ಸ್ವಯಂಘೋಷಿತ ದೇವಮಾನವನ ನೋಡಲು ಮಗಳಿಗೆ ಸಿಗುತ್ತಾ ಅವಕಾಶ?
ಚಂಡೀಗಢ, ನವೆಂಬರ್.19: ಒಂದಾನೊಂದು ಕಾಲದಲ್ಲಿ ಈ ದೇವಮಾನವನ ಭೇಟಿಗೆ ಸಾವಿರ ಸಾವಿರ ಭಕ್ತರು ಸಾಲುಗಟ್ಟಿ ನಿಲ್ಲುತ್ತಿದ್ದರು. ಅಂಥ ದೇವಮಾನವನ ಭೇಟಿ ಮಾಡಲು ಮಗಳಿಗೇ ಅವಕಾಶ ಸಿಗುತ್ತಿಲ್ಲ. ಸರ್ಕಾರ ಬೇಡ ಎಂದರೆ ಮಗಳೂ ಕೂಡಾ ಈ ಸ್ವಯಂಘೋಷಿತ ದೇವಮಾನವನನ್ನು ನೋಡಲು ಆಗೋದಿಲ್ಲ.
ಹೌದು, ಹರಿಯಾಣದ ಸ್ವಯಂಘೋಷಿತ ದೇವಮಾನವ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಸದ್ಯ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಇದೇ ಗುರ್ಮಿತ್ ರಾಮ್ ರಹೀಮ್ ಸಿಂಗ್ ನ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ತನ್ನ ತಂದೆಯ ಭೇಟಿಗೆ ಅವಕಾಶ ನೀಡುವಂತೆ ಹರಿಯಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಮ್ ರಹೀಮನ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಗೆ ಜಾಮೀನು
ಹನಿಪ್ರೀತ್ ಮನವಿ ಬಗ್ಗೆ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಪ್ರತಿಕ್ರಿಯೆ ನೀಡಿದ್ದಾರೆ. ಜೈಲಿನಲ್ಲಿರುವ ಕೈದಿಯನ್ನು ಭೇಟಿ ಮಾಡಲು ಎಲ್ಲರಿಗೂ ಸಮಾನ ಅವಕಾಶ ಇರುತ್ತದೆ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಹರಿಯಾಣ ಸರ್ಕಾರವಿನ್ನೂ ತೀರ್ಮಾನ ಮಾಡಿಲ್ಲ
ಹನಿಪ್ರೀತ್ ಇನ್ಸಾನ್ ಭೇಟಿ ಬಗ್ಗೆ ಕಾನೂನು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಗುರ್ಮಿತ್ ರಾಮ್ ರಹೀಮ್ ಸಿಂಗ್ ಭೇಟಿಯಿಂದ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ಮೊದಲು ದೃಢಪಡಿಸಿಕೊಳ್ಳಬೇಕು. ನಂತರದಲ್ಲಿ ಈ ಬಗ್ಗೆ ಹರಿಯಾಣ ಸರ್ಕಾರವು ತೀರ್ಮಾನ ತೆಗೆದುಕೊಳ್ಳಲಿದೆ.
ಜೊತೆ ಜೊತೆಗೆ ಜೈಲಿಗೆ ಹೋಗಿದ್ದ ತಂದೆ-ಮಗಳು!
ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೊತೆಗೆ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಕೂಡಾ ಜೈಲುಶಿಕ್ಷೆಗೆ ಗುರಿಯಾಗಿದ್ದರು. ಗುರ್ಮಿತ್ ರಾಮ್ ರಹೀಮ್ ಸಿಂಗ್ ಗೆ ಕೋರ್ಟ್ ಶಿಕ್ಷೆ ಧೋಷಿಸುತ್ತಿದ್ದಂತೆ ಹರಿಯಾಣದ ಸಿರ್ಸಾದಲ್ಲಿ ಹಿಂಸಾಚಾರ ನಡೆಯಿತು. ದೊಂಬಿಯಲ್ಲಿ ಉದ್ರಿಕ್ತರ ಗುಂಪು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿತು. ಇದಕ್ಕೆಲ್ಲ ಕುಮ್ಮಕ್ಕು ನೀಡಿರುವ ಆರೋಪ ಹಾಗೂ ದೇಶದ್ರೋಹ ಆರೋಪದ ಮೇಲೆ ಹನಿಪ್ರೀತ್ ಕೂಡಾ ಜೈಲುಶಿಕ್ಷೆಗೆ ಗುರಿಯಾಗಿದ್ದರು. ಇತ್ತೀಚಿಗಷ್ಟೇ ಪಂಚಕುಲ ಕೋರ್ಟ್ ಹನಿಪ್ರೀತ್ ಗೆ ಜಾಮೀನು ನೀಡಿತ್ತು.
ದೇವಮಾನವ ರೇಪ್ ಕೇಸ್ ನಲ್ಲಿ ಅಂದರ್!
2017ರ ಆಗಸ್ಟ್ ನಲ್ಲಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಸ್ವಯಂಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್, ಆಶ್ರಮದಲ್ಲಿದ್ದ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪ ಕೇಳಿ ಬಂತು. ಈ ಸಂಬಂಧ ಪೊಲೀಸರು ದೇವಮಾನವನನ್ನ ಬಂಧಿಸಿ ವಿಚಾರಣೆ ನಡೆಸಿದರು. ಕೋರ್ಟ್ ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಪಂಚಕುಲದ ಸಿಬಿಐ ಕೋರ್ಟ್, ಆರೋಪಿಗೆ 20 ವರ್ಷ ಜೈಲುಶಿಕ್ಷೆ ವಿಧಿಸಿತು.
ರಾಜಕಾರಣಿ, ಗಣ್ಯಾತಿಗಣ್ಯರೇ ದೇವಮಾನವನ ಫಾಲೋವರ್ಸ್
ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಘಟಾನುಘಟಿ ನಾಯಕರು, ಗಣ್ಯವ್ಯಕ್ತಿಗಳು, ರಾಜಕಾರಣಿಗಳ ಜೊತೆಗೆಲ್ಲ ನಂಟು ಹೊಂದಿದ್ದನು. ನಾನೇ ರಾಮ, ನಾನೇ ರಹೀಮ್ ಎಂದು ಬೋಧಿಸುತ್ತಿದ್ದ ಈತನಿಗೆ ಹರಿಯಾಣ ಹಾಗೂ ಗುಜರಾತ್ ನಲ್ಲಿ ಲಕ್ಷಾಂತರ ಮಂದಿ ಭಕ್ತರಿದ್ದಾರೆ.