7 ವರ್ಷದ ಬಳಿಕ ತಂದೆಯನ್ನು ಭೇಟಿಯಾದ ಪಂಜಾಬ್ ಸಿಎಂ ಮಕ್ಕಳು!
ಚಂಡೀಗಢ, ಮಾರ್ಚ್ 20: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಭಗವಂತ್ ಮಾನ್ ಇತ್ತೀಚೆಗೆ ಪಂಜಾಬ್ನ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ಪಕ್ಷವು 2022 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಿಂಹಪಾಲು ಸ್ಥಾನಗಳೊಂದಿಗೆ ಗೆದ್ದ ನಂತರ, ದೇಶದ ಎರಡನೇ ಎಎಪಿ ಸಿಎಂ ಎಂಬ ಇತಿಹಾಸವನ್ನು ನಿರ್ಮಿಸಿದೆ.
ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ಪಂಜಾಬ್ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಆರಂಭದಲ್ಲಿಯೇ ಪಂಜಾಬ್ನಲ್ಲಿ ಭ್ರಷ್ಟಾಚಾರ-ವಿರೋಧಿ ಸಹಾಯವಾಣಿಯನ್ನು ಪ್ರಾರಂಭ ಮಾಡುವುದರಿಂದ ಹಿಡಿದು 25,000 ಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳನ್ನು ಘೋಷಿಸುವವರೆಗೆ ಪಂಜಾಬ್ನಲ್ಲಿ ದೊಡ್ಡ ಕಾರ್ಯಕ್ಕೆ ಮುಂದಾಗಿದ್ದಾರೆ. 10,000 ಉದ್ಯೋಗಗಳನ್ನು ಪಂಜಾಬ್ ಪೋಲೀಸ್ನಲ್ಲಿ ಹೆಚ್ಚಿಸಲಾಗುವುದು ಎಂದು ಕೂಡಾ ಹೇಳಿದ್ದಾರೆ.
ಪಂಜಾಬ್ನಲ್ಲಿ ಎಎಪಿ ಗೆದ್ದಾಗ ವಿಪಕ್ಷ ನಾಯಕರುಗಳು ಮಾಡಿದ್ದೇನು?
ಈ ನಡುವೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಮಗ ಮತ್ತು ಮಗಳು ತನ್ನ ತಂದೆಯನ್ನು ಸುಮಾರು ಏಳು ವರ್ಷಗಳ ನಂತರ ನೋಡಿರುವ ಸಂತಸದಲ್ಲಿ ಇದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ವಿಜಯದ ನಂತರ ತಮ್ಮ ತಂದೆ ಮುಖ್ಯಮಂತ್ರಿಯಾಗಿರುವುದು ನಮಗೆ ಸಂತೋಷವಾಗಿದೆ ಎಂದು ಭಗವಂತ್ ಮಾನ್ ಮಕ್ಕಳು ಸೀರತ್ ಮತ್ತು ದಿಲ್ಶನ್ ಹೇಳಿದ್ದಾರೆ.
ಝೀ ನ್ಯೂಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಭಗವಂತ್ ಮಾನ್ ಅವರ ಮಕ್ಕಳಾದ ಸೀರತ್ ಕೌರ್ ಮಾನ್ ಮತ್ತು ದಿಲ್ಶನ್ ಮಾನ್ ಪಂಜಾಬ್ನಲ್ಲಿ ತಮ್ಮ ತಂದೆಯ ಸಾಧನೆಯ ಬಗ್ಗೆ ಮಾತನಾಡಿದ್ದಾರೆ. ರಾಜ್ಯಕ್ಕೆ ತಮ್ಮ ತಂದೆ ಅಭಿವೃದ್ಧಿ ಮತ್ತು ಸಾಮರಸ್ಯವನ್ನು ತರುತ್ತಾರೆ ಎಂದು ಮಕ್ಕಳು ಹರ್ಷದಿಂದ ನುಡಿದಿದ್ದಾರೆ.
ಪಂಜಾಬ್ ನಂತರ ಛತ್ತೀಸ್ಗಢದ ಮೇಲೆ ಎಎಪಿ ಕಣ್ಣು
ಏಳು ವರ್ಷದಿಂದ ತಂದೆಯಿಂದ ದೂರ ಇರುವ ಮಕ್ಕಳು
ಸೀರತ್ ಮತ್ತು ದಿಲ್ಶನ್ ತಮ್ಮ ತಾಯಿಯೊಂದಿಗೆ ಯುನೈಟೆಡ್ ಸ್ಟೇಟ್ಸ್ನಲ್ಲಿ ದೀರ್ಘಕಾಲದಿಂದ ವಾಸವಾಗಿದ್ದಾರೆ. ಆದರೆ ಭಗವಂತ್ ಮಾನ್ ಅವರ ಪ್ರಮಾಣವಚನ ಸಮಾರಂಭದ ವಿಶೇಷ ಸಂದರ್ಭದಲ್ಲಿ ಪಂಜಾಬ್ಗೆ ಬರಲು ನಿರ್ಧಾರ ಮಾಡಿದ್ದಾರೆ. ಏಳು ವರ್ಷಗಳ ನಂತರ ಮಕ್ಕಳು ತಮ್ಮ ತಂದೆಯನ್ನು ಭೇಟಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ.
ತಂದೆ ಎಲ್ಲಾ ಭರವಸೆಯನ್ನು ಪೂರೈಸುತ್ತಾರೆ ಎಂದ ಮಗಳು
ಝೀ ನ್ಯೂಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಇಬ್ಬರೂ ಮಕ್ಕಳು ತಮ್ಮ ತಂದೆ ಪಂಜಾಬ್ ಮುಖ್ಯಮಂತ್ರಿಯಾದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು. ಭಗವಂತ್ ಮಾನ್ ಅವರ ಪುತ್ರಿ ಸೀರತ್, "ನನ್ನ ತಂದೆ ಪಂಜಾಬ್ನಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ನಾನು ಅವರ ಮೇಲೆ ಹೆಚ್ಚಿನ ಭರವಸೆ ಹೊಂದಿದ್ದೇನೆ. ಅವರು ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಾರೆ ಎಂದು ನನಗೆ ತಿಳಿದಿದೆ," ಎಂದಿದ್ದಾರೆ.
ಪಂಜಾಬ್ನ ಯುವಕರು ತಮ್ಮ ಅಧ್ಯಯನಕ್ಕಾಗಿ ದೇಶದಿಂದ ಹೊರಹೋಗುವ ಬದಲು ರಾಜ್ಯದೊಳಗೆ ಉತ್ತಮ ಅವಕಾಶಗಳನ್ನು ಪಡೆಯಬೇಕು ಎಂದು ಭಗವಂತ್ ಮಾನ್ ಯಾವಾಗಲೂ ಒತ್ತಿಹೇಳುತ್ತಾರೆ. ಇದರ ಬಗ್ಗೆ ಉಲ್ಲೇಖ ಮಾಡಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪುತ್ರಿ ಸೀರತ್ ಕೌರ್, ತನ್ನ ಅಧ್ಯಯನವು ಯುಎಸ್ನಲ್ಲಿ ಮುಂದುವರಿದಿದ್ದರೂ, ಶೀಘ್ರದಲ್ಲೇ ಪಂಜಾಬ್ಗೆ ಬಂದು ತನ್ನ ತಂದೆಯೊಂದಿಗೆ ಸಂಪರ್ಕವನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಪಂಜಾಬ್ ಸಿಎಂ ಪುತ್ರ ದಿಲ್ಶನ್ ಮಾನ್ ಕೂಡ ತಮ್ಮ ತಂದೆಯ ಮೇಲೆ ನಂಬಿಕೆ ಇಟ್ಟಿದ್ದು, ರಾಜ್ಯದಲ್ಲಿ ಈಗ ಉತ್ತಮ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ. ತನ್ನ ತಂದೆಯ ಮೇಲೆ ಹೆಚ್ಚಿನ ಭರವಸೆಯನ್ನು ಹೊಂದಿದ್ದೇನೆ ಮತ್ತು ಅವರು ಪಂಜಾಬ್ ಜನರಿಗೆ ನೀಡಿದ ಭರವಸೆಯನ್ನು ಪೂರೈಸುತ್ತಾರೆ ಎಂದು ತಿಳಿದಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪುತ್ರ ದಿಲ್ಶನ್ ಮಾನ್ ತಿಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)