ಪಂಜಾಬ್ನಲ್ಲಿ ರೈತರ ಹೋರಾಟಕ್ಕೆ ಅಡ್ಡಿಯಾಗುತ್ತಾ ಕೊರೊನಾ?
ಚಂಡೀಘರ್, ಫೆಬ್ರವರಿ.24: ಪಂಜಾಬ್ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗೆ ರಾಜ್ಯ ಸರ್ಕಾರವೇ ಕಡಿವಾಣ ಹಾಕುತ್ತದೆಯೇ ಎಂಬ ಅನುಮಾನ ಗೋಚರಿಸುತ್ತಿದೆ. ಪಂಜಾಬ್ ಸರ್ಕಾರದ ಹೊಸ ನಿಯಮ ಮತ್ತು ಮಾರ್ಗಸೂಚಿಗಳನ್ನು ಹೊರಡಿಸುವುದಕ್ಕೆ ಕಾರಣವೂ ಇದೆ.
ಹೌದು, ಪಂಜಾಬ್ನಲ್ಲಿ ಕೊರೊನಾವೈರಸ್ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಮಾರ್ಚ್.01ರಿಂದ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಒಳಾಂಗಣ ಮತ್ತು ಹೊರಾಂಗಣ ಸಭೆ ಹಾಗೂ ಸಮಾರಂಭಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ.
ರೈತರಿಗೆ ಹಾನಿಕಾರಕ: ವಿವಾದಿತ 3 ಕೃಷಿ ಕಾಯ್ದೆಗಳ ಬಗ್ಗೆ ವಿವರಣಾತ್ಮಕ ಪಾಠ
ಕಳೆದ ವಾರವಷ್ಟೇ ಪಂಜಾಬ್ನ ಹಲವೆಡೆ ದೆಹಲಿ-ಲೂಧಿಯಾನ-ಅಮೃತಸರ್ ರೈಲ್ವೆ ಮಾರ್ಗದಲ್ಲಿ ರೈತರು ರೈಲ್ವೆ ತಡೆ ನಡೆಸಿದ್ದರು. ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾನಿರತ ರೈತರು ನೆರೆದ ಹಿನ್ನೆಲೆ ಬಗಿ ಭದ್ರತೆ ಕೈಗೊಳ್ಳಲಾಗಿದ್ದು, ಪೊಲೀಸರು ಮತ್ತು ರೈಲ್ವೆ ಪೊಲೀಸರನ್ನು ನಿಯೋಜಿಸಲಾಗಿತ್ತು.
ಪಂಜಾಬ್ನಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕೆ ಕ್ರಮ
ಕೊರೊನಾವೈರಸ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಪಂಜಾಬ್ ಸರ್ಕಾರವು ಹೊಸ ಮಾರ್ಗಸೂಚಿ ಹೊರಡಿಸಿದೆ. ಒಳಾಂಗಣ ಸಭೆ ಸಮಾರಂಭಗಳಲ್ಲಿ 100 ಹಾಗೂ ಹೊರಾಂಗಣ ಸಭೆ ಮತ್ತು ಸಮಾರಂಭಗಳಲ್ಲಿ ಗರಿಷ್ಠ 200 ಜನ ಸೇರುವುದಕ್ಕೆ ಅವಕಾಶ ನೀಡಲಾಗಿದೆ. ಈ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಕೊರೊನಾವೈರಸ್ ಶಿಷ್ಟಾಚಾರ ಪಾಲನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಒಂದು ದಿನದಲ್ಲಿ 30 ಸಾವಿರ ಮಂದಿಗೆ ಕೊವಿಡ್ ಪರೀಕ್ಷೆ
ಪಂಜಾಬ್ನಲ್ಲಿ ಒಂದು ದಿನದಲ್ಲಿ ಕನಿಷ್ಠ 30,000 ಮಂದಿಗೆ ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಬೇಕು ಎಂದು ಸಿಎಂ ಅಮರೀಂದರ್ ಸಿಂಗ್ ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಪ್ರತಿನಿತ್ಯ 20 ರಿಂದ 22 ಸಾವಿರ ಜನರಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗುತ್ತದೆ. ಒಳಾಂಗಣ ಸಮಾರಂಭಗಳಲ್ಲಿ 200 ಮತ್ತು ಹೊರಾಂಗಣ ಸಭೆ ಸಮಾರಂಭಗಳಲ್ಲಿ 500 ಜನರು ಭಾಗವಹಿಸುವುದಕ್ಕೆ ಅವಕಾಶ ನೀಡಲಾಗುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಸರ್ಕಾರಿ ಶಾಲೆಗಳನ್ನು ಮತ್ತೆ ಬಂದ್ ಮಾಡುವುದಕ್ಕೆ ಸೂಚಿಸಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿನ್ನಿ ಮಹಾಜನ್ ತಿಳಿಸಿದ್ದಾರೆ.
ಕಿಸಾನ್ ಮಹಾ ಸಮ್ಮೇಳನಕ್ಕೆ ಈ ಮೊದಲೇ ದಿನಾಂಕ ನಿಗದಿ
ಪಂಜಾಬ್ನ ಪ್ರಮುಖ ಪ್ರತಿಪಕ್ಷವಾಗಿರುವ ಆಮ್ ಆದ್ಮಿ ಪಕ್ಷವು ಮಾರ್ಚ್.21ರಂದು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಕಿಸಾನ್ ಮಹಾಸಮ್ಮೇಳನ ನಡೆಸುವುದಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು. ಅಂದಿನ ಮಹಾ ಸಮ್ಮೇಳನದಲ್ಲಿ ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥರೂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರು ಸಹ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಮಧ್ಯೆ ರಾಜ್ಯ ಸರ್ಕಾರವು ಕೊವಿಡ್-19 ನಿಯಂತ್ರಿಸುವ ಉದ್ದೇಶದಿಂದ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ರೈತರ ಹೋರಾಟಕ್ಕೆ 92 ದಿನ
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 92 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ರೈತರ ಹೋರಾಟಕ್ಕೆ ಬೆಂಬಲಿಸಿರುವ ಕಾಂಗ್ರೆಸ್, ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ರೈತರ ಪ್ರತಿಭಟನೆಗೆ ಕೈಜೋಡಿಸುವುದಾಗಿ ಹೇಳುತ್ತಿದೆ.