ಕಾಂಗ್ರೆಸ್ ಸೋಲಿಗೆ ಸಿಧು ಕಾರಣ: ಸಂಪುಟದಿಂದ ಕಿತ್ತೊಗೆಯಲು ಅಮರಿಂದರ್ ಬಯಕೆ
ಚಂಡೀಗಡ, ಮೇ 24: ಅತಿಯಾದ ಭಂಡತನದ ನಡೆಗಳು, ಪಾಕಿಸ್ತಾನದ ಪರವಾದ ಹೇಳಿಕೆಗಳಿಂದ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕಿಡಿಕಾರಿದ್ದಾರೆ. ಜತೆಗೆ, ಸಿಧು ಅವರನ್ನು ಸಂಪುಟದಿಂದ ಕಿತ್ತೊಗೆಯಲು ಅವರು ಮುಂದಾಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ತಮ್ಮ ಸಂಪುಟದ ಸಹೋದ್ಯೋಗಿ ಸಿಧು ಅವರ ಪಾಕಿಸ್ತಾನ ಪರ ನಿಲುವುಗಳೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸಿಕೊಳ್ಳುವುದನ್ನು ಭಾರತೀಯರು ಸಹಿಸುವುದಿಲ್ಲ ಎಂದಿದ್ದಾರೆ.
'ಹೇಳಿ ಸಿಧು, ಯಾವಾಗ ರಾಜೀನಾಮೆ ಕೊಡ್ತೀರಿ?'
'ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸಿದ್ದನ್ನು ಭಾರತೀಯರು, ಮುಖ್ಯವಾಗಿ ಸೇನಾ ಯೋಧರು ಸಹಿಸಿಕೊಳ್ಳುವುದಿಲ್ಲ ಎಂದು ಮೊದಲ ದಿನದಿಂದಲೂ ಹೇಳುತ್ತಿದ್ದೇನೆ. ಪ್ರತಿದಿನವೂ ಅಲ್ಲಿ ಕದನ ವಿರಾಮ ಉಲ್ಲಂಘನೆಯಾಗುತ್ತದೆ, ನಮ್ಮ ಸೈನಿಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವುಗಳಿಗೆ ಆದೇಶ ನೀಡುವುದೇ ಪಾಕಿಸ್ತಾನದ ಜನರಲ್. ಹೀಗಾಗಿ ನೀವು ಅಲ್ಲಿಗೆ ಹೋಗಿ ಅವರನ್ನು ಆಲಂಗಿಸಿಕೊಳ್ಳುವುದು ಸರಿಯಲ್ಲ' ಎಂದು ಸಿಂಗ್, ಸಿಧು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಧು ಅವರು ಅಮರಿಂದರ್ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ನಗರ ಕ್ಷೇತ್ರಗಳಾದ ಭಟಿಂಡಾ ಮತ್ತು ಗುರುದಾಸ್ಪುರಗಳಲ್ಲಿ ಸೋಲು ಅನುಭವಿಸಿದೆ. ಸಿಧು ಅವರ ಅತಿರೇಕದ ನಡೆಗಳೇ ಇಲ್ಲಿನ ಸೋಲುಗಳಿಗೆ ಕಾರಣ ಎಂದು ಸಿಂಗ್ ಆರೋಪಿಸಿದ್ದಾರೆ.
ಕಾಂಗ್ರೆಸ್ನಲ್ಲಿಯೂ ಶುರುವಾಯ್ತು ಸಿಧು ರಂಪಾಟ: ಸಿಎಂ ವಿರುದ್ಧ ಗರಂ
ಅಲ್ಲದೆ, ಸಿಧು ಅವರು ಸಚಿವರಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ. ಪಂಜಾಬ್ನಲ್ಲಿ ನಗರಗಳಲ್ಲಿನ ಮತ ಬ್ಯಾಂಕ್ಗಳೇ ಕಾಂಗ್ರೆಸ್ನ ಬೆನ್ನೆಲುಬು. ಸಿಧು ಆ ಬೆನ್ನೆಲುಬನ್ನೇ ಮುರಿದಿದ್ದಾರೆ ಎಂದು ಕಿಡಿಕಾರಿದ್ದಾರೆ.
Captain Amarinder Singh on Navjot Singh Sidhu: Indians especially servicemen will not tolerate hugging the Pakistani Army Chief. pic.twitter.com/AVZFgIraR2
— ANI (@ANI) 23 May 2019
ಚಂಡೀಗಡ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಪತ್ನಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಇದಕ್ಕೆ ಅಮರಿಂದರ್ ಸಿಂಗ್ ಅವರೇ ಕಾರಣ ಎಂದು ಸಿಧು ಆರೋಪಿಸಿದ್ದರು. ಈ ಎಲ್ಲ ಸಂಗತಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಿರಿಸಿ ಚರ್ಚಿಸಲು ಅಮರಿಂದರ್ ತೀರ್ಮಾನಿಸಿದ್ದಾರೆ. ಸಿಧು ಅವರನ್ನು ಸಂಪುಟದಿಂದ ಹೊರಹಾಕುವುದು ಒಳಿತು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.