ಏನಕ್ಕೂ ಸಾಲದ ಎಂಎಸ್ಪಿ: ಕೇಂದ್ರದ ವಿರುದ್ಧ ರೈತರ ಆಕ್ರೋಶ
ಲೂಧಿಯಾನ, ಸೆಪ್ಟೆಂಬರ್ 23: ಕೇಂದ್ರ ಸರ್ಕಾರದ ಕೃಷಿ ಸಂಬಂಧಿ ಮಸೂದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಮತ್ತಷ್ಟು ತೀವ್ರವಾಗುವ ಲಕ್ಷಣಗಳು ಕಂಡುಬಂದಿವೆ. ಮಸೂದೆಯ ವಿರುದ್ಧ ರೈತರ ಅಸಮಾಧಾನ ತಣಿಸಲು ಕೇಂದ್ರ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ತೀರಾ ಅತ್ಯಲ್ಪವಾಗಿದೆ ಎಂದು ಕಿಡಿಕಾರಿದ್ದಾರೆ.
ಗೋಧಿ ಹಾಗೂ ರಬಿ ಬೆಳೆಗಳಿಗೆ ಪ್ರತಿ ಕ್ವಿಂಟಲ್ ಮೇಲೆ 50 ರೂ. ಹೆಚ್ಚಿನ ಎಂಎಸ್ಪಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈ ಬೆಂಬಲ ಬೆಲೆ ರೈತರ ಮೇಲಿನ ಅತ್ಯಂತ ಕ್ರೂರ ಹಾಸ್ಯ ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಟೀಕಿಸಿದೆ.
ಬರೋದು ಬಂತು "ಅಚ್ಚೇ ದಿನ್" ರೈತರಿಗೇ ಬರಬೇಕಾ...!
ಸರ್ಕಾರದಿಂದ ಆರ್ಥಿಕ ಸಹಾಯದ ಘೋಷಣೆಯನ್ನು ನಿರೀಕ್ಷಿಸಿರುವ ರೈತರು, ಕೃಷಿ ವಲಯವು ಅಧಿಕ ವೆಚ್ಚ ಹಾಗೂ ಇತರೆ ಸಮಸ್ಯೆಗಳಿಂದ ಬಳಲುತ್ತಿರುವಾಗ ಈ ಅತ್ಯಲ್ಪ ನೆರವು ಯಾವುದಕ್ಕೂ ಸಾಲುವುದಿಲ್ಲ. ಅದನ್ನು ನೀಡುವುದರ ಬದಲು ಸುಮ್ಮನಿರುವುದೇ ಒಳಿತು ಎಂದಿದ್ದಾರೆ. ಉತ್ಪಾದನೆಯ ವೆಚ್ಚಕ್ಕಿಂತ ಶೇ 50ರಷ್ಟು ಹೆಚ್ಚು ಬೆಂಬಲ ಬೆಲೆ ಹೆಚ್ಚಳ ನೀಡಬೇಕೆಂಬ ಎಂಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರುವುದರಲ್ಲಿ ಎಲ್ಲ ಸರ್ಕಾರಗಳೂ ತಮ್ಮನ್ನು ವಂಚಿಸಿವೆ. ಆಯೋಗದ ವರದಿಯಂತೆ ಎಂಎಸ್ಪಿ ನಿಗದಿಮಾಡುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಿದ್ದ ಬಿಜೆಪಿ ಅದನ್ನು ನೆನಪಿಸಿಕೊಳ್ಳುವಂತೆ ಬಿಕೆಯುದ ಪಂಜಾಬ್ ರಾಜ್ಯ ಕಾರ್ಯದರ್ಶಿ ಸಿಂಗಾರಾ ಸಿಂಗ್ ಮನ್ ಹೇಳಿದ್ದಾರೆ.
ಕೃಷಿ ಸಂಬಂಧಿತ ಮಸೂದೆ ಅಂಗೀಕಾರ ವಿರೋಧಿಸಿ ಅವಿಶ್ವಾಸ ಮಂಡನೆ
2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಸರ್ಕಾರ ಹೇಳಿತ್ತು. ಎಂಎಸ್ಪಿ ಶೇ 20ರಷ್ಟೂ ಏರಿಕೆಯಾಗದೆ ಇದನ್ನು ತಲುಪುವುದು ಹೇಗೆ ಸಾಧ್ಯ? ಸರ್ಕಾರವು ಮತ್ತೆ ತನ್ನ ರೈತ ವಿರೋಧಿ ಮುಖವನ್ನು ತೋರಿಸಿದೆ. ಕ್ವಿಂಟಲ್ ಹತ್ತಿಗೆ 5,710 ರೂ ಎಂದು ಸರ್ಕಾರ ನಿಗದಿ ಮಾಡಿದೆ. ಆದರೆ ಖಾಸಗಿ ಖರೀದಿದಾರರಿಗೆ 4,500ಕ್ಕೆ ತಮ್ಮ ಬೆಳೆಯನ್ನು ಮಾರಾಟ ಮಾಡುವ ಒತ್ತಡದ ಸ್ಥಿತಿಗೆ ರೈತರನ್ನು ದೂಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೆ. 25ರಂದು ಬಂದ್ ಇಲ್ಲ, ರೈತ ಸಂಘಗಳಿಂದ ಹೆದ್ದಾರಿ ತಡೆ ಚಳುವಳಿ
ರೈತರು ಕೃಷಿ ಮಸೂದೆಗಳ ವಿರುದ್ಧ ಕೋಪಗೊಂಡಿರುವಾಗ ಗೋಧಿಯ ಮೇಲಿನ 50 ರೂ ಎಂಎಸ್ಪಿ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರ ಗಾಯಕ್ಕೆ ಉಪ್ಪು ಸವರಿದಂತೆ ಆಗಿದೆ ಎಂದು ಬಿಜೆಯು ಅಧ್ಯಕ್ಷ ಹರ್ಮೀತ್ ಸಿಂಗ್ ಕಾಡಿಯಾನ್ ಹೇಳಿದ್ದಾರೆ.