ಹರ್ಯಾಣ ವಿಧಾನಸಭೆ: ಬಿಜೆಪಿ ಬೆಂಬಲಿಸುವ ಆಲೋಚನೆಯಿಲ್ಲ ಎಂದ ದುಷ್ಯಂತ್
ಚಂಡೀಗಢ, ಅಕ್ಟೋಬರ್ 25: ಹರ್ಯಾಣ ವಿಧಾನಸಭೆ ಅತಂತ್ರವಾದ ಮೇಲೆ ಹತ್ತು ಸ್ಥಾನಗಳಲ್ಲಿ ಗೆದ್ದಿರುವ ಜನ್ ನಾಯಕ್ ಜನತಾ ಪಾರ್ಟಿ (ಜೆಜೆಪಿ) ನಾಯಕ ದುಷ್ಯಂತ್ ಚೌಟಾಲಗೆ ವಿಪರೀತ ಬೇಡಿಕೆ. ಅಷ್ಟೇ ಅಲ್ಲ, ರಾಷ್ಟ್ರೀಯ ಪಕ್ಷಗಳು ಹಾಗೂ ಜೆಜೆಪಿ ಹೊರತುಪಡಿಸಿ ಎಂಟು ಸ್ಥಾನಗಳಲ್ಲಿ ಗೆದ್ದವರಿಗೂ ಭಾರೀ ಬೇಡಿಕೆ ಬಂದುಬಿಟ್ಟಿದೆ.
ಹರ್ಯಾಣದ ಮುಂದಿನ ಸಿಎಂ ಆಗಿ ದುಷ್ಯಂತ್ ಆಯ್ಕೆ: ಕಾಂಗ್ರೆಸ್ಸಿನ ಘೋಷಣೆ
ಪಕ್ಷ ಸ್ಥಾಪನೆ ಮಾಡಿದ ಒಂದೇ ವರ್ಷದಲ್ಲಿ ಹತ್ತು ಸ್ಥಾನಗಳಲ್ಲಿ ಗೆದ್ದು, 'ಕಿಂಗ್ ಮೇಕರ್' ಆಗಿರುವ ಜೆಜೆಪಿ ನಾಯಕ ದುಷ್ಯಂತ್ ಚೌಟಾಲ ಅವರ ಸಂದರ್ಶನವನ್ನು 'ಹಿಂದೂಸ್ತಾನ್ ಟೈಮ್ಸ್' ಮಾಡಿದೆ. ಅದರ ಆಯ್ದ ಭಾಗ ಇಲ್ಲಿದೆ.
ಪ್ರಶ್ನೆ: ಬಿಜೆಪಿ ಜತೆ ಮಾತುಕತೆ ನಡೆಸಿದ್ದೀರಾ? ಯಾರಾದರೂ ನಿಮ್ಮನ್ನು ಸಂಪರ್ಕಿಸಿದ್ದಾರಾ?
ದುಷ್ಯಂತ್: ಇಲ್ಲ. ಈ ವರೆಗೆ ಬಿಜೆಪಿ ಜತೆಗೆ ಯಾವುದೇ ಮಾತುಕತೆ ನಡೆಸಿಲ್ಲ.
ಪ್ರಶ್ನೆ: ನೀವು ಬಿಜೆಪಿಯನ್ನು ಬೆಂಬಲಿಸುವ ವಿಚಾರದಲ್ಲಿ ಮುಕ್ತವಾಗಿದ್ದೀರಾ?
ದುಷ್ಯಂತ್: ಆ ಬಗ್ಗೆ ನಾವು ಯಾವ ನಿರ್ಧಾರವನ್ನೂ ಮಾಡಿಲ್ಲ. ಬಿಜೆಪಿಯನ್ನು ಬೆಂಬಲಿಸುವ ಅಂಥ ಯಾವ ಆಲೋಚನೆ ನನಗಿಲ್ಲ.
ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ 2019: ಗೆದ್ದವರು, ಸೋತವರು
ಪ್ರಶ್ನೆ: ಶಿರೋಮಣಿ ಅಕಾಲಿ ದಳದ ಬಾದಲ್ ಅವರಿಗೆ ನಿಮ್ಮ ಜತೆ ಮಾತನಾಡುವಂತೆ ಬಿಜೆಪಿ ತಿಳಿಸಿದೆಯಂತೆ ಹೌದಾ?
ದುಷ್ಯಂತ್: ನಾನು ಯಾರ ಜತೆಯೂ ಮಾತನಾಡಿಲ್ಲ. ನಮ್ಮ ಎಲ್ಲ ಶಾಸಕರು ಒಟ್ಟಿಗೆ ಕೂತು, ಶಾಸಕಾಂಗ ಪಕ್ಷದ ಸಭೆ ನಡೆಸಿ, ಆ ನಂತರ ಮುಂದೆ ಏನು ಮಾಡಬೇಕು ಎಂದು ನಿರ್ಧಾರ ಮಾಡ್ತೀವಿ.
ಪ್ರಶ್ನೆ: ಅದು ತುಂಬಾ ತಡ ಆಗಲ್ಲವಾ? ಸಿರ್ಸಾದ ಪಕ್ಷೇತರ ಶಾಸಕ ಗೋಪಾಲ್ ಕಂದಾ ಅದಾಗಲೇ ದೆಹಲಿಗೆ ಹಾರಿದ್ದಾರೆ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಾರೆ...
ದುಷ್ಯಂತ್: ಹನ್ನೊಂದು ತಿಂಗಳ ಹಿಂದೆ ನಮ್ಮ ಪ್ರಯಾಣ ಶುರು ಮಾಡಿದ್ದೀವಿ. ಸಂವೇದನಾಶೀಲರಾಗಿ ಇರುವುದರಿಂದ ಇಲ್ಲಿಯವರೆಗೆ ಬಂದಿದ್ದೇವೆ. ಎಲ್ಲವನ್ನೂ ಸರಿಯಾದ ದಾರಿಯಲ್ಲಿ ಮಾಡಿದ್ದೇವೆ. ಮುಂದೆ ಕೂಡ ಇದೇ ರೀತಿ ಸಾಗ್ತೀವಿ. ನಾವು ಎಲ್ಲರ ಜತೆ ಮಾತನಾಡ್ತೇವೆ; ಸಂವೇದನೆಯೊಂದನೆಯೊಂದಿಗೆ ಮಾಡ್ತೇವೆ.
ಪ್ರಶ್ನೆ: ನೀವು ಜೆಜೆಪಿ ಸ್ಥಾಪಿಸಿದಾಗ ರಾಜ್ಯದ ತೊಂಬತ್ತರಲ್ಲಿ ಹತ್ತು ಸ್ಥಾನದಲ್ಲಿ ಗೆಲ್ಲಬಹುದು ಅಂದುಕೊಂಡಿದ್ದಿರಾ ಮತ್ತು ನಿಮ್ಮ ಮಾತೃ ಪಕ್ಷ ಇಂಡಿಯನ್ ನ್ಯಾಷನಲ್ ಲೋಕ್ ದಳ್ ಒಂದು ಸ್ಥಾನದಲ್ಲಷ್ಟೇ ಗೆದ್ದಿರುವಾಗ?
ದುಷ್ಯಂತ್: ಕಳೆದ ವರ್ಷ ನವೆಂಬರ್ ಹದಿನೇಳು ತಾರೀಕು ನಮ್ಮ ಪ್ರಯಾಣ ಆರಂಭಿಸಿದೆವು. ಆಗ ನನ್ನ ತಂದೆ (ಅಜಯ್ ಸಿಂಗ್ ಚೌಟಾಲ) ಅವರು ಪಕ್ಷವನ್ನು ತಳಮಟ್ಟದಿಂದ ಕಟ್ಟೋಣ ಎಂದರು. ಆ ಕನಸನ್ನು ನಾವು ಪೂರ್ತಿ ಮಾಡಿದೆವು ಅಂತ ಈ ದಿನ ಹೇಳಬಹುದು. ಅ ಗುರಿಯ ಕಡೆಗೆ ಪ್ರತಿ ದಿನ ಕೆಲಸ ಮಾಡಿದ್ದೇವೆ.