ಹರಿಯಾಣದ ಗ್ರಾಮದಲ್ಲಿ 'ರಹಸ್ಯ ಜ್ವರ'ಕ್ಕೆ ಹತ್ತು ದಿನದಲ್ಲೇ ಎಂಟು ಮಕ್ಕಳು ಬಲಿ
ಚಂಡೀಗಢ, ಸೆಪ್ಟೆಂಬರ್ 15: ಹರಿಯಾಣದ ಪಾಲ್ವಾನ್ ಜಿಲ್ಲೆಯಲ್ಲಿನ ಸಣ್ಣ ಗ್ರಾಮವಾದ ಚಿಲಿಯಲ್ಲಿ ಕಳೆದ ಹತ್ತು ದಿನದಲ್ಲೇ ರಹಸ್ಯವಾದ ಒಂದು ಜ್ವರದಿಂದ ಎಂಟು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಜ್ವರದ ಲಕ್ಷಣಗಳನ್ನು ಹೊಂದಿರುವ ಸುಮಾರು 44 ಮಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಸುಮಾರು 35 ಮಂದಿ ಅಪ್ರಾಪ್ತರು ಎಂದು ಹೇಳಲಾಗಿದೆ.
ಈ ನಡುವೆ ಈ ಸಾವು ಯಾವ ಕಾರಣದಿಂದಾಗಿ ಸಂಭವಿಸಿದೆ ಎಂದು ಈವರೆಗೂ ಆರೋಗ್ಯ ಅಧಿಕಾರಿಗಳು ಖಚಿತ ಪಡಿಸಿಲ್ಲ. ಇನ್ನು ಈ ಸಾವನ್ನಪ್ಪಿದ ಜನರ ಪೈಕಿ ಅಧಿಕ ಮಂದಿಯಲ್ಲಿ ಪ್ಲೇಟ್ಲೇಟ್ಗಳು ಕಡಿಮೆ ಆಗಿರುವ ಹಿನ್ನೆಲೆ ಡೆಂಗ್ಯೂ ಜ್ವರ ಇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಫಿರೋಜಾಬಾದ್ನಲ್ಲಿ ಅಧಿಕ ಮಕ್ಕಳು ಡೆಂಗ್ಯೂಗೆ ಬಲಿ: ಕೇಂದ್ರದ ತಂಡ
ಈ ಗಂಭೀರ ಪರಿಸ್ಥಿತಿಯಲ್ಲಿ, ಆರೋಗ್ಯ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಡೆಂಗ್ಯೂ ಹಾಗೂ ನೈರ್ಮಲ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಇನ್ನು ಪ್ರಸ್ತುತ ಜ್ವರವಿದ್ದು ಆಸ್ಪತ್ರೆಗೆ ದಾಖಲಾಗಿರುವ ಕೆಲವರು ಮಲೇರಿಯಾ ಹಾಗೂ ಡೆಂಗ್ಯೂವಿನಿಂದ ಬಳಲುತ್ತಿದ್ದಾರೆ ಎಂದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇನ್ನೂ ಎಲ್ಲರ ಕೋವಿಡ್ ಪರೀಕ್ಷೆಯನ್ನು ಕೂಡಾ ಮಾಡಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹತೀನ್ನ ಎಸ್ಎಮ್ಒ, ವಿಜಯ್ ಕುಮಾರ್, "ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿತ್ತು, ಬಳಿಕ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ನಾವು ಮನೆ ಮನೆಗೆ ಭೇಟಿ ನೀಡುತ್ತಿದ್ದೇವೆ. ಸಮೀಕ್ಷೆಯನ್ನು ಮನೆ ಮನೆಗೆ ತೆರಳಿ ನಡೆಸಲಾಗುತ್ತಿದೆ. ಔಷಧೀಯನ್ನು ಕೂಡಾ ನೀಡಲಾಗುತ್ತಿದೆ. ದಿನದ ಇಪ್ಪತ್ನಲ್ಕು ಗಂಟೆಗಳು ಕೂಡಾ ನಮ್ಮ ತಂಡವು ಕಾರ್ಯ ನಿರ್ವಹಣೆ ಮಾಡುತ್ತಿದೆ. ಕಡಿಮೆ ನೈರ್ಮಲ್ಯ ಇರುವ ಬಗ್ಗೆಯೂ ನಮ್ಮ ಗಮನಕ್ಕೆ ಬಂದಿದೆ. ಇನ್ನು ಜ್ವರಕ್ಕೆ ಏನು ಕಾರಣ ಎಂದು ಕಂಡು ಕೊಳ್ಳಲು ನಾವು ಹೆಚ್ಚಿನ ಪರೀಕ್ಷೆಯನ್ನು ಕೂಡಾ ಮಾಡುತ್ತಿದ್ದೇವೆ," ಎಂದು ತಿಳಿಸಿದ್ದಾರೆ.
ಇನ್ನು ಮಕ್ಕಳು ಮಾತ್ರವಲ್ಲದೇ ವಯಸ್ಕರಲ್ಲೂ ಜ್ವರ ಕಾಣಿಸಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಜ್ವರ ಪೀಡಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ರಕ್ತದಲ್ಲಿ ಕಡಿಮೆ ಪ್ಲೇಟ್ಲೆಟ್ ಇರುವ ಕಾರಣದಿಂದಾಗಿ ಗ್ರಾಮದಲ್ಲಿ ಸಾವು ಸಂಭವಿಸಿದೆ ಎಂದು ಗ್ರಾಮದ ಜನರು ಹೇಳಿದ್ದಾರೆ. ಇನ್ನು ಈ ಕಡಿಮೆ ಪ್ಲೇಟ್ಲೆಟ್ ಇರುವುದು ಡೆಂಗ್ಯೂವಿನ ಲಕ್ಷಣವಾಗಿದೆ. ಆರೋಗ್ಯ ಇಲಾಖೆಯು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದರೆ ಜನರನ್ನು ರಕ್ಷಣೆ ಮಾಡಬಹುದಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಯುಪಿ ಫಿರೋಜಾಬಾದ್ನಲ್ಲಿ ಡೆಂಗ್ಯೂ, ವೈರಲ್ ಜ್ವರ ಮತ್ತಷ್ಟು ಹೆಚ್ಚಳ: ಪೂರ್ವದಲ್ಲೂ ಆತಂಕ
ಚಿಲಿ ಗ್ರಾಮದ ಸರ್ಪಂಚ್ ನರೇಶ್ ಕುಮಾರ್ ಮಾತನಾಡಿ, "ಈವರೆಗೆ 7-8 ಮಕ್ಕಳು ಸಾವನ್ನಪ್ಪಿದ್ದಾರೆ. ಇದು ಕಲುಷಿತ ನೀರಿನಿಂದ ಕೂಡಾ ಆಗಿರಬಹುದು. ಹಾಗೆಯೇ ಕಲುಷಿತ ನಿಂತ ನೀರಿನಲ್ಲಿ ಸೊಳ್ಳೆ ಮೊಟ್ಟೆ ಇಟ್ಟಿರುವ ಕಾರಣದಿಂದಾಗಿ ಆಗಿರಬಹುದು. ಕಳೆದ 15-20 ದಿನದಲ್ಲಿ ಈ ಎಲ್ಲಾ ಬೆಳವಣಿಗೆಗಳು ಸಂಭವಿಸಿದೆ. ಅವರನ್ನು ಡೆಂಗ್ಯೂ ಪರೀಕ್ಷೆಗೆ ಒಳಪಡಿಸಲಾಗಿಲ್ಲ. ಪ್ರಸ್ತುತ ಆರೋಗ್ಯ ಸಿಬ್ಬಂದಿಗಳ ತಂಡವು ಗ್ರಾಮಕ್ಕೆ ಬಂದಿದೆ. ಆಶಾ ಕಾರ್ಯಕರ್ತರು ಕೇಂದ್ರಗಳಿಗೆ ಭೇಟಿ ನೀಡುತ್ತಾರೆ ಆದರೆ ಗ್ರಾಮಕ್ಕೆ ಭೇಟಿ ನೀಡಿಲ್ಲ. ಇಲ್ಲಿ ಯಾವುದೇ ಆರೋಗ್ಯ ಸೌಕರ್ಯಗಳು ಇಲ್ಲ," ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಇನ್ನೊಂದೆಡೆ ಅಧಿಕಾರಿಗಳು ವೈರಲ್ ಜ್ವರ ಇದ್ದರೂ ಕೂಡಾ ರಕ್ತದಲ್ಲಿ ಪ್ಲೇಟ್ಲೆಟ್ ಪ್ರಮಾಣವು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಸುಮಾರು ನಾಲ್ಕು ಸಾವಿರದಷ್ಟು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಯಾವುದೇ ಆರೋಗ್ಯ ಸೌಕರ್ಯಗಳು ಇಲ್ಲ. ಹಾಗೆಯೇ ನೈರ್ಮಲ್ಯ ವ್ಯವಸ್ಥೆಯೂ ತೀರಾ ಹದಗೆಟ್ಟಿದೆ ಎಂದು ಹೇಳಲಾಗಿದೆ.
ಗ್ರಾಮಸ್ಥ ಖುರ್ಷಿದ್ ಅಲಮ್ ಮಾತನಾಡಿ, "ರಕ್ತದಲ್ಲಿ ಪ್ಲೇಟ್ಲೆಟ್ ಪ್ರಮಾಣ ಕಡಿಮೆ ಆಗಿದೆ ಎಂದು ಅವರು ಹೇಳುತ್ತಾರೆ. ಈ ಎಲ್ಲಾ ಬೆಳವಣಿಗೆ ಆಗಸ್ಟ್ 25 ರಿಂದ ಸಂಭವಿಸುತ್ತಿದೆ. ಆದರೆ ಆರೋಗ್ಯ ಸಿಬ್ಬಂದಿಗಳ ತಂಡವು ಸೆಪ್ಟೆಂಬರ್ 11 ರಂದು ಗ್ರಾಮಕ್ಕೆ ಬಂದಿದೆ. ಇನ್ನು ಜ್ವರದಿಂದ ಬಳಲುತ್ತಿರುವವರು ಅಧಿಕ ಮಂದಿ ಮಕ್ಕಳು ಆಗಿದ್ದಾರೆ. ಗ್ರಾಮದಲ್ಲಿ ಈಗ ಆತಂಕ ಮನೆ ಮಾಡಿದೆ," ಎಂದು ತಿಳಿಸಿದ್ದಾರೆ.
(ಒನ್ ಇಂಡಿಯಾ ಸುದ್ದಿ)