ಮೂಸೆ ವಾಲಾ ಹತ್ಯೆ: ಪಂಜಾಬಿ ಗಾಯಕನಿಗೆ ಗುಂಡು ಹಾರಿಸಿದ ಹಂತಕ ಅರೆಸ್ಟ್
ಚಂಢಿಗಡ ಜುಲೈ 4: ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದ ಪಂಜಾಬಿ ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆ ವಾಲಾ ಹತ್ಯೆಯ ಹಂತಕನನ್ನು ಇಂದು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್ಗೆ ಸೇರಿದ ಇಬ್ಬರು ಹಂತಕರನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಸೋಮವಾರ ಬಂಧಿಸಿದೆ. ಇಬ್ಬರಲ್ಲಿ ಅಂಕಿತ್ ಎಂಬ ಹಂತಕ ಸಿಧು ಮೂಸೆ ವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಶೂಟರ್ಗಳಲ್ಲಿ ಒಬ್ಬನಾಗಿದ್ದಾನೆ ಎಂದು ತಿಳಿದು ಬಂದಿದೆ.
ಪಂಜಾಬ್ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಮೇ 29 ರಂದು ಸಿಧು ಮೂಸ್ ವಾಲಾನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿಯಿತು. ಈ ಹತ್ಯೆ ಆರೋಪಿ ಅಂಕಿತ್ ರಾಜಸ್ಥಾನದಲ್ಲಿ ನಡೆದ ಕೊಲೆ ಯತ್ನದ ಇತರ ಹೇಯ ಪ್ರಕರಣಗಳಲ್ಲೂ ಭಾಗಿಯಾಗಿದ್ದನು ಎಂದು ತನಿಖೆಯಿಂದ ಬಯಲಾಗಿದೆ. ಇನ್ನೂ ಮತ್ತೊಬ್ಬ ಬಂಧಿತ ಆರೋಪಿ ಸಚಿನ್ ಭಿವಾನಿ ಎಂಬಾತ ಸಿಧು ಮೂಸೆವಾಲಾ ಪ್ರಕರಣದ ನಾಲ್ವರು ಶೂಟರ್ಗಳಿಗೆ ಆಶ್ರಯ ನೀಡುವ ಜವಾಬ್ದಾರಿಯನ್ನು ಹೊಂದಿದ್ದನು ಎನ್ನಲಾಗುತ್ತಿದೆ. ಇವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.
30ಕ್ಕೂ ಹೆಚ್ಚು ಪಿಸ್ತೂಲ್ ವಶ
ದೆಹಲಿ ಪೊಲೀಸರು ಕಾಶ್ಮೀರ್ ಗೇಟ್ ಬಸ್ ನಿಲ್ದಾಣದ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಹತ್ತು ಕಾಟ್ರಿಡ್ಜ್ಗಳಿರುವ 9 ಎಂಎಂ ಬೋರ್ ಪಿಸ್ತೂಲ್, ಒಂಬತ್ತು ಕಾರ್ಟ್ರಿಡ್ಜ್ಗಳ 30 ಎಂಎಂ ಪಿಸ್ತೂಲ್, ಮೂರು ಪಂಜಾಬ್ ಪೊಲೀಸ್ ಸಮವಸ್ತ್ರಗಳು ಮತ್ತು ಎರಡು ಮೊಬೈಲ್ ಫೋನ್ಗಳು, ಡಾಂಗಲ್ ಹಾಗೂ ಸಿಮ್ ಕಾರ್ಡ್ ಅನ್ನು ವಶಪಡಿಸಿಕೊಳ್ಳಲಾಗಿದೆ.
58 ಬಾರಿ ಅಡಗುತಾಣ ಬದಲಾವಣೆ
ಜೂನ್ 20 ರಂದು ದೆಹಲಿ ಪೊಲೀಸರು ಇಬ್ಬರು ಶಾರ್ಪ್ ಶೂಟರ್ಗಳಾದ ಪ್ರಿಯವ್ರತ್ ಫೌಜಿ ಮತ್ತು ಕುಲದೀಪ್ ಅಲಿಯಾಸ್ ಕಾಶಿಶ್ ಅವರನ್ನು ಗುಜರಾತ್ನ ಕಚ್ ಜಿಲ್ಲೆಯ ಬರೋಯ್ ಗ್ರಾಮದಲ್ಲಿ ಖರಿ-ಮಿಥಿ ರಸ್ತೆಯಲ್ಲಿ ಬಂಧಿಸಿದ್ದರು. ತಮ್ಮ ಕಸ್ಟಡಿ ವಿಚಾರಣೆಯ ಸಮಯದಲ್ಲಿ, ಇಬ್ಬರೂ ಆರೋಪಿಗಳು ಬಂಧಿಸುವ ಮೊದಲು ಹತ್ಯೆಯ ನಂತರ ಪರಾರಿಯಾಗಲು 58 ಬಾರಿ ತಮ್ಮ ಅಡಗುತಾಣವನ್ನು ಬದಲಾಯಿಸಿದ್ದರು ಎಂದು ಬಹಿರಂಗಪಡಿಸಿದರು.
ಸಿಧು ವಾಹನ ಅಡ್ಡಗಟ್ಟಿ ಕೊಲೆ
ಶೂಟರ್ಗಳಾದ ಅಂಕಿತ್ ಮತ್ತು ದೀಪಕ್ ಬೊಲೇರಾದಲ್ಲಿ ಪ್ರಿಯವ್ರತ್ ಫೌಜಿ ಮತ್ತು ಕಾಶಿಶ್ ಜೊತೆಗಿದ್ದರು. ಅವರು ಮೂಸ್ ವಾಲಾ ಅವರ ವಾಹನವನ್ನು ಹಿಂದಿನಿಂದ ಅಡ್ಡಗಟ್ಟಿದ್ದರು, ಇತರ ಶೂಟರ್ಗಳಾದ ಜಗ್ರೂಪ್ ಮತ್ತು ಮನ್ಪ್ರೀತ್ ಮನ್ನು ಗಾಯಕನ ವಾಹನವನ್ನು ಮುಂಭಾಗದಿಂದ ದಾಳಿ ಮಾಡಿದರು ಎಂದು ದೆಹಲಿ ಪೊಲೀಸ್ ವಿಶೇಷ ಕೋಶದ ಕಮಿಷನರ್ ಎಚ್ಜಿಎಸ್ ಧಲಿವಾಲ್ ಹೇಳಿದ್ದಾರೆ.
ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್
ವಿಚಾರಣೆಯ ಸಮಯದಲ್ಲಿ ಫೌಜಿಗೆ ಗಾಯಕನ ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಘಟನೆಗೆ ಕೇವಲ ಒಂದು ಗಂಟೆ ಮೊದಲು ಕೆಲವು ಮೋಟಾರ್ಸೈಕಲ್ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ತಲುಪಿಸಿದ್ದಾರೆ ಎಂದು ಬಹಿರಂಗಪಡಿಸಿದರು. ಕೊಲೆಗಾರರು ಕೆನಡಾ ಮೂಲದ ಹಂತಕ ಗೋಲ್ಡಿ ಬ್ರಾರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಇಂಟರ್ನೆಟ್ ಫೋನ್ ಮೂಲಕ ಅವರಿಗೆ ಸೂಚನೆಗಳನ್ನು ನೀಡುತ್ತಿದ್ದರು ಎಂದು ತನಿಖೆಯಿಂದ ಬಯಲಾಗಿದೆ.