'ಗುರುನಾನಕ್ರ ಬಕ್ಷೀಸು': ಕೃಷಿ ಕಾಯ್ದೆ ವಿರೋಧಿಸಿ ಸಚಿವ ಸ್ಥಾನ ತೊರೆದಿದ್ದ ಹರಸಿಮ್ರತ್ ಕೌರ್
ಚಂಡೀಗಢ, ನವೆಂಬರ್ 19: ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಜಾರಿ ಮಾಡಿದ ಹಿನ್ನೆಲೆ ಎನ್ಡಿಎ ಕೂಟದಿಂದ ಹೊರನಡೆದು ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಾಜಿ ಸಚಿವೆ ಮತ್ತು ಶಿರೋಮಣಿ ಅಕಾಲಿದಳದ ನಾಯಕಿ ಹರಸಿಮ್ರತ್ ಕೌರ್ ಬಾದಲ್ ಹರ್ಷ ವ್ಯಕ್ತಪಡಿಸಿದ್ದಾರೆ. "ಈ ಗುರುನಾನಕ್ ಜನ್ಮ ದಿನಾಚರಣೆಯಾದ ಇಂದು ಮೂರು ಕೃಷಿ ಕಾನೂನುಗಳನ್ನು ರದ್ದು ಪಡಿಸಲಾಗಿದೆ. ನಮಗೆ ಗುರುನಾನಕ್ ದೇವ್ ಜಿಯವರ 'ಅಪಾರ ಬಕ್ಷೀಸು (ಬಹುಮಾನ)' ದೊರಕಿದೆ," ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಾಜಿ ಸಚಿವೆ ಹರಸಿಮ್ರತ್ ಕೌರ್ ಬಾದಲ್, "ಈ ಸಂಕಷ್ಟದ ಸಂದರ್ಭದಲ್ಲಿಯೂ, ಹವಾಮಾನ, ದಬ್ಬಾಳಿಕೆಯನ್ನು ತಡೆದುಕೊಂಡು ಬಲವಾಗಿ ನಿಂತ ರೈತರಿಗೆ ಇಂದು ಜಯ ಲಭಿಸಿದೆ. ಈ ಕೃಷಿ ಕಾಯ್ದೆಯನ್ನು ವಿರೋಧ ಮಾಡಿ ನಡೆದ ಪ್ರತಿಭಟನೆಯಲ್ಲಿ ತ್ಯಾಗ ಮಾಡಿದ 700 ರೈತರಿಗೆ ನಾನು ನಮಸ್ಕರಿಸುತ್ತೇನೆ," ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ರಾಜೀನಾಮೆ
"ಈ ದಿನ ನಿಜಕ್ಕೂ ಇತಿಹಾಸದಲ್ಲಿ ಅಚ್ಛಳಿಯದೆ ಉಳಿಯುವ ದಿನವಾಗಿದೆ. ಈ ಮೂರು ಕೃಷಿ ಕಾಯ್ದೆಯನ್ನು ರದ್ದು ಪಡಿಸುವ ನಿಟ್ಟಿನಲ್ಲಿ ತಮ್ಮ ಪ್ರಾಣವನ್ನು ತೆತ್ತ 700 ರೈತರನ್ನು ನೆನಯುವಂತಹ ದಿನ ಇದಾಗಿದೆ. ನಾವು ಎಂದಿಗೂ ಈ ರೈತರನ್ನು ಮರೆಯಲು ಸಾಧ್ಯವಿಲ್ಲ. ನಾವು ಎಂದಿಗೂ ಈ ಪ್ರಾಣವನ್ನು ಕಳೆದುಕೊಂಡ 700 ರೈತರಿಗೆ ಹಾಗೂ ಅವರ ಕುಟುಂಬಕ್ಕೆ ಧನ್ಯವಾದವನ್ನು ತಿಳಿಸಲು ಕೂಡಾ ಆಗದು," ಎಂದು ಕೂಡಾ ಶಿರೋಮಣಿ ಅಕಾಲಿದಳದ ನಾಯಕಿ ಹರಸಿಮ್ರತ್ ಕೌರ್ ಬಾದಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಉದ್ದೇಶಿತ ಕೃಷಿ ಸಂಬಂಧಿತ ಮಸೂದೆ ಮಂಡನೆಗೆ ಶಿರೋಮಣಿ ಅಕಾಲಿದಳ ಭಾರೀ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮೋದಿ ಸಚಿವ ಸಂಪುಟದಿಂದ ಪಕ್ಷದ ಏಕೈಕ ಪ್ರತಿನಿಧಿಯಾದ ಹರ್ಸಿಮ್ರತ್ ಕೌರ್ ಬಾದಲ್ರನ್ನು ಹಿಂದಕ್ಕೆ ಕರೆಸಿಕೊಂಡಿತ್ತು. "ಈ ಮಸೂದೆಗಳನ್ನು ಪರಿಚಯಿಸುವ ಮೊದಲು, ಕೇಂದ್ರ ಸರ್ಕಾರವು ಕನಿಷ್ಠ ರೈತರ ಪಕ್ಷಗಳು, ಮಿತ್ರಪಕ್ಷಗಳನ್ನು ಸಂಪರ್ಕಿಸಬೇಕು. ಆದರೆ ಆ ಕಾರ್ಯವನ್ನು ಮಾಡಿಲ್ಲ. ರೈತರು ಮತ್ತು ರೈತ ಸಂಘಟನೆಗಳ ಬೇಡಿಕೆಗೆ ತಕ್ಕಂತೆ ಮೀಸಲಾತಿ ಭರವಸೆ ನೀಡದ ಹೊರತು ಮಸೂದೆಗೆ ಅನುಮೋದನೆ ನೀಡುವುದಕ್ಕೆ ಬೆಂಬಲಿಸುವುದಿಲ್ಲ," ಎಂದು ಹರಸಿಮ್ರತ್ ಕೌರ್ ಬಾದಲ್ ಹೇಳಿದ್ದರು.
ಮತ್ತೆ ಬಿಜೆಪಿ ಜೊತೆ ಅಕಾಲಿದಳ ಮೈತ್ರಿ?
ಇನ್ನು ಈ ನಡುವೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂಪಡೆದ ಹಿನ್ನೆಲೆ ಶಿರೋಮಣಿ ಅಕಾಲಿದಳ ಮತ್ತೆ ಬಿಜೆಪಿ ಮೈತ್ರಿಯನ್ನು ಸೇರಲಿದೆ ಎಂದು ಊಹಾಪೋಹಗಳು ಹರಡುತ್ತಿದೆ. ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿರುವ ಶಿರೋಮಣಿ ಅಕಾಲಿದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಈ ಊಹಾಪೋಹವನ್ನು ಅಲ್ಲಗಳೆದಿದ್ದಾರೆ. "ಮತ್ತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. 700 ರೈತರ ಪ್ರಾಣ ಹೋಗಿದೆ. ಸಂಸತ್ತಿನಲ್ಲಿ ಪ್ರಧಾನಿ ಮೋದಿಗೆ ಈ ಕಪ್ಪು ಕಾನೂನು ರೈತರಿಗೆ ಒಳ್ಳೆಯದ್ದನ್ನು ಮಾಡುವುದಿಲ್ಲ ಎಂದು ಹೇಳಿದ್ದೆ," ಎಂದು ಹೇಳಿದ್ದಾರೆ.
We have received 'apaar baksheesh' of Sri Guru Nanak Dev Ji on his Parkash Purab by the repeal of 3 farm laws. It's a victory of farmers who withstood inclement weather, repression & defamation but stood strong. I salute the 700 farmers who sacrificed their lives for this cause. pic.twitter.com/036Guevl9e
— Harsimrat Kaur Badal (@HarsimratBadal_) November 19, 2021
ರೈತರಿಗೆ ಪರಿಹಾರ ಒದಗಿಸಲು ಪಂಜಾಬ್ ಸಿಎಂ ಆಗ್ರಹ
ಮೂರು ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿರುವ ಬಗ್ಗೆ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ, "ಕೇಂದ್ರ ಸರ್ಕಾರವು ಬಹಳ ತಡವಾಗಿ ಈ ಕೃಷಿ ಕಾಯ್ದೆಯನ್ನು ವಾಪಾಸ್ ಪಡೆಯುವ ನಿರ್ಧಾರವನ್ನು ಮಾಡಿಕೊಂಡಿದೆ. ಆದರೆ ನಾವು ಈ ನಿರ್ಧಾರ ಸ್ವಾಗತಾರ್ಹ," ಎಂದು ಹೇಳಿದ್ದಾರೆ. ಇನ್ನು ಈ ಸಂದರ್ಭದಲ್ಲೇ ರೈತರಿಗೆ ಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. "ರಾಜ್ಯ ಹಾಗೂ ಪ್ರಾಣವನ್ನು ಕಳೆದು ಕೊಂಡ ರೈತರಿಗೆ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಬೇಕು. ಪ್ರತಿಭಟನೆಯ ಸಂದರ್ಭದಲ್ಲಿ ಆಸ್ತಿ ಕಳೆದುಕೊಂಡವರಿಗೂ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಬೇಕು," ಎಂದು ಆಗ್ರಹ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video