ಅವಿಶ್ವಾಸ ಗೊತ್ತುವಳಿಯಲ್ಲಿ ಹರ್ಯಾಣದ ಬಿಜೆಪಿ ಸರ್ಕಾರಕ್ಕೆ ಜಯ
ಚಂಡೀಗಡ, ಮಾರ್ಚ್ 11: ಹರ್ಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಬಿಜೆಪಿಯ ಮನೋಹರ ಲಾಲ್ ಖಟ್ಟರ್ ನೇತೃತ್ವದ ಸರ್ಕಾರ ಸೋಲಿಸಿದೆ. ಈ ಮೂಲಕ ಸರ್ಕಾರ ಬಲವಾಗಿದೆ ಎಂಬ ಸಂದೇಶ ರವಾನಿಸಿದೆ. ಆಡಳಿತಾರೂಢ ಬಿಜೆಪಿ-ಜೆಜೆಪಿ ಮೈತ್ರಿಕೂಟ 55 ಮತಗಳನ್ನು ಪಡೆದರೆ, ವಿರೋಧಪಕ್ಷ 32 ಮತಗಳನ್ನು ಪಡೆದು ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲು ಕಂಡಿತು.
ಇಬ್ಬರು ಪಕ್ಷೇತರ ಶಾಸಕರು ಸರ್ಕಾರದಿಂದ ತಮ್ಮ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿದ್ದ ಕಾಂಗ್ರೆಸ್, ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಆದರೆ, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡದ ಶಾಸಕರ ನಿಜಬಣ್ಣ ಬಯಲು ಮಾಡುವ ಸಲುವಾಗಿಯಷ್ಟೇ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯಿತು ಎಂದು ಕಾಂಗ್ರೆಸ್ ಹೇಳಿದೆ.
ಹರ್ಯಾಣ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ
ವಿಧಾನಸಭೆಯಲ್ಲಿ ಸುಮಾರು ಆರು ಗಂಟೆ ಚರ್ಚೆಯ ಬಳಿಕ ಮತ ಚಲಾವಣೆ ನಡೆಯಿತು. 'ತಮ್ಮ ಸರ್ಕಾರವು ರೈತರ ಒಳಿತಿಗಾಗಿ ದುಡಿಯುತ್ತಿದೆ. ಅವರ ವಿರುದ್ಧ ಯಾವುದೇ ಬಲಪ್ರಯೋಗ ನಡೆಸಿಲ್ಲ. ಬಲಪ್ರಯೋಗ ಎಂದರೆ ಲಾಠಿಚಾರ್ಜ್, ಗೋಲಿಬಾರ್.. ಹೌದು ನಾವು ಕಾಲುವೆಗಳನ್ನು ತೋಡಿದ್ದೆವು. ಜಲಫಿರಂಗಿ ಬಳಸಿದೆವು. ಇದು ಅಂತಾರಾಜ್ಯ ಓಡಾಟವನ್ನು ತಡೆಯುವ ಸಲುವಾಗಿ. ನಮ್ಮ ತಾಳ್ಮೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ' ಎಂದು ಮನೋಹರ್ ಲಾಲ್ ಖಟ್ಟರ್, ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಅವಿಶ್ವಾಸ ಗೊತ್ತುವಳಿಯು, ಯಾರು ರೈತರ ಪರ ಇದ್ದಾರೆ ಹಾಗೂ ಯಾರ ವಿರುದ್ಧ ಇದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಗ್ರಾಮಗಳ ಹೊರಗೆ, ಬಿಜೆಪಿ ಮತ್ತು ಜೆಜೆಪಿ ನಾಯಕರಿಗೆ ಪ್ರವೇಶವಿಲ್ಲ ಎಂಬ ಫಲಕಗಳನ್ನು ಹಾಕಲಾಗುತ್ತಿದೆ. ಅವರ ವಿರುದ್ಧ ಸಾಮಾಜಿಕ ಬಹಿಷ್ಕಾರಕ್ಕೆ ಖಾಪ್ ಪಂಚಾಯತ್ಗಳು ಕರೆನೀಡುತ್ತಿವೆ. ಗ್ರಾಮಗಳಿಗೆ ತೆರಳಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಅವಕಾಶ ನೀಡದ ಸನ್ನಿವೇಶ ಇತಿಹಾಸದಲ್ಲಿ ಎಂದಿಗೂ ಆಗಿರಲಿಲ್ಲ ಎಂದು ಕಾಂಗ್ರೆಸ್ನ ಹಿರಿಯ ನಾಯಕ ರಘುವೀರ್ ಸಿಂಗ್ ಕಡಿಯಾನ್ ಹೇಳಿದರು.
90 ಸೀಟುಗಳ ವಿಧಾನಸಭೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು, ಅದರ ಮಿತ್ರಪಕ್ಷ 10 ಶಾಸಕರನ್ನು ಹೊಂದಿವೆ. ಐವರು ಪಕ್ಷೇತರ ಶಾಸಕರು ಇದ್ದರೆ, ಕಾಂಗ್ರೆಸ್ 31 ಸೀಟುಗಳನ್ನು ಹೊಂದಿದೆ.