು ಸಾಂಸ್ಥಿಕ ವಿಚಾರದಲ್ಲಿ ನಡೆಯುವ ಸಭೆ," ಎಂದು ಉಲ್ಲೇಖ ಮಾಡಿದ್ದಾರೆ.
"ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕರಣಾಜನಕ ಪರಿಸ್ಥಿತಿ": ಕ್ಯಾಪ್ಟನ್ ಸಿಂಗ್ ವಾಗ್ಬಾಣ
ಈ ತಿಂಗಳ ಆರಂಭದಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದರು. ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ನಡೆದಿದ್ದು, ಈ ಹಿನ್ನೆಲೆ ಪಂಜಾಬ್ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿತ್ತು. ಇನ್ನು ನವಜೋತ್ ಸಿಂಗ್ ಸಿಧು ಪಂಜಾಬ್ನ ನೂತನ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಮಾಡಿದ ರಾಜ್ಯದ ಪೊಲೀಸ್ ಮುಖ್ಯಸ್ಥರು ಹಾಗೂ ಸರ್ಕಾರದ ವಕೀಲರ ನೇಮಕದ ವಿಚಾರದಲ್ಲಿ ವೈಮನಸ್ಸು ಹೊಂದಿದ್ದು ಈ ಕಾರಣದಿಂದಲೇ ರಾಜೀನಾಮೆ ನೀಡಿದ್ದರು ಎಂದು ಹೇಳಲಾಗಿದೆ.
ಆದರೆ ನವಜೋತ್ ಸಿಂಗ್ ಸಿಧು ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕಾರ ಮಾಡಿತ್ತು. ಅಷ್ಟೇ ಅಲ್ಲದೆ ಹಲವಾರು ನಾಯಕರು ನವಜೋತ್ ಸಿಂಗ್ ಸಿಧು ಮನವೊಲಿಕೆ ಮಾಡುವ ಪ್ರಯತ್ನವನ್ನು ಮಾಡಿದ್ದರು. ಈ ನಡುವೆ ನವಜೋತ್ ಸಿಂಗ್ ಸಿಧು ಜೊತೆ ಕೆಲವೊಂದು ವಿಚಾರದಲ್ಲಿ ಮನಸ್ತಾಪ ಹೊಂದಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ನವಜೋತ್ ಸಿಂಗ್ ಸಿಧು ನಂಬಿಕಾಸ್ತ ವ್ಯಕ್ತಿ ಅಲ್ಲ ಎಂದು ನಾನು ಮೊದಲೆ ಹೇಳಿದ್ದೆ ಎಂದಿದ್ದರು.
ನವಜೋತ್ ಸಿಂಗ್ ಸಿಧು ಮನವೊಲಿಕೆ ಮಾಡುವ ಎಲ್ಲಾ ನಾಯಕರುಗಳ ಪ್ರಯತ್ನದ ನಂತರ ಪಂಜಾಬ್ನ ನೂತನ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಜೊತೆ ನವಜೋತ್ ಸಿಂಗ್ ಸಿಧು ಮಾತುಕತೆಯು ಸಫಲವಾಗಿದೆ. ನವಜೋತ್ ಸಿಂಗ್ ಸಿಧು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಲ್ಲೇ ಉಳಿದಿದ್ದಾರೆ. ಈ ಸಂದರ್ಭದಲ್ಲಿ ಕೆಲವೊಂದು ಒಪ್ಪಂದಗಳು ನಡೆದಿದೆ ಎಂದು ಹೇಳಲಾಗಿದೆ. ಇನ್ನು ನವಜೋತ್ ಸಿಂಗ್ ಸಿಧು ತನ್ನ ರಾಜೀನಾಮೆಯನ್ನು ಅಧಿಕೃತವಾಗಿ ಇನ್ನಷ್ಟೇ ಹಿಂದಕ್ಕೆ ಪಡೆಯಬೇಕಾಗಿದೆ.
2022 ರ ವಿಧಾನಸಭೆ ಚುನಾವಣೆ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನ ಲಾಭ ಪಡೆಯುತ್ತಾ ಬಿಜೆಪಿ?
ನವಜೋತ್ ಸಿಂಗ್ ಸಿಧು, ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗಿಯಾಗದಿರುವುದು ಇಬ್ಬರ ನಡುವೆ ಇನ್ನೂ ಕೂಡಾ ಗೊಂದಲಗಳು, ಮನಸ್ತಾಪಗಳು ಇದೆ ಎಂಬುವುದನ್ನು ಸ್ಪಷ್ಟಪಡಿಸಿದೆ. ಇನ್ನು ತಾನು ಚನ್ನಿ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗಿಯಾಗದಿರುವುದರ ಬಗ್ಗೆ ನವಜೋತ್ ಸಿಂಗ್ ಸಿಧು ಯಾವುದೇ ಹೇಳಿಕೆಯನ್ನು ಅಥವಾ ಕಾರಣವನ್ನು ನೀಡಿಲ್ಲ. ಇದಕ್ಕೂ ಎರಡು ದಿನಗಳ ಹಿಂದೆ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆಯನ್ನು ಮಾಡಿದ್ದರು. ಕಾಂಗ್ರೆಸ್ ಪಕ್ಷವು ಸಾಯುವ ಹಂತದಲ್ಲಿದೆ ಎಂದು ಹೇಳಿದ್ದರು.
ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ರೈತರು ಸಾವನ್ನಪ್ಪಿರುವ ವಿಚಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಗಾಗಿ ಕಾಯುತ್ತಿದ್ದಾಗ, ಸಿಧು ಮೆರವಣಿಗೆ ಹೇಗೆ ಯಶಸ್ವಿಯಾಗುತ್ತದೆ ಎಂದು ಪ್ರಶ್ನಿಸಿದ್ದರು. "ಭಗ್ವಂತ್ ಸಿಧುರ (ನವಜೋತ್ ಸಿಂಗ್ ಸಿಧು ತಂದೆ) ಪುತ್ರ ಈ ಪ್ರತಿಭಟನೆಯ ಮುತುವರ್ಜಿ ವಹಿಸಲು ಅವಕಾಶ ನೀಡಿದ್ದರೆ, ನೀವು ಮುಂದೆ ಹೇಗಿರುತ್ತಿತ್ತು ಎಂದು ನೋಡಬಹುದಿತ್ತು. ಕಾಂಗ್ರೆಸ್ ಈಗ ಸಾಯುವ ಹಂತದಲ್ಲಿದೆ," ಎಂದು ನವಜೋತ್ ಸಿಂಗ್ ಸಿಧು ಟೀಕೆ ಮಾಡುತ್ತಾ ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)