ಪಂಜಾಬ್ ಜೈಲಿನಲ್ಲಿ ನಿಂಬೆ ಹಗರಣ: ಜೈಲಾಧಿಕಾರಿ ಅಮಾನತು
ಚಂಡೀಗಢ ಮೇ 7: ನಿಂಬೆ ಹಣ್ಣು ಖರೀದಿಗೆ ನಕಲಿ ದಾಖಲಾತಿ ತೋರಿಸಿ ಜೈಲಾಧಿಕಾರಿಯೊಬ್ಬರು ಸಿಕ್ಕಿಬಿದ್ದ ಘಟನೆ ಪಂಜಾಬ್ನಲ್ಲಿ ನಡೆದಿದೆ. ನಿಂಬೆಹಣ್ಣು ಖರೀದಿಗೆ ನಕಲಿ ನಮೂದುಗಳನ್ನು ಸೇರಿಸಿದ ಆರೋಪ ಸೇರಿದಂತೆ ಕೈದಿಗಳ ಆಹಾರಕ್ಕಾಗಿ ಮಂಜೂರು ಮಾಡಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಪಂಜಾಬ್ನ ಜೈಲು ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಸುಮಾರು 50 ಕೆಜಿ ನಿಂಬೆ ಹಣ್ಣುಗಳನ್ನು ಖರೀದಿಸಲಾಗಿದೆ ಎಂದು ಸುಳ್ಳು ದಾಖಲೆಗಳನ್ನು ತೋರಿಸಿದ ಕಪುರ್ತಲಾ ಮಾಡರ್ನ್ ಜೈಲಿನ ಸೂಪರಿಂಟೆಂಡೆಂಟ್ ಗುರ್ನಮ್ ಲಾಲ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಗುರ್ನಮ್ ಲಾಲ್ ದಾಖಲೆಯಲ್ಲಿ ತೋರಿಸಿದಷ್ಟು ನಿಂಬೆ ಹಣ್ಣುಗಳು ಕೈದಿಗಳಿಗೆ ತಲುಪಿಯೇ ಇಲ್ಲ ಎಂದು ಸ್ವತ: ಕೈದಿಗಳೇ ಹೇಳಿದ್ದಾರೆ.
ಕಾಸರಗೋಡು: 200 ಕೆಜಿ ಕೊಳೆತ ಮೀನು ವಶ- ಮೀನು ಹಿಂತಿರುಗಿಸಲು ಮಾರಾಟಗಾರರ ಪಟ್ಟು
ಕಳೆದ ತಿಂಗಳು ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿತ್ತು. ಪ್ರತಿ ಕೆಜಿಗೆ 200 ರಷ್ಟಿದ್ದಾಗ ನಿಂಬೆಹಣ್ಣಿನ ನಕಲಿ ನಮೂದುಗಳನ್ನು ದಾಖಲೆಗಳಲ್ಲಿ ಸೇರಿಸಲಾಗಿತ್ತು. ಆದರೆ ತಪಾಸಣಾ ತಂಡ ಜೈಲಿಗೆ ಭೇಟಿ ನೀಡಿದಾಗ ನಿಂಬೆಹಣ್ಣು ಸಿಕ್ಕಿಲ್ಲ. ಈ ಬಗ್ಗೆ ಕೈದಿಗಳು ತಂಡದ ಸದಸ್ಯರಿಗೆ ಕೈದಿಗಳು ಸ್ಪಷ್ಟವಾಗಿ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.
ಘಟನೆ ಬಳಿಕ ಪಂಜಾಬ್ ಜೈಲು, ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರು ಜೈಲು ಸೂಪರಿಂಟೆಂಡೆಂಟ್ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಮಾತ್ರವಲ್ಲದೆ ತನಿಖೆಯಲ್ಲಿ ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದು, ಗುರ್ನಾಮ್ ಲಾಲ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈದಿಗಳಿಗೆ ಕಳಪೆ ಆಹಾರ:
ಅಕ್ರಮಗಳ ಬಗ್ಗೆ ಜೈಲು ಕೈದಿಗಳಿಂದ ಆರೋಪಗಳು ಹೊರಬಿದ್ದ ನಂತರ, ಎಡಿಜಿಪಿ (ಜೈಲು) ವೀರೇಂದ್ರ ಕುಮಾರ್ ಅವರು ಮೇ 1 ರಂದು ಇಬ್ಬರು ಹಿರಿಯ ಅಧಿಕಾರಿಗಳನ್ನು ಹಠಾತ್ ತಪಾಸಣೆಗಾಗಿ ಜೈಲಿಗೆ ಕಳುಹಿಸಿದ್ದರು. ಈ ವೇಳೆ ಕೈದಿಗಳಿಗೆ ನೀಡಲಾದ ಆಹಾರವು ಕಳಪೆ ಗುಣಮಟ್ಟ ಮತ್ತು ಅಸಮರ್ಪಕವಾಗಿದೆ ಎಂದು ತಂಡವು ಕಂಡುಹಿಡಿದಿದೆ. ಜೈಲಿನಲ್ಲಿ ಬೇಯಿಸಿದ ಪ್ರತಿ ಚಪಾತಿ 50 ಗ್ರಾಂಗಿಂತ ಕಡಿಮೆ ತೂಕವನ್ನು ಹೊಂದಿದ್ದು, ಹಿಟ್ಟಿನ ಪೂರೈಕೆಯನ್ನು ಸಹ ಬೇರೆಡೆಗೆ ತಿರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಲು ದಾಖಲೆಗಳಲ್ಲಿ ತರಕಾರಿ ಖರೀದಿಯ ನಮೂದುಗಳಲ್ಲಿ ಅಕ್ರಮಗಳಿವೆ ಎಂದು ತನಿಖಾ ತಂಡ ತಮ್ಮ ವರದಿಯಲ್ಲಿ ಹೇಳಿದೆ. ಜೈಲು ಅಧೀಕ್ಷಕರು 5 ದಿನಗಳ ಬೇಡಿಕೆಯನ್ನು ಪೂರೈಸಲು ತರಕಾರಿ ಖರೀದಿಯನ್ನು ದಾಖಲೆಗಳಲ್ಲಿ ತೋರಿಸಿದ್ದರು. ಆದರೆ ಜೈಲಿಗೆ ಈ ಪದಾರ್ಥಗಳು ಸಾಗಣೆಯೇ ಆಗಿಲ್ಲ ಎಂದು ಕೈದಿಗಳು ಹೇಳಿದ್ದಾರೆ. ಇದರಿಂದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.