ಪಂಜಾಬ್ ಕಾಂಗ್ರೆಸ್ ಉಸ್ತುವಾರಿಯಾಗಿ ಹರೀಶ್ ಚೌಧರಿ ನೇಮಕ ಸಾಧ್ಯತೆ
ರಾಜಸ್ಥಾನದ ಕಂದಾಯ ಸಚಿವ ಹರೀಶ್ ಚೌಧರಿ ಅವರನ್ನು ಪಂಜಾಬ್ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ನೇಮಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿಹರೀಶ್ ರಾವತ್ ಅವರ ಜಾಗಕ್ಕೆ ಹರೀಶ್ ಚೌಧರಿ ಅವರನ್ನು ನೇಮಿಸಲಾಗುತ್ತಿದೆ ಎನ್ನಲಾಗಿದೆ.
ಸಿಧು ಮನವೊಲಿಕೆ ನಡುವೆ ಪಂಜಾಬ್ನಲ್ಲಿ ಕಾಂಗ್ರೆಸ್ನಿಂದ ಪ್ಲ್ಯಾನ್ ಬಿ, ಏನಿದು?
ಹರೀಶ್ ಚೌಧರಿ ಅವರನ್ನು ಪಂಜಾಬ್ನಲ್ಲಿ ಇತ್ತೀಚೆಗೆ ನಾಯಕತ್ವ ಬದಲಾವಣೆಯ ಸಮಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ವೀಕ್ಷಕರಾಗಿ ನೇಮಕ ಮಾಡಿತ್ತು. ಇದು ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಮತ್ತು ಚರಣ್ಜಿತ್ ಸಿಂಗ್ ಚನ್ನಿಯನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲು ಕಾರಣವಾಯಿತು.
ಮೂಲಗಳ ಪ್ರಕಾರ, ಹರೀಶ್ ಚೌಧರಿ ಅವರು ನೂತನ ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಡುವಿನ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದರು.
ಬಳಿಕ ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಿಧು ಅಚ್ಚರಿ ಮೂಡಿಸಿದರು. ಏತನ್ಮಧ್ಯೆ, ಪಂಜಾಬ್ ಕಾಂಗ್ರೆಸ್ನಲ್ಲಿ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ, ಹರೀಶ್ ರಾವತ್ ಹಾಗೂ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರು ಮಾತಿನ ಸಮರದಲ್ಲಿ ತೊಡಗಿದ್ದಾರೆ.
ಸೆಪ್ಟೆಂಬರ್ 18ರಂದು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಮರಿಂದರ್ ಸಿಂಗ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವ ಕ್ರಮಗಳಿಂದ ಅವಮಾನಿತನಾಗಿದ್ದೇನೆ ಎಂದು ಹೇಳಿದ್ದರು.
ಕಾಂಗ್ರೆಸ್ ನಾಯಕ ಹರೀಶ್ ರಾವತ್ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರ ಜಾತ್ಯಾತೀತ ಬದ್ಧತೆಯನ್ನು ಪ್ರಶ್ನಿಸಿದ ಬೆನ್ನಲ್ಲೇ ಅಮರಿಂದರ್ ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಹರೀಶ್ ರಾವತ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಮರಿಂದರ್ ಸಿಂಗ್ ಕಾಂಗ್ರೆಸ್ ಶೋಚನೀಯ ಪರಿಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.
ರಾಜೀನಾಮೆ ನೀಡುವುದಕ್ಕೂ ಮೂರು ವಾರಗಳ ಮುನ್ನ ಸೋನಿಯಾ ಗಾಂಧಿಗೆ ನನ್ನ ರಾಜೀನಾಮೆ ಪತ್ರವನ್ನು ನೀಡಿದ್ದೆ. ಆದರೆ ಅವರು ನನ್ನನ್ನು ಮುಂದುವರೆಯುವಂತೆ ಸೂಚಿಸಿದ್ದರು ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಅಮರಿಂದರ್ ಸಿಂಗ್ ಒತ್ತಡದಲ್ಲಿದ್ದಾರೆ ಎಂಬ ರಾವತ್ ಹೇಳಿಕೆಗೂ ಮಾಜಿ ಸಿಎಂ ಪ್ರತಿಕ್ರಿಯೆ ನೀಡಿದ್ದು, ನನಗಿದ್ದ ಒಂದೇ ಒತ್ತಡ ಎಂದರೆ ಅದು ಅವಮಾನದ ಮೇಲೆ ಅವಮಾನವಾದರೂ ಸಹ ಅದನ್ನು ಸಹಿಸಿಕೊಂಡು ಪಕ್ಷಕ್ಕೆ ನಿಷ್ಠೆ ತೋರಿದ್ದು ಎಂದಿದ್ದಾರೆ.
ಅಮರಿಂದರ್ ಸಿಂಗ್ ಬಿಜೆಪಿಯ ಆಹ್ವಾನವನ್ನು ತಿರಸ್ಕರಿಸಬೇಕು ಎಂದು ಹರೀಶ್ ರಾವತ್ ಹೇಳಿದ್ದರು. ಅಷ್ಟೇ ಅಲ್ಲದೇ ಬಿಜೆಪಿ ನಾಯಕರೊಂದಿಗೆ ಅಮರಿಂದರ್ ಸಿಂಗ್ ನಿಕಟವಾಗುತ್ತಿರುವುದನ್ನು ಪ್ರಶ್ನಿಸಿ, ಇದು ಅಮರಿಂದರ್ ಸಿಂಗ್ ಅವರ ಜಾತ್ಯಾತಿತ ಬದ್ಧತೆಯನ್ನು ಪ್ರಶ್ನಿಸುವಂತಿದೆ ಎಂದಿದ್ದರು.