ಪಂಜಾಬ್ನಲ್ಲಿ ಲಖಿಂಪುರನಂತಹ ಘಟನೆ: ಕಾಂಗ್ರೆಸ್ ಕಾರಣ ಎಂದ ಅಕಾಲಿದಳ
ಚಂದೀಗಢ ನವೆಂಬರ್ 11: ಪಂಜಾಬ್ನ ಫಿರೋಜ್ಪುರ್ನಲ್ಲಿ ನವೆಂಬರ್ 10ರಂದು ಕಾರ್ಯಕ್ರಮವೊಂದರಲ್ಲಿ ಮಾಜಿ ಕೇಂದ್ರ ಸಚಿವೆ, ಅಕಾಲಿದಳ ನಾಯಕಿ ಹರ್ ಸಿಮ್ರತ್ ಕೌರ್ ಬಾದಲ್ ಭಾಗವಹಿಸಿದ್ದರು. ಹರ್ ಸಿಮ್ರತ್ರನ್ನು ಪ್ರಶ್ನಿಸಲು ಮುಂದಾದ ರೈತರಿಗೆ ಕಾರಿನಿಂದ ಗುದ್ದಲಾಗಿದೆ ಎನ್ನುವ ವಿಡಿಯೋಗಳು ವೈರಲ್ ಆಗಿವೆ. ಅಕಾಲಿದಳ ಶಾಸಕ ಹಾಗೂ ಆತನ ಬೆಂಬಲಿಗರು ರೈತ ನಾಯಕ ಹರ್ನೇಕ್ ಸಿಂಗ್ ಅವರನ್ನು 1 KM ದೂರದ ವರೆಗೆ ಎಳೆದೊಯ್ದಿದ್ದಾರೆ. ಜೊತೆಗೆ ರೈತರ ಮೇಲೆ 7 ಸುತ್ತಿನ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆಂದು ರೈತರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಅಕಾಲಿ ದಳ ತಳ್ಳಿ ಹಾಕಿದೆ. ಮಾಜಿ ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ನಿನ್ನೆ (ನವೆಂಬರ್ 10) ಪಂಜಾಬ್ನ ಫಿರೋಜ್ಪುರ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ವೇಳೆ ಸ್ಥಳಕ್ಕೆ ಆಗಮಿಸಿದ ರೈತರು ಕೌರ್ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಬೇಕಿದೆ ಎಂದು ಅವರ ಬೆಂಬಲಿಗರಿಗೆ ತಿಳಿಸಿದ್ದಾರೆ. ಈ ವೇಳೆ ಕೌರ್ ಅವರ ಭಾಷಣ ಮುಗಿದ ಬಳಿಕ ಅವರೊಂದಿಗೆ ಮಾತುಕತೆಗೆ ಅವಕಾಶ ಕಲ್ಪಿಸುವುದಾಗಿ ಅಕಾಲಿದಳ ಕಾರ್ಯಕರ್ತರು ರೈತರಿಗೆ ಭರವಸೆ ನೀಡಿದ್ದಾರೆ.
ರೈತರ ಆರೋಪವೇನು?
ಕೌರ್ ತಮ್ಮ ಭಾಷಣ ಮುಗಿಸಿ ವೇದಿಕೆಯಿಂದ ಇಳಿದು ಹೊರಟಾಗ ರೈತರಿಗೆ ಅವರೊಂದಿಗೆ ಚರ್ಚೆಗೆ ಅವಕಾಶ ನಿರಾಕರಿಸಲಾಗಿದೆ. ಈ ವೇಳೆ ಅಕಾಲಿದಳ ನಾಯಕಿಗೆ ಪ್ರಶ್ನೆ ಕೇಳಲು ಮುಂದಾದ ರೈತ ನಾಯಕ ಹರ್ನೇಕ್ ಸಿಂಗ್ ಹಾಗೂ ಕೆಲ ರೈತರ ಮೇಲೆ ಅಕಾಲಿದಳ ಶಾಸಕ ವರದೇವ್ ಸಿಂಗ್ ನೋನಿ ಮತ್ತವರ ಬೆಂಬಲಿಗರು ಫಾರ್ಚುನರ್ ಕಾರಿನಿಂದ ಗುದ್ದಿಸಿದ್ದಲ್ಲದೇ ಹರ್ನೇಕ್ ಹಾಗೂ ಮತ್ತೋರ್ವನನ್ನು ಒಂದು ಕಿ.ಮೀಟರ್ಗೂ ಹೆಚ್ಚು ದೂರ ಎಳೆದೊಯ್ದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅಕಾಲಿದಳದ ಗೂಂಡಾ ಪಡೆ, ರೈತ ನಾಯಕರ ಮೇಲೆ ಏಳು ಸುತ್ತು ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದೆ ಎಂದು ಹರ್ನೇಕ್ ಸಿಂಗ್ ಆರೋಪಿಸಿದ್ದಾರೆ.ಕಾರು ಗುದ್ದಿದ ಕೂಡಲೇ ಅದರ ಮುಂಭಾಗದ ಬಾನಟ್ ಮೇಲೆ ಬಿದ್ದ ಹರ್ನೇಕ್ ಸಿಂಗ್ ಹಾಗೂ ಮತ್ತೋರ್ವ ರೈತ ಪ್ರಾಣ ಉಳಿಸಿಕೊಳ್ಳಲು ತಮ್ಮನ್ನು ಗುದ್ದಿದ ಅದೇ ಕಾರಿನ ಬಾನಟ್ಗೆ ಜೋತು ಬಿದ್ದಿದ್ದಾರೆ. ಇಷ್ಟಾದರೂ ಕಾರು ನಿಲ್ಲಿಸಿದ ಅಕಾಲಿದಳದ ಗೂಂಡಾ ಪಡೆ ರೈತರನ್ನು ಎಳೆದುಕೊಂಡೇ ಕಿ.ಮೀ ಹೆಚ್ಚು ದೂರ ವೇಗವಾಗಿ ಸಾಗಿದೆ. ರೈತರಿಗೆ ಕಾರಿನಿಂದ ಗುದ್ದಿಸಿ ಎಳೆದೊಯ್ದ ವಿಡಿಯೋ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಪಾರಾಗಿ ಬಂದಿರುವ ಭಾರತೀಯ ಕಿಸಾನ್ ಯೂನಿಯನ್ ಡಕೌಂಡ ಸಂಘಟನೆಯ ನಾಯಕ ಹರ್ನೇಕ್ ಸಿಂಗ್ ಫಿರೋಜ್ಪುರ್ ಠಾಣೆ ಎದುರು ನಿಂತು ಘಟನೆಯ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದು, ಆರೋಪಿಗಳ ಮೇಲೆ ಸೆಕ್ಷನ್ 307 ಅಡಿಯಲ್ಲಿ FIR ದಾಖಲಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ದಾಳಿಗೆ ಕಾಂಗ್ರೆಸ್ 'ಗೂಂಡಾಗಳು' ಕಾರಣ:-
ಕಾಂಗ್ರೆಸ್ "ಗೂಂಡಾಗಳು" ತಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಎಸ್ಎಡಿ ಹೇಳಿಕೆ ನೀಡಿದೆ. ಮಾಜಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಕಾರ್ಯಕ್ರಮದ ನಂತರ "ಕಾಂಗ್ರೆಸ್ ಗೂಂಡಾಗಳು" ರೈತರಂತೆ ನಟಿಸಿದ್ದಾರೆ ಮತ್ತು ಜೋಗಿಂದರ್ ಜಿಂದು ಮತ್ತು ವರ್ದೇವ್ ಸೇರಿದಂತೆ ಹಿರಿಯ ಎಸ್ಎಡಿ ನಾಯಕರ ಮೇಲೆ ದಾಳಿ ಮಾಡಿ ಗುಂಡು ಹಾರಿಸಿದ್ದಾರೆ ಎಂದು ಎಸ್ಎಡಿ ಆರೋಪಿಸಿದೆ. ಗುಂಡು ಹಾರಿಸಿದ್ದು ಕಾಂಗ್ರೆಸ್ ನಾಯಕರೇ ಹೊರತು ಎಸ್ಎಡಿ ಕಾರ್ಯಕರ್ತರಲ್ಲ ಎಂದು ಎಸ್ಎಡಿ ಹೇಳಿದೆ.
ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ರಿಂಕು ಗ್ರೋವರ್, ಕೌನ್ಸಿಲರ್ ಪರ್ಮಿಂದರ್ ಹಂಡಾ ಮತ್ತು ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಬಲ್ಬೀರ್ ಸಿಂಗ್ ವಿರ್ಕ್ ಅವರು ಎಸ್ಎಡಿ ವಿರುದ್ಧ ಬಿಕೆಯು (Dakaunda) ವಸ್ತ್ರ ಧರಿಸಿ ಪ್ರತಿಭಟನೆಯಲ್ಲಿ ತೊಡಗಿರುವ ಛಾಯಾಚಿತ್ರ ಪುರಾವೆಗಳು ಪಕ್ಷದ ಬಳಿ ಇವೆ ಎಂದು ಅದು ಹೇಳಿದೆ. "ಕಾಂಗ್ರೆಸ್ ಶಾಸಕರು ಇಂತಹ ಚಟುವಟಿಕೆಗಳಲ್ಲಿ ತೊಡಗಿರುವುದು ಇದೇ ಮೊದಲಲ್ಲ" ಎಂದು ಅವರು ಹೇಳಿದರು. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಅವರಿಗೆ ಎಸ್ಎಡಿ ಮನವಿ ಮಾಡಿದೆ. ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸುವಂತೆ ಎಸ್ಎಡಿ ಮುಖ್ಯಸ್ಥ ಸುಖ್ಬ್ರ್ ಸಿಂಗ್ ಬಾದಲ್ ಕೂಡ ಚನ್ನಿ ಅವರಿಗೆ ಒತ್ತಾಯಿಸಿದ್ದಾರೆ.
Farmers were dragged & shot at when they had gathered at Ferozepur to question Ex cabinet minister Harsimrat Kaur Badal.
— Tractor2ਟਵਿੱਟਰ (@Tractor2twitr) November 10, 2021
As per farm leader Harnek Singh Mehma, they were dragged for more than a KM and 7 shots were fired at him.
A CCTV footage has emerged now!#FarmersProtest pic.twitter.com/gtmoPNlPlu
ಜೊತೆಗೆ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗಿದೆ. ಪಂಜಾಬ್ನಲ್ಲಿ ಮತ್ತೊಂದು ಲಖಿಂಪುರ ಖೇರಿ ಘಟನೆ ನಮಗೆ ಬೇಡ. ಎಸ್ಎಡಿ ಮುಖಂಡರಾದ ವರದೇವ್ ಮಾನ್ ಮತ್ತು ಜೋಗಿಂದರ್ ಸಿಂಗ್ ಜಿಂದು ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರೈತರೇ ಹೇಳಿಕೆ ನೀಡುತ್ತಿದ್ದಾರೆ. ವೀಡಿಯೋ ತುಣುಕೂ ಅದಕ್ಕೆ ಸಾಕ್ಷಿ. ಹೀಗಿರುವಾಗ ಅವರು ನನ್ನನ್ನು ಅಥವಾ ಇತರ ಕಾಂಗ್ರೆಸ್ಸಿಗರನ್ನು ಹೇಗೆ ದೂರುತ್ತಾರೆ? ಎಂದು ಹರಿಹಾಯ್ದಿದ್ದಾರೆ.