ಭಾರತದ ಈ ನಗರದಿಂದ ವಿದೇಶಕ್ಕೆ ಒಂದೇ ಒಂದು ವಿಮಾನ ಹಾರಲ್ಲ!
ನವದೆಹಲಿ, ಅಕ್ಟೋಬರ್.25: ಕೊರೊನಾವೈರಸ್ ಎಂಬ ಸಾಂಕ್ರಾಮಿಕ ಪಿಡುಗಿನಿಂದ ವಿಮಾನ ಹಾರಾಟಕ್ಕೆ ಕಡಿವಾಣ ಹಾಕಲಾಗಿದೆ. ಚಂಡೀಘರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಸಂಚಾರದ ವೇಳಾಪಟ್ಟಿ ಬಿಡುಗಡೆಗೊಳಿಸಲಾಗಿದೆ.
ಅಕ್ಟೋಬರ್.25ರಿಂದ 2021ರ ಮಾರ್ಚ್ ವರೆಗೂ ಚಂಡೀಘರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಂದೇ ಒಂದು ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸುವುದಿಲ್ಲ ಎಂದು ವೇಳಾಪಟ್ಟಿಯಿಂದ ತಿಳಿದು ಬಂದಿದೆ. ಪ್ರತಿನಿತ್ಯ 36 ವಿಮಾನಗಳ ಹಾರಾಟಕ್ಕೆ ಇತ್ತೀಚಿಗಷ್ಟೇ ಅವಕಾಶ ನೀಡಲಾಗಿದ್ದು, ಇದೀಗ ವಾಣಿಜ್ಯ ವಿಮಾನಗಳ ಹಾರಾಟ ಸಂಖ್ಯೆಯನ್ನೂ ಕೂಡಾ 29ಕ್ಕೆ ಇಳಿಸಲಾಗಿದೆ.
ವಿಮಾನದಲ್ಲಿ ಉಗ್ರ ಇದ್ದಾನೆ ಎಂದು ಕೂಗಿದ ಪ್ರಯಾಣಿಕ ಪೊಲೀಸರ ಅತಿಥಿ
ದೇಶದಲ್ಲಿ ಸಾಂಕ್ರಾಮಿಕ ಪಿಡುಗು ಹೆಚ್ಚಾದ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಚಳಿಗಾಲದ ಸಂದರ್ಭದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಚಂಡೀಘರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಾಕಷ್ಟು ವಿಮಾನಗಳ ಸಂಚಾರ ಸ್ಥಗಿತಗೊಳಿಸಲಾಗುತ್ತಿತ್ತು. ಕಳೆದ ಸೆಪ್ಟೆಂಬರ್ 18ರಂದು ಭಾರತೀಯ ವಾಯುಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಈ ಬಗ್ಗೆ ತಿಳಿಸಿತ್ತು. ಸರಕುಗಳನ್ನು ಹೊತ್ತ ವಿದೇಶಿ ವಿಮಾನಗಳು ಭಾರತದ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದ್ರಾಬಾದ್ ನಗರಗಳಿಗಷ್ಟೇ ಸಂಚರಿಸುವುದಕ್ಕೆ ಅನುಮತಿ ನೀಡಲಾಗಿದೆ.
ತಿಂಗಳುಗಳಿಗೆ ಮೊದಲೇ ವೇಳಾಪಟ್ಟಿಗೆ ಅನುಮೋದನೆ
ಚಳಿಗಾಲ ಸೇರಿದಂತೆ ಎಲ್ಲ ಅವಧಿಯಲ್ಲಿ ಸಂಚರಿಸುವ ನಿಗದಿತ ವಿಮಾನಗಳ ವೇಳಾಪಟ್ಟಿಗೆ ತಿಂಗಳಿಗೂ ಮೊದಲೇ ವಿಮಾನಯಾನ ಸಂಸ್ಥೆಯಿಂದ ಅನುಮೋದನೆ ಪಡೆಯಬೇಕಾಗಿದೆ. ಈ ಹಿನ್ನೆಲೆ ಚಳಿಗಾಲದಲ್ಲಿ ಸಂಚರಿಸಲಿರುವ ನಿಗದಿತ ವಿಮಾನಗಳ ವೇಳಾಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಇನ್ನು, ನಿಗದಿಗೊಳಿಸದ ವಿಮಾನಗಳು ಚಾರ್ಟರ್ ವಿಮಾನಗಳಾಗಿದ್ದು, ಅಗತ್ಯಕ್ಕೆ ತಕ್ಕಂತೆ ಈ ವಿಮಾನಗಳು ಸಂಚರಿಸಲಿವೆ.
ವಿಮಾನಯಾನ ಕಾರ್ಯದರ್ಶಿಯವರಿಗೆ ಮನವಿ
ಅಮೃತಸರ್ ವಿಮಾನ ನಿಲ್ದಾಣದಿಂದ ಸರಕು ಸೇವೆಗಳ ಕಾರ್ಯಾಚರಣೆ ಹೆಚ್ಚಿಸುವ ವಿಷಯದ ಕುರಿತು ಸಭೆ ಕರೆಯುವಂತೆ ವಿಮಾನಯಾನ ಸಚಿವ ಹಾರ್ದಿಪ್ ಸಿಂಗ್ ಪುರಿ ಅವರು ವಿಮಾನಯಾನ ಕಾರ್ಯದರ್ಶಿ ಪಿ.ಎಸ್.ಖರೋಲಾರಿಗೆ ಸೂಚನೆ ನೀಡಿದ್ದಾರೆ. "ಅಮೃತಸರ ಸಾಹಿಬ್ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸರಕು ಸಂಗ್ರಹಣೆ ಇರಲಿಲ್ಲ. ಹೀಗಾಗಿ ಅಗತ್ಯವಾದ ಎಲ್ಲ ಸಹಾಯ ಮಾಡುವಂತೆ ನಾನು ಕಾರ್ಯದರ್ಶಿಯವರಿಗೆ ವಿನಂತಿಸಿದ್ದೇನೆ" ಎಂದು ಹೇಳಿದ್ದಾರೆ.
ಉದಾರ ನೀತಿ ಬಗ್ಗೆ ಸಚಿವ ಹಾರ್ದಿಪ್ ಸಿಂಗ್ ಪುರಿ ಟ್ವೀಟ್
ಭಾರತವು ಬಹಳ ಉದಾರವಾದ ವಾಯು ಸರಕು ನೀತಿಯನ್ನು ಅನುಸರಿಸುತ್ತದೆ ಎಂದು ಸಚಿವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ವಿದೇಶಿ ಮತ್ತು ಭಾರತೀಯ ವಿಮಾನಗಳು ಅಮೃತಸರ ಮತ್ತು ಚಂಡೀಘರ್ ಸೇರಿದಂತೆ ದೇಶದ ಯಾವುದೇ ನಿಗದಿತ ಅಂತರರಾಷ್ಟ್ರೀಯ ಸರಕು ಹಾರಾಟವನ್ನು ನಡೆಸುವುದಕ್ಕೆ ಅವಕಾಶವಿದೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
Recommended Video
ಕೃಷಿ ಉಡಾನ್ ಯೋಜನೆ ಮೂಲಕ ಉತ್ತೇಜನ
ಕೃಷಿ ಸರಕುಗಳ ರಫ್ತಿಗೆ ಉತ್ತೇಜನ ನೀಡುವ ಹಿನ್ನೆಲೆ ಆಗಸ್ಟ್ನಲ್ಲಿ ಕೃಷಿ ಉಡಾನ್ ಯೋಜನೆ ಪ್ರಾರಂಭಿಸಲಾಗಿತ್ತು. ಈ ಯೋಜನೆ ಅಡಿಯಲ್ಲಿ ಯಾವುದೇ ವಿಮಾನವು ಹೊತ್ತು ತಂದ ಸರಕುಗಳಲ್ಲಿ ಶೇ.50ಕ್ಕಿಂತ ಹೆಚ್ಚು ಕೃಷಿ ಸರಕು ಆಗಿದ್ದಲ್ಲಿ ಆ ವಿಮಾನದ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕವನ್ನು ಮನ್ನಾ ಮಾಡಲಾಗುತ್ತಿತ್ತು. ಅಂದು ಯೋಜನೆಗೆ ಅಮೃತಸರ್ ಸಾಹೇಬ್, ಅದಂಪುರ್, ಬಥಿಂದಾ, ಪಠಾಣಕೋಟ್, ಚಂಡೀಘರ್, ಲೂಧಿಯಾನ್ ವಿಮಾನ ನಿಲ್ದಾಣಗಳನ್ನು ಸೇರ್ಪಡೆಗೊಳಿಸಲಾಗಿತ್ತು.