ಪಾಕಿಸ್ತಾನ ತೊರೆದು ಭಾರತಕ್ಕೆ ನಡೆದು ಬಂದ ನೂರಾರು ಹಿಂದು ಕುಟುಂಬಗಳು
ಅಮೃತ್ಸರ, ಫೆಬ್ರವರಿ 03: ಪೌರತ್ವ ಕಾಯ್ದೆ ಯ ಪರಿಣಾಮ ಪಾಕಿಸ್ತಾನ-ಬಾಂಗ್ಲಾದೇಶ ದಲ್ಲಿ ನೆಲೆಸಿದ್ದ ಹಿಂದೂಗಳು ಭಾರತಕ್ಕೆ ಆಗಮಿಸುತ್ತಿದ್ದಾರೆ.
ಕಳೆದ ಒಂದು ವಾರದಲ್ಲಿ ನೂರಾರು ಹಿಂದು ಕುಟುಂಬಗಳು ಪಾಕಿಸ್ತಾನ ತೊರೆದು ಪಂಜಾಬ್ ಗಡಿಯ ಮೂಲಕ ನಡೆದುಕೊಂಡೇ ಭಾರತ ಪ್ರವೇಶಿಸಿದ್ದಾರೆ.
ಪಾಕಿಸ್ತಾನ ಭಾರತದ ಗಡಿಯಾಗಿರುವ ವಾಘಾ-ಅಟಾರಿ ಗಡಿಯ ಮೂಲಕ ನೂರಾರು ಕುಟುಂಬಗಳು ನಡೆದುಕೊಂಡೇ ಭಾರತ ಪ್ರವೇಶಿಸುತ್ತಿವೆ. ಪೌರತ್ವ ಕಾಯ್ದೆ ಜಾರಿಯ ನಂತರ ಹೀಗೆ ಹಿಂದುಗಳು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಮೂಲಗಳ ಮಾಹಿತಿ ಪ್ರಕಾರ ಸುಮಾರು 200 ಕ್ಕೂ ಹೆಚ್ಚು ಹಿಂದು ಕುಟುಂಬಗಳು ಹೀಗೆ ವಾಘಾ-ಅಟಾರಿ ಗಡಿ ಮೂಲಕ ನಡೆದುಕೊಂಡು ಬಂದು ಭಾರತ ಪ್ರವೇಶಿಸಿವೆ.
ಪ್ರಸ್ತುತ 'ವಿಸಿಟರ್ ವೀಸಾ' ಅಷ್ಟೆ ನೀಡಿ ಇವರನ್ನು ಒಳಗೆ ಕರೆದುಕೊಳ್ಳಲಾಗಿದ್ದು, ಈ ಕುಟುಂಬಗಳು ಇಲ್ಲಿಯೇ ನೆಲೆಸುವುದಾದರೆ ಅವರಿಗೆ ನೆಲೆ ಕಲ್ಪಿಸುವ ಬಗ್ಗೆ ಸರ್ಕಾರದ ಚಿಂತನೆ ಏನಿದೆ ಎಂಬುದು ಸ್ಪಷ್ಟವಾಗಿಲ್ಲ. ಹಾಗಾಗಿ ಇವರ ವೀಸಾ ಅವಧಿ ಮುಗಿದ ಬಳಿಕವಷ್ಟೆ ಇವರ ಭವಿಷ್ಯ ನಿರ್ಧಾರವಾಗಲಿದೆ.
ಹೀಗೆ ಪಾಕಿಸ್ತಾನ ತೊರೆದು ಬರುತ್ತಿರುವ ಹಿಂದು ಕುಟುಂಬಗಳು ಬಹುತೇಕ ತಮ್ಮ ಸಾಮಾನು ಸರಂಜಾಮುಗಳನ್ನು ಹೊತ್ತು ತರುತ್ತಿದ್ದು, ಅವರಿಗೆ ಸ್ಥಳೀಯರ ಬೆಂಬಲ ತಕ್ಕಮಟ್ಟಿಗೆ ದೊರಕುತ್ತಿದೆ. ಜೊತೆಗೆ ಭಾರತೀಯ ಸೇನೆಯ ಸಹಾಯವೂ ದೊರಕುತ್ತಿದೆ ಎನ್ನಲಾಗುತ್ತಿದೆ.
ಆದರೆ ಹೀಗೆ ಭಾರತಕ್ಕೆ ಬಂದಿರುವ ಹಿಂದುಗಳಿಗೆ ಆತಂಕ ಇನ್ನೂ ದೂರವಾಗಿಲ್ಲ. ಏಕೆಂದರೆ ಪಂಜಾಬ್ ರಾಜ್ಯ ಸರ್ಕಾರವು ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ್ದು, ಸಿಎಎ ಜಾರಿ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದೆ. ಹಾಗಾಗಿ ನೆಲೆ ಅರಸಿ ಪಾಕಿಸ್ತಾನದಿಂದ ಬಂದಿರುವ ಹಿಂದುಗಳ ವೀಸಾ ಅವಧಿ ಮುಗಿಯುವರೆಗೆ ಅಷ್ಟೆ ಅವರಿಗೆ ನೆಮ್ಮದಿ ಎನ್ನುವಂತಾಗಿದೆ.