ಪಂಜಾಬ್ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾದ ಬಿಎಸ್ಎಫ್ ಅಧಿಕಾರ ವಿಸ್ತರಣೆ
ನವದೆಹಲಿ, ಅಕ್ಟೋಬರ್ 15: ಭಾರತದಲ್ಲಿ ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿ ವಿಸ್ತರಣೆ ವಿಚಾರದಲ್ಲಿ ಕಾಂಗ್ರೆಸ್ ಮುಖ್ಯಸ್ಥ ನವಜಿತ್ ಸಿಂಗ್ ಸಿಧು ಆಪ್ತ ಹಾಗೂ ಸಂಪುಟ ಸಚಿವ ಪರ್ಗತ್ ಸಿಂಗ್ ಅಗ್ಗದ ಪ್ರಚಾರಕ್ಕಾಗಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಿರುಗೇಟು ನೀಡಿದ್ದಾರೆ.
ಗಡಿ ಭದ್ರತಾ ಪಡೆ ಅಥವಾ ಬಿಎಸ್ಎಫ್ನ ಅಧಿಕಾರವನ್ನು ಗಡಿಯಿಂದ 50 ಕಿಮೀವರೆಗೆ ವಿಸ್ತರಿಸುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಪರ್ಗತ್ ಸಿಂಗ್ ಆರೋಪ ಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವುದರಿಂದ ವಿವಾದಕ್ಕೆ ಕಾರಣವಾಗಿದೆ.
ಭಾರತದಲ್ಲಿ ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿ ವಿಸ್ತರಿಸಿದ ಕೇಂದ್ರ ಸರ್ಕಾರ
"ಕ್ಯಾಪ್ಟನ್ ಸಾಹಿಬ್ ಏನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ? ಅವರು ಬಿಜೆಪಿಯೊಂದಿಗೆ ಇದ್ದಾರೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಈ ಹಿಂದೆ ಅವರು ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದಾಗ ಭತ್ತ ಸಂಗ್ರಹಣೆ 10 ದಿನ ವಿಳಂಬವಾಗಿತ್ತು. ಈಗ ಅವರು ಮತ್ತೆ ದೆಹಲಿಗೆ ಹೋದ ಸಂದರ್ಭದಲ್ಲಿ ಬಿಎಸ್ಎಫ್ನ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ," ಎಂದು ಪರ್ಗತ್ ಸಿಂಗ್ ಆರೋಪಿಸಿದ್ದರು.
ಕೇಂದ್ರದ ನಿರ್ಧಾರ ಸ್ವಾಗತಿಸಿದ ಅಮರೀಂದರ್ ಸಿಂಗ್
ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರ ನಿರ್ಧಾರವನ್ನು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬೆಂಬಲಿಸಿದ ಬೆನ್ನಲ್ಲೇ ಅವರ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೂ ಮೊದಲು ಕೇಂದ್ರದ ತೀರ್ಮಾನವನ್ನು ಸ್ವಾಗತಿಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್, ಕೇಂದ್ರ ಪಡೆಗಳ ಉಪಸ್ಥಿತಿಯಿಂದಾಗಿ ಆಂತರಿಕ ಭದ್ರತೆ ಬಲಪಡುತ್ತದೆ ಎಂದಿದ್ದರು. ಅಲ್ಲದೇ ಕೇಂದ್ರ ಸಶಸ್ತ್ರ ಪಡೆಗಳನ್ನು ರಾಜಕೀಯಕ್ಕೆ ಎಳೆಯಬಾರದು ಎಂದು ಅವರು ಹೇಳಿದ್ದರು.
ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಹುನ್ನಾರದ ಆರೋಪ
"ಕ್ಯಾಪ್ಟನ್ ಸಾಹಿಬ್ ದಯವಿಟ್ಟು ಈ ರೀತಿ ನಡೆದುಕೊಳ್ಳಬೇಡಿ. ನಾವು ನಿಮ್ಮನ್ನು ತುಂಬಾ ಗೌರವಿಸುತ್ತೇವೆ. ಆದರೆ ನೀವು ಈ ದಾರಿಯಲ್ಲಿ ಹೋಗಬೇಡಿ. ಬಿಜೆಪಿಯೊಂದಿಗೆ ಸೇರಿಕೊಂಡು ಇದನ್ನೆಲ್ಲ ಮಾಡುವುದು ಸರಿಯಲ್ಲ. ಪಂಜಾಬ್ ಅನ್ನು ತೊಂದರೆಗೊಳಗಾದ ರಾಜ್ಯವಾಗಲು ಬಿಡುವುದಿಲ್ಲ ಎಂಬುದನ್ನು ಕೇಸರಿ ಪಕ್ಷವು ಅರ್ಥಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರವು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಹುನ್ನಾರ ನಡೆಸುತ್ತಿದ್ದಾರೆ. ಬಿಜೆಪಿ ಅದರಲ್ಲಿ ಯಶಸ್ವಿಯಾಗಲು ನಾವು ಅವಕಾಶ ನೀಡುವುದಿಲ್ಲ," ಎಂದು ಸಚಿವ ಪರ್ಗತ್ ಸಿಂಗ್ ಹೇಳಿದ್ದರು.
ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆಗೆ ಸಿಎಂ ಚನ್ನಿ ವಿರೋಧ
ಭಾರತ ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕ್ರಮವನ್ನು ರಾಜಕೀಯ ನಾಯಕರು ಪ್ರಶ್ನೆ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ, ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧಾವ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ಈ ನಿರ್ಧಾರವನ್ನು ತಕ್ಷಣವೇ ಹಿಂದಕ್ಕೆ ಪಡೆಯಿರಿ' ಎಂದು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಟ್ವೀಟ್ ಮಾಡಿದ್ದರು. ಅಂತಾರಾಷ್ಟ್ರೀಯ ಗಡಿಗಳಲ್ಲಿ 50 ಕಿ.ಮೀ ವ್ಯಾಪ್ತಿಯಲ್ಲಿ ಬಿಎಸ್ಎಫ್ ಹೆಚ್ಚುವರಿ ಅಧಿಕಾರವನ್ನು ನೀಡುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಒಕ್ಕೂಟ ವ್ಯವಸ್ಥೆ ಮೇಲಿನ ನೇರ ದಾಳಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯುವಂತೆ ನಾನು ಒತ್ತಾಯಿಸುತ್ತೇನೆ," ಎಂದು ಒತ್ತಾಯಿಸಿದ್ದರು.
ಗಡಿಯಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ
ಗುಜರಾತ್ನಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು 80 ಕಿಮೀ ಪ್ರದೇಶದಿಂದ 50 ಕಿಮೀಗೆ ತಗ್ಗಿಸಲಾಗಿದೆ. ರಾಜಸ್ಥಾನದಲ್ಲಿ 50 ಕಿಮೀ ದೂರದಲ್ಲಿ ಹಾಗೆಯೇ ಉಳಿದಿದ್ದು, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ, ಮಣಿಪುರ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿ ಈ ಹಿಂದಿನಂತೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಗಡಿ ಭದ್ರತಾ ಪಡೆ ಕಾಯಿದೆ, 1968ರ ಸೆಕ್ಷನ್ 139, ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ಸೂಚಿಸಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ. ಅಂತಹ ಯಾವುದೇ ಆದೇಶವನ್ನು ಸಂಸತ್ ಪ್ರತಿ ಸದನದ ಮುಂದೆ ಇಡಲಿದ್ದು, ಅದನ್ನು ಮಾರ್ಪಾಡು ಮಾಡುವ ಅಥವಾ ರದ್ದುಗೊಳಿಸುವ ಅಧಿಕಾರವನ್ನು ಸಂಸತ್ ಹೊಂದಿರುತ್ತದೆ.