ಹರ್ಯಾಣದ ಅತಂತ್ರ ಸ್ಥಿತಿ: ಜೆಜೆಪಿ ಕಿಂಗ್ ಮೇಕರ್, ಸಿಎಂ ಕುರ್ಚಿ ಮೇಲೆ ದುಷ್ಯಂತ್ ಕಣ್ಣು
ಚಂದೀಗಢ, ಅಕ್ಟೋಬರ್ 24: ಚುನಾವಣಾ ಪೂರ್ವ ಹಾಗೂ ಮತದಾನೋತ್ತರ ಸಮೀಕ್ಷೆಗಳ ಲೆಕ್ಕಾಚಾರವನ್ನು ಉಲ್ಪಾ ಪಲ್ಪಾ ಆಗುತ್ತಿದೆ. ಭಾರಿ ಬಹುಮತದ ನಿರೀಕ್ಷೆಯಲ್ಲಿದ್ದ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಈಗ ಮಿತ್ರ ಪಕ್ಷಗಳ ಹುಡುಕಾಟದಲ್ಲಿದೆ. ಈ ನಡುವೆ ಜನ ನಾಯಕ್ ಜನತಾ ಪಾರ್ಟಿ(ಜೆಜೆಪಿ) ಕಿಂಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಅಕ್ಟೋಬರ್ 21ರಂದು ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 61.92ರಷ್ಟು ಮತದಾನ ನಡೆದಿತ್ತು. ಅಕ್ಟೋಬರ್ 24ರಂದು ಫಲಿತಾಂಶ ಭಾರಿ ಕುತೂಹಲ ಕೆರಳಿಸಿದೆ.
ಹರ್ಯಾಣ ವಿಧಾನಸಭೆಗೆ ಬಿಜೆಪಿಯಿಂದ ಟಿಕ್ ಟಾಕ್ ಸ್ಟಾರ್ ಸ್ಪರ್ಧೆ
ಬಹುಜನ ಸಮಾಜ ಪಕ್ಷ(ಬಿಎಸ್ ಪಿ), ಇಂಡಿಯನ್ ನ್ಯಾಷನಲ್ ಲೋಕದಳ(ಐಎನ್ ಎಲ್ ಡಿ) ಜೊತೆಗೆ ಜನ ನಾಯಕ್ ಜನತಾ ಪಾರ್ಟಿ( ಜೆಜೆಪಿ) ಮೈತ್ರಿ ಸಾಧಿಸುವ ಮುನ್ನವೇ ಮಾತುಕತೆ ಮುರಿದು ಬಿದ್ದಿದೆ. ಚುನಾವಣೆಗೂ ಮುನ್ನ ಈ ಪಕ್ಷಗಳ ನಡುವೆ ವೈಮನಸ್ಯ ಹೆಚ್ಚಾಗಿದ್ದರಿಂದ ಬಿಜೆಪಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಕಂದು ಬಂದಿತ್ತು. ಬಿಜೆಪಿ ವಿರುದ್ಧ ಒಗ್ಗೂಡಬೇಕಿದ್ದ ವಿಪಕ್ಷಗಳಲ್ಲಿನ ಒಡಕು ಬಿಜೆಪಿಗೆ ಜಯ ತರಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಮತದಾನದ ಬಳಿಕ ಎಲ್ಲವೂ ಬದಲಾಗಿದೆ. 2014ರ ವಿಧಾನಸಭೆ ಚುನಾವಣೆಯಲ್ಲಿ 90 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್ 15 ಸ್ಥಾನ ಮಾತ್ರ ಗಳಿಸಲು ಸಾಧ್ಯವಾಗಿತ್ತು.
ಮಾಜಿ ಉಪ ಪ್ರಧಾನಿ ದೇವಿಲಾಲ್ ಅವರ ಮರಿ ಮೊಮ್ಮಗ ದುಷ್ಯಂತ್ ಚೌಟಲ ಅವರ ಜನ ನಾಯಕ್ ಜನತಾ ಪಾರ್ಟಿ ಕಿಂಗ್ ಮೇಕರ್ ಆಗಿ ಪರಿಣಮಿಸಿದೆ. ಕಾಂಗ್ರೆಸ್ ಜತೆ ಜೆಜೆಪಿ ಆರಂಭಿಕ ಹಂತದ ಮಾತುಕತೆ ನಡೆಸಿದೆ. ಮುಖ್ಯಮಂತ್ರಿ ಸ್ಥಾನ ನೀಡಿದರೆ ಬೆಂಬಲ ನೀಡುವುದಾಗಿ ದುಷ್ಯಂತ್ ಘೋಷಿಸಿದ್ದಾರೆ. ಅದರೆ ದುಷ್ಯಂತ್ ಡಿಸಿಎಂ ಸ್ಥಾನ ನೀಡುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
'ರಕ್ತಹೀನತೆ ಮುಕ್ತ ರಾಜ್ಯ' ಬಿಜೆಪಿ ಪ್ರಣಾಳಿಕೆಯ ಪ್ರಮುಖಾಂಶ!
ಫಲಿತಾಂಶದ ಟ್ರೆಂಡ್: 90 ರಲ್ಲಿ ಬಿಜೆಪಿ 42 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 32 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಐಎನ್ಎಲ್ಡಿ 2 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ ಉಳಿದ ಕ್ಷೇತ್ರಗಳಲ್ಲಿ ಜನನಾಯಕ ಜನತಾ ಪಕ್ಷ ಮುನ್ನಡೆಯಲ್ಲಿವೆ. ಟ್ರೆಂಡ್ ಪ್ರಕಾರ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಬಹುಮತಕ್ಕೆ 46 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ. ಜೆಜೆಪಿಯ ದುಷ್ಯಂತ್ ಅವರ ಮನ ಓಲೈಸಲು ಪ್ರಕಾಶ್ ಸಿಂಗ್ ಬಾದಲ್ ಹಾಗೂ ಸುಖ್ ಬೀರ್ ಬಾದಲ್ ಅವರ ನೆರವನ್ನು ಬಿಜೆಪಿ ಕೋರಿದೆ.