ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ: ಕಾಂಗ್ರೆಸ್ ಶಾಸಕ ರಮಿಂದರ್ ವಿರುದ್ಧ ಎಫ್ಐಆರ್ ದಾಖಲು
ಚಂಡೀಗಢ,ಫೆಬ್ರವರಿ 02: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ರಮಿಂದರ್ ಸಿಂಗ್ ಆವ್ಲಾ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಮಿಂದರ್ ಸಿಂಗ್ ಅವರ ಪುತ್ರ ಮತ್ತು ಘಟನೆಗೆ ಸಂಬಂಧಿಸಿದ 60 ಮಂದಿ ವಿರುದ್ಧವೂ ಪ್ರಕರಣ ದಾಖಲಾಗಿದೆ.
ವೈರಲ್ ವಿಡಿಯೋ: ಶಿರೋಮಣಿ ಅಕಾಲಿದಳ ಅಧ್ಯಕ್ಷ ಸುಖ್ಬೀರ್ ಕಾರಿನ ಮೇಲೆ ಗುಂಡಿನ ದಾಳಿ
ಪಂಜಾಬ್ ನ ಜಲಾಲಾಬಾದ್ ನಲ್ಲಿ ದುಷ್ಕರ್ಮಿಗಳು ಶಿರೋಮಣಿ ಅಕಾಲಿದಳ(ಎಸ್ಎಡಿ)ದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರ ಕಾರಿನ ಮೇಲೆ ಕಲ್ಲು ಹಾಗೂ ಗುಂಡಿನ ದಾಳಿ ನಡೆಸಿದ್ದರು.
ಈ ವೇಳೆ ಬಾದಲ್ ಅವರನ್ನು ರಕ್ಷಿಸಲು ಮುಂದಾದ ಪಕ್ಷದ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ ಎಂದು ಶಿರೋಮಣಿ ಅಕಾಲಿದಳ ಆರೋಪಿಸಿತ್ತು.
ದಾಳಿಯ ಹಿಂದೆ ಪೊಲೀಸ್ ಬೆಂಬಲಿತ ಕಾಂಗ್ರೆಸ್ ಗೂಂಡಾಗಳ ಕೈವಾಡವಿದ್ದು ಬಾದಲ್ ಹತ್ಯೆಗೆ ಸಂಚು ಹೂಡಿದ್ದಾರೆ ಎಂದು ಎಸ್ಎಡಿ ಆರೋಪಿಸಿದೆ. ಸದ್ಯ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೆಬ್ರವರಿ 14ರಂದು ನಡೆಯಲಿರುವ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಬಾದಲ್ ಅಕಾಲಿ ಅಭ್ಯರ್ಥಿಗಳ ಜೊತೆ ಹೋಗಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ.