Breaking news: ಹರಿಯಾಣ; ಮೃತ ಪೊಲೀಸ್ ಅಧಿಕಾರಿ ಕುಟುಂಬಕ್ಕೆ 1 ಕೋಟಿ ಪರಿಹಾರ
ಚಂಡೀಗಢ್, ಜುಲೈ 19: ಹರ್ಯಾಣದ ನುಹ್ನಲ್ಲಿ ಅಕ್ರಮ ಗಣಿಗಾರಿಕೆ ಮಾಫಿಯಾವನ್ನು ತಡೆಯಲು ಹೋಗಿ ಹತ್ಯೆಗೊಳಗಾದ ಹಿರಿಯ ಪೊಲೀಸ್ ಅಧಿಕಾರಿ ಕುಟುಂಬಕ್ಕೆ ಸರ್ಕಾರ 1 ಕೋಟಿ ರೂಪಾಯಿ ಪರಿಹಾರ ಮತ್ತು ಕುಟುಂಬದ ಓರ್ವ ವ್ಯಕ್ತಿಗೆ ಸರಕಾರಿ ಉದ್ಯೋಗ ಘೋಷಿಸಿದೆ.
ಡಿಎಸ್ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರು ಅರಾವಳಿ ಪರ್ವತ ಶ್ರೇಣಿಯ ಸಮೀಪದ ಪಚಗಾಂವ್ನಲ್ಲಿ ಅಕ್ರಮವಾಗಿ ಕಲ್ಲುಗಳನ್ನು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ಸ್ಥಳಕ್ಕೆ ಭೇಟಿ ನೀಡಿದ್ದರು. ಪೊಲೀಸ್ ಸಿಬ್ಬಂದಿಯನ್ನು ಕಂಡು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಆರಂಭಿಸಿದರು. ಹಿರಿಯ ಅಧಿಕಾರಿ ಆರೋಪಿಗಳ ದಾರಿಯಲ್ಲಿ ಅಡ್ಡ ನಿಂತು ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಲಾರಿ ಚಾಲಕ ಅಧಿಕಾರಿ ಮೇಲೆಯೇ ಲಾರಿ ಹರಿಸಿ ಕೊಲೆ ಮಾಡಿದ್ದಾನೆ.
ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, "ದುಃಖತಪ್ತ ಕುಟುಂಬಕ್ಕೆ ನಮ್ಮ ಸಂತಾಪಗಳು. ಹುತಾತ್ಮ ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ ಒಟ್ಟು 1 ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು. ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಕೆಲಸ ನೀಡುತ್ತೇವೆ" ಎಂದು ಘೋಷಿಸಿದರು.
ಇನ್ನು, ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗೃಹ ಸಚಿವ ಅನಿಲ್ ವಿಜ್, " ಇದನ್ನು ಸಹಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಆರೋಪಿಗಳನ್ನು ಬಂಧಿಸಲಾಗುವುದು. ನಾವು ಈಗಾಗಲೇ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದೇವೆ. ಈ ದಿನವೂ ನಾವು ಹರಿಯಾಣದಾದ್ಯಂತ ತನಿಖೆ ನಡೆಸಿದ್ದೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದರು.
ಘಟನಾ ಸ್ಥಳದಲ್ಲಿ ಮೃತ ಡಿಎಸ್ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಕಿರಿಯ ಸಹೋದರ ಅಶೋಕ್ ಮಂಜು ಕಣ್ಣಿರು ಹರಿಸಿದ್ದಾರೆ.
2009ರ ಸುಪ್ರಿಂಕೋರ್ಟ್ ಆದೇಶದ ಹೊರತಾಗಿಯೂ, ಅರಾವಳಿ ಪ್ರದೇಶದ ಹಲವಾರು ಸ್ಥಳಗಳಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ಮುಂದುವರೆದಿದೆ. 'ಅರಾವಳಿ ಬಚಾವೋ ಸಿಟಿಜನ್ಸ್ ಮೂವ್ಮೆಂಟ್' ಹೆಸರಿನ ನಾಗರಿಕರ ಗುಂಪು ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ಸಂಪರ್ಕಿಸಿತು. ಈ ಪ್ರದೇಶದಲ್ಲಿ ಕನಿಷ್ಠ 16 ಸ್ಥಳಗಳಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಿಸಿದೆ ಎಂದು ಆರೋಪಿಸಿದ್ದರು.
ಅಕ್ರಮ ಗಣಿಗಾರಿಕೆಯ ಹಲವು ದೂರುಗಳ ಬಗ್ಗೆ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿದ್ದರು.