ಅಮರಿಂದರ್ ಸಿಂಗ್ 117 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕಷ್ಟ: ಜಸ್ಬೀರ್ ಗಿಲ್
ಚಂಡಿಗಢ್ ಡಿಸೆಂಬರ್ 7: ಪಂಜಾಬ್ನ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಪಕ್ಷಗಳು ಹಲವಾರು ಕಾರ್ಯತಂತ್ರ ರೂಪಿಸುತ್ತಿವೆ. ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಜನಾಶೀರ್ವಾದ ಪಡೆಯಲು ಪಕ್ಷಗಳು ಬಿಗ್ ಪ್ಲ್ಯಾನ್ ಮಾಡುತ್ತಿವೆ. ಪಂಜಾಬ್ನಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ತೊರೆದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಬಗ್ಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿಕೆ ನೀಡಿದ್ದು ಮುಂಬರುವ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಸಂಸದ ಜಸ್ಬೀರ್ ಸಿಂಗ್ ಗಿಲ್ ಎರಡೂ ಪಕ್ಷಗಳಿಗೆ 117 ಅಭ್ಯರ್ಥಿಗಳನ್ನು ಕಣಕ್ಕಿಳೀಸುವುದು ಕಷ್ಟ ಎಂದು ಟೀಕಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆ ಮೈತ್ರಿ ಮಾಡಿಕೊಂಡು 117 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಜಸ್ಬೀರ್ ಸಿಂಗ್ ಗಿಲ್ ಎರಡೂ ಪಕ್ಷಗಳಿಗೆ 117 ಅಭ್ಯರ್ಥಿಗಳನ್ನು ಪಡೆಯುವುದು ಕಷ್ಟ ಎಂದಿದ್ದಾರೆ.
ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿದ ಗಿಲ್, "ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಯೋಜಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ರಾಜಕೀಯದಲ್ಲಿ ಉಳಿದುಕೊಳ್ಳುವ ಸಾಧ್ಯತೆಗಳು ಕೊನೆಗೊಳ್ಳುತ್ತಿವೆ. ಮುಂಬರುವ ವಿಧಾನಸಭಾ ಚುನಾವಣೆಗೆ ಕ್ಯಾಪ್ಟನ್ ಹೊಸ ಪಕ್ಷ ಕಟ್ಟಿಕೊಂಡು ಬಿಜೆಪಿಗೆ 117 ಅಭ್ಯರ್ಥಿಗಳನ್ನು ಪಡೆಯುವುದು ಕಷ್ಟ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ಭಾರತೀಯ ಜನತಾ ಪಕ್ಷದೊಂದಿಗೆ ಹೋಗದೆ ಸುಮ್ಮನಿದ್ದಿದ್ದರೆ, ಬಹುಶಃ ಅವರು ಕಾಂಗ್ರೆಸ್ಗೆ ಮರಳುವುದು ಸಾಧ್ಯವಿತ್ತು, ಆದರೆ ಅವರು ಬಿಜೆಪಿಗೆ ಹೋದ ತಕ್ಷಣ ಅವರು ಕಾಂಗ್ರೆಸ್ ಪಕ್ಷಕ್ಕೆ ಮರಳಿದರೂ ಅವರನ್ನು ಸ್ವಾಗತಿಸುವ ಸಾಧ್ಯತೆ ಇಲ್ಲ" ಎಂದು ಗಿಲ್ ಹೇಳಿದರು.
ರೈತರ ಪ್ರತಿಭಟನೆಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದರು, 'ಪಂಜಾಬ್ನ ಪ್ರತಿಯೊಂದು ಹಳ್ಳಿಯ ಜನರು ರೈತರ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಬಿಜೆಪಿಯಿಂದ ಉಂಟಾದ ತೊಂದರೆಗಳನ್ನು ರೈತರೆಲ್ಲರೂ ಅನುಭವಿಸಿದ್ದಾರೆ. ಪಂಜಾಬ್ನಲ್ಲಿ ಬಿಜೆಪಿಗೆ ರಾಜಕೀಯ ಹಿನ್ನೆಲೆ ಇಲ್ಲ. ಪ್ರತಿ ಹಳ್ಳಿಯ ಜನರು ರೈತ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ ಪಂಜಾಬ್ನಲ್ಲಿ ಬಿಜೆಪಿಗೆ ಬೆಂಬಲವಿಲ್ಲ. ಇಲ್ಲಿ ಕ್ಯಾಪ್ಟನ್ ಬೇರೆ ಯಾವುದೇ ಪಕ್ಷದೊಂದಿಗೆ ಚುನಾವಣೆಗೆ ಸ್ಪರ್ಧಿಸಿದರೂ ಅದು ಕಾಂಗ್ರೆಸ್ ಮೇಲೆ ಪರಿಣಾಮ ಬೀರುವುದಿಲ್ಲ' ಎಂದು ಅವರು ಹೇಳಿದರು.
ಗಮನಾರ್ಹವೆಂದರೆ, ಪ್ರಸ್ತುತ ರಾಜ್ಯ ಪಂಜಾಬ್ ಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಜಗಳದ ನಂತರ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದರು. ಆದರೀಗ ಬಿಜೆಪಿ ಸೇರುವುದಾಗಿ ಹೇಳಿಕೊಂಡಿದ್ದಾರೆ. ಇದು ಅಮರಿಂದರ್ ಸಿಂಗ್ಗೆ ಮುಳುವಾಗುತ್ತಾ ಅಥವಾ ಹೂವಿನ ಹಾದಿಯಾಗುತ್ತಾ ಕಾದು ನೋಡಬೇಕಿದೆ. ಯಾಕೆಂದರೆ ಈ ಹಿಂದೆಲ್ಲಿ ಅಮರಿಂದರ್ ಸಿಂಗ್ ಕಾಂಗ್ರೆಸ್ನಲ್ಲಿದ್ದಾಗ ಬಹುಮತ ಪಡೆದು ಸರ್ಕಾರ ರಚನೆಯಾಗಿತ್ತು. ಆದರೀಗ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇದೆಲ್ಲವೂ ಉಲ್ಟಾ ಹೊಡೆಯುವ ಸಾಧ್ಯತೆ ಇದೆ. ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸದೇ ಇದ್ದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಅಮರಿಂದರ್ ಸಿಂಗ್ ಗೆಲುವು ಭಾಗಶ: ಖಚಿತವಿಲ್ಲ ಎನ್ನಲಾಗುತ್ತಿದೆ.
2017 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿತು. ಜೊತೆಗೆ 10 ವರ್ಷಗಳ ನಂತರ SAD-BJP ಸರ್ಕಾರವನ್ನು ಹೊರಹಾಕಿತು. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿರೋಮಣಿ ಅಕಾಲಿ ದಳ (ಎಸ್ಎಡಿ) ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿದೆ. 2022ರಲ್ಲಿ ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.