ಹರ್ಯಾಣ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ
ಚಂಡೀಗಡ, ಮಾರ್ಚ್ 10: ಹರ್ಯಾಣದ ಬಿಜೆಪಿ-ಜೆಜೆಪಿ ಸರ್ಕಾರಕ್ಕೆ ಕಂಟಕ ಎದುರಾಗಿದೆ. ಸರ್ಕಾರದ ವಿರುದ್ಧ ಕಾಂಗ್ರೆಸ್ ಬುಧವಾರ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ. ಅವಿಶ್ವಾಸ ನಿಲುವಳಿ ಮಂಡನೆಗೆ ಮತ ಹಾಕುವ ಮುನ್ನ ಎರಡು ಗಂಟೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಸಿಸಿ ಗುಪ್ತಾ ತಿಳಿಸಿದ್ದರು.
ಹರ್ಯಾಣ ವಿರೋಧಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರು ಮನೋಹರ್ ಲಾಲ್ ಖಟ್ಟರ್ ನೇತೃತ್ವದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದರು. 'ಗಡಿಯಲ್ಲಿ ಸುಮಾರು 250 ರೈತರು ಮೃತಪಟ್ಟಿದ್ದಾರೆ. ನಾನು ಅವರ ಹೆಸರನ್ನು ಉಲ್ಲೇಖಿಸಿದ್ದೆ. ಆದರೆ ಪತ್ರಿಕೆಗಳಲ್ಲಿ ಅದು ಕಾಣಿಸಲಿಲ್ಲ' ಎಂದು ಹೇಳಿದರು.
ಬಿಜೆಪಿ, ಜೆಜೆಪಿ, ಕಾಂಗ್ರೆಸ್ ಸೇರಿದಂತೆ ರಾಜ್ಯದಲ್ಲಿನ ಎಲ್ಲ ರಾಜಕೀಯ ಪಕ್ಷಗಳೂ ಬುಧವಾರದಂದು ಅವಿಶ್ವಾಸ ಗೊತ್ತುವಳಿ ನಿರ್ಣಯದ ವೇಳೆ ಸದನದಲ್ಲಿ ತಪ್ಪದೆ ಹಾಜರಿರುವಂತೆ ಶಾಸಕರಿಗೆ ವಿಪ್ ಜಾರಿ ಮಾಡಿದ್ದವು.
'ಇದು ಬಹುಮತದ ಸರ್ಕಾರವಲ್ಲ. ಆದರೆ ಜೆಜೆಪಿಯನ್ನು ಅವಲಂಬಿಸಿದೆ. ಈ ಸರ್ಕಾರಕ್ಕೆ ಬಹುಮತವಿಲ್ಲ' ಎಂದು ಹೂಡಾ ಹೇಳಿದರು.
90 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 40 ಸೀಟುಗಳನ್ನು ಹೊಂದಿದ್ದರೆ, ಅದರ ಮಿತ್ರಪಕ್ಷ ಜೆಜೆಪಿ 10 ಸೀಟುಗಳನ್ನು ಹೊಂದಿದೆ. ಅವರ ಜತೆಗೆ ಐವರು ಪಕ್ಷೇತರ ಶಾಸಕರ ಬೆಂಬಲವಿದೆ. ಕಾಂಗ್ರೆಸ್ 31 ಶಾಸಕರನ್ನು ಹೊಂದಿದೆ. ಎರಡು ಕ್ಷೇತ್ರಗಳು ಖಾಲಿ ಇರುವುದರಿಂದ, ಬಹುಮತ ಪಡೆಯಲು 45 ಸೀಟುಗಳ ಅಗತ್ಯವಿದೆ.
ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ನಡುವೆ ಹರ್ಯಾಣ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ಈ ನಡೆ ಅನುಸರಿಸಿದೆ. ತಮ್ಮ ಕುರ್ಚಿಯ ಮೇಲೆ 250 ರೈತರ ರಕ್ತದ ಕಲೆಗಳು ಕಂಡರೆ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಎಂದು ಮಾಜಿ ಸ್ಪೀಕರ್, ಶಾಸಕ ರಘುಬೀರ್ ಸಿಂಗ್ ಕಡಿಯಾನ್ ಹೇಳಿದರು.