ಮೊಹಾಲಿ ಸ್ಫೋಟ; ದುಷ್ಕರ್ಮಿಗಳನ್ನು ಬಿಡಲ್ಲ ಎಂದ ಪಂಜಾಬ್ ಸಿಎಂ
ಚಂಡೀಗಢ, ಮೇ 10: ಪಂಜಾಬ್ನ ಮೊಹಾಲಿಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಕಾರಣರಾದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಮಂಗಳವಾರ ಹೇಳಿದ್ದಾರೆ. ಪ್ರಕರಣದ ಸಂಬಂಧ 11 ಜನರನ್ನು ಬಂಧಿಸಲಾಗಿದೆ.
ಮುಖ್ಯಮಂತ್ರಿಗಳು ತಮ್ಮ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಡಿಜಿಪಿ ಹಾಗು ಇತರ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದ್ದು, ಪ್ರಕರಣದ ಬಗ್ಗೆ ಮಾಹಿತಿ ಪಡೆದರು.
ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರದಲ್ಲಿ ಸ್ಫೋಟ; ಚುರುಕಿನ ತನಿಖೆ
"ಮೊಹಾಲಿ ಸ್ಫೋಟ ಘಟನೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಂಜಾಬ್ ರಾಜ್ಯದ ವಾತಾವರಣ ಹಾಳು ಮಾಡಲು ಯತ್ನಿಸಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ" ಎಂದು ಪಂಜಾಬ್ ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ.
ಮೊಹಾಲಿಯ ಪಂಜಾಬ್ ಪೊಲೀಸ್ ಗುಪ್ತಚರ ಮುಖ್ಯಕಚೇರಿಯ ಹೊರಗೆ ಸೋಮವಾರ ರಾತ್ರಿ ಲಘು ಬಾಂಬ್ ಸ್ಫೋಟ ಸಂಭವಿಸಿದೆ. ರಾಕೆಟ್ ಚಾಲಿತ ಗ್ರೆನೇಡ್ (ಆರ್ಪಿಜಿ- Rocket-Propelled Grenade) ಸ್ಫೋಟ ಇದೆಂದು ಅಂದಾಜಿಸಲಾಗಿದೆ. ಸ್ಫೋಟದಿಂದ ಯಾರಿಗೂ ಪ್ರಾಣಾಪಾಯ, ಗಾಯವಾಗಿಲ್ಲ ಪೊಲೀಸರು ಇದನ್ನು ಗಂಭೀರ ಭಯೋತ್ಪಾದನೆಯ ಕೃತ್ಯ ಎಂಬ ದೃಷ್ಟಿಯಿಂದಲೇ ತನಿಖೆ ನಡೆಸುತ್ತಿದ್ಧಾರೆ.
"ಎಸ್ಎಎಸ್ ನಗರ್ನ ಸೆಕ್ಟರ್ 77ರಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ವಿಭಾಗದ ಮುಖ್ಯಕಚೇರಿಯಲ್ಲಿ ಸಣ್ಣ ಸ್ಫೋಟವಾಗಿದ್ದು ವರದಿಯಾಗಿದೆ. ಯಾವ ಹಾನಿ ಆಗಿಲ್ಲದಿರುವುದು ತಿಳಿದುಬಂದಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು ತನಿಖೆ ನಡೆಸಲಾಗುತ್ತಿದೆ" ಎಂದು ಮೊಹಾಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಹಿಮಾಚಲದಲ್ಲಿ ಖಾಲಿಸ್ತಾನೀ ಬಾವುಟ: ಎಸ್ಎಫ್ಜೆ ಮುಖಂಡನ ವಿರುದ್ಧ ಕೇಸ್ ದಾಖಲು; ಎಸ್ಐಟಿ ತನಿಖೆ
ಇದೊಂದು ಭಯೋತ್ಪಾದನಾ ಕೃತ್ಯವಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮೊಹಾಲಿ ಎಸ್ಪಿ ರವೀಂದರ್ ಪಾಲ್ ಸಿಂಗ್, "ಈ ಘಟನೆಯನ್ನು ಕಡೆಗಣಿಸಲಾಗುವುದಿಲ್ಲ. ಭಯೋತ್ಪಾದನಾ ಕೃತ್ಯ ಅಲ್ಲ ಎಂದು ಹೇಳಲು ಆಗಲ್ಲ. ತನಿಖೆ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಏನಿದು ಆರ್ಪಿಜಿ?; ಆರ್ಪಿಜಿ ಎಂದರೆ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್. ಇದು ಮೂಲತಃ ಸೋವಿಯತ್ ರಷ್ಯಾ ಕಾಲದಲ್ಲಿ ರೂಪಿಸಲಾಗಿದ್ದ ತಂತ್ರಜ್ಞಾನದ ಶಸ್ತ್ರವಾಗಿದೆ. ಹೆಗಲ ಮೇಲಿಟ್ಟುಕೊಂಡು ಕ್ಷಿಪಣಿ ಹಾರಿಸುವಂಥದ್ದು. ಒಬ್ಬ ವ್ಯಕ್ತಿ ಇದನ್ನು ಹೊತ್ತೊಯ್ಯಬಲ್ಲಷ್ಟು ಹಗುರವಾಗಿರುತ್ತದೆ. ಇದನ್ನು ಆ್ಯಂಟಿ-ಟ್ಯಾಂಕ್ ಶಸ್ತ್ರವಾಗಿ ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ.
(ಒನ್ಇಂಡಿಯಾ ಸುದ್ದಿ)