ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ಹರಿಯಾಣ ಸಮ್ಮಿಶ್ರ ಸರ್ಕಾರದ ಶಾಸಕ
ಚಂಡೀಗಢ, ಡಿಸೆಂಬರ್ 1: ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಜಮಾಯಿಸಿರುವ ರೈತರಿಗೆ ತಮ್ಮ ಬೆಂಬಲ ನೀಡಿ, ಹರಿಯಾಣ ಶಾಸಕ ಸೋಂಬೀರ್ ಸಾಂಗ್ವಾನ್ ಅವರು ಸೋಮವಾರ ರಾಜ್ಯ ಜಾನುವಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಸೋಂಬೀರ್ ಸಾಂಗ್ವಾನ್ ಅವರು ದಾದ್ರಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದು, ಹರಿಯಾಣ ರಾಜ್ಯದ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ.
Fact Check: ರೈತರಿಗೆ ಪೊಲೀಸರು ಹೊಡೆದೇ ಇಲ್ಲವೇ? ಅವರು ಖಲಿಸ್ತಾನ ಉಗ್ರರೇ?
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಬರೆದ ಪತ್ರದಲ್ಲಿ, "ನಾನು ರೈತರನ್ನು ಬೆಂಬಲಿಸಿ ನನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಇಡೀ ದೇಶದಂತೆಯೇ, ನನ್ನ ವಿಧಾನಸಭಾ ಕ್ಷೇತ್ರ ದಾದ್ರಿಯ ರೈತರೂ ಈ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ನನ್ನ ಸಂಪೂರ್ಣ ಬೆಂಬಲವನ್ನು ಅವರಿಗೆ ನೀಡುವುದು ನನ್ನ ನೈತಿಕ ಕರ್ತವ್ಯವಾಗಿದೆ" ಎಂದು ತಿಳಿಸಿದ್ದಾರೆ.
"ನನ್ನ ಆಂತರಿಕ ಆತ್ಮಸಾಕ್ಷಿಯನ್ನು ಆಲಿಸಿದ ನಂತರ ನಾನು ಪ್ರತಿಭಟನಾ ರೈತರಿಗೆ ಸಂಪೂರ್ಣ ಬೆಂಬಲ ನೀಡಲಿದ್ದೇನೆ" ಎಂದು ಶಾಸಕ ಸೋಂಬೀರ್ ಸಾಂಗ್ವಾನ್ ಪತ್ರದಲ್ಲಿ ಬರೆದಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯನ್ನು ಬೆಂಬಲಿಸಲು ಹರಿಯಾಣದ ಅನೇಕ 'ಕಪ್'ಗಳು ರೈತರ ಚಳವಳಿಯ 'ದೆಹಲಿ ಚಲೋ' ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ ಎಂದು ಸಾಂಗ್ವಾನ್ ಭಾನುವಾರ ಹೇಳಿದ್ದಾರೆ.
ಕೇಂದ್ರದಲ್ಲಿ ಜಾರಿಗೆ ತರಲಾದ ಹೊಸ ಕೃಷಿ ಹಾಗೂ ಕೃಷಿ ಮಾರುಕಟ್ಟೆ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ವ್ಯವಸ್ಥೆಯನ್ನು ಕೆಡವಲು ಕಾರಣವಾಗಲಿದ್ದು, ರೈತರನ್ನು ದೊಡ್ಡ ಕಂಪನಿಗಳ ಅಡಿಯಾಳಾಗಿಸುತ್ತದೆ ಎಂದು ಪ್ರತಿಭಟನಾ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಹೊಸ ಕಾನೂನುಗಳು ರೈತರಿಗೆ ತಮ್ಮ ಬೆಳೆಗಳಿಗೆ ಹೆಚ್ಚಿನ ಬೆಲೆ ಪಡೆಯಲು ಆಯ್ಕೆಗಳನ್ನು ನೀಡುತ್ತವೆ ಮತ್ತು ಎಂಎಸ್ಪಿ ವ್ಯವಸ್ಥೆ ಮುಂದುವರಿಯುತ್ತದೆ ಎಂದು ಸರ್ಕಾರ ಹೇಳುತ್ತಿದೆ.