ಕೃಷಿ ಮಾಡಬೇಕು, ಪೆರೋಲ್ ನೀಡಿ ಎಂದ ಅತ್ಯಾಚಾರ ಅಪರಾಧಿ ದೇವಮಾನವ!
ರೋಹ್ಟಕ್ (ಹರಿಯಾಣ), ಜೂನ್ 21: ಅತ್ಯಾಚಾರ ಮತ್ತು ಪತ್ರಕರ್ತರೊಬ್ಬರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್, ತನ್ನ ಜಮೀನಿನಲ್ಲಿ ಕೃಷಿ ಮಾಡಲು ಪೆರೋಲ್ ನೀಡುವಂತೆ ಕೋರಿದ್ದಾನೆ.
ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್, ಜೈಲಿನಲ್ಲಿ ಮಾಲಿಯಾಗಿ ಕೆಲಸ ಮಾಡುತ್ತಿದ್ದಾನೆ. ಸಿರ್ಸಾದಲ್ಲಿರುವ ತನ್ನ ಭೂಮಿ ಪಾಳು ಬಿದ್ದಿದ್ದು, ಅದರಲ್ಲಿ ಕೃಷಿ ಮಾಡಲು ಪೆರೋಲ್ ನೀಡುವಂತೆ ಸುನಾರಿಯಾ ಜೈಲಿನ ಅಧಿಕಾರಿಗಳಿಗೆ ಕೋರಿದ್ದಾನೆ.
ಪತ್ರಕರ್ತನ ಹತ್ಯೆ ಪ್ರಕರಣ: ರಾಮ್ ರಹೀಮ್ಗೆ ಜೀವಾವಧಿ ಶಿಕ್ಷೆ
ಆತನ ಮನವಿಯನ್ನು ಜೈಲು ಅಧಿಕಾರಿಗಳು ಜಿಲ್ಲಾಡಳಿತಕ್ಕೆ ರವಾನಿಸಿದ್ದು, ಅದನ್ನು ಹರಿಯಾಣ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2002ರ ಅಕ್ಟೋಬರ್ನಲ್ಲಿ ಪತ್ರಕರ್ತ ರಾಮಚಂದರ್ ಛತ್ರಪತಿ ಅವರ ಕೊಲೆ ಪ್ರಕರಣದಲ್ಲಿ ಪಂಚಕುಳದ ವಿಶೇಷ ಸಿಬಿಐ ಕೋರ್ಟ್ ಜನವರಿ 17ರಂದು ರಾಮ್ ರಹೀಮ್ ಸಿಂಗ್ ಮತ್ತು ಇತರೆ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಜೈಲಿನಲ್ಲೂ ರಾಮ್ ರಹೀಮ್ ಐಷಾರಾಮಿ ಬದುಕು ನಡೆಸುತ್ತಿದ್ದಾನಾ!?
ರಾಮ್ ರಹೀಮ್ ತನ್ನ ಡೇರಾ ಸಚ್ಛಾ ಸೌಧದ ಕೇಂದ್ರದಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ಬರೆಯಲಾಗಿದ್ದ ಅನಾಮಿಕ ಪತ್ರವನ್ನು ರಾಮಚಂದರ್ ಅವರ ಪತ್ರಿಕ ಪ್ರಕಟಿಸಿತ್ತು. ಈ ಕಾರಣಕ್ಕಾಗಿ ಸಿರ್ಸಾದಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು.
ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ 2017ರ ಆಗಸ್ಟ್ನಲ್ಲಿ ರಾಮ್ ರಹೀಮ್ಗೆ 20 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು.