ಪಂಜಾಬ್ ಚುನಾವಣೆಗೆ ಮುನ್ನ ಡೇರಾ ಮುಖ್ಯಸ್ಥ ಪೆರೋಲ್ ಮೇಲೆ ಜೈಲಿನಿಂದ ಹೊರಕ್ಕೆ
ಚಂಡೀಗಢ, ಫೆಬ್ರವರಿ 07: ಇನ್ನು ಕೆಲವೇ ದಿನಗಳಲ್ಲಿ ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಡುವೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಕಠಿಣ ಜೈಲು ಶಿಕ್ಷೆಗೆ ಒಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಆಗಿದ್ದಾರೆ.
ಸೋಮವಾರ ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಿಂದ ಪೆರೋಲ್ ಮೇಲೆ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹೊರ ಬಂದಿದ್ದಾರೆ. ನೆರೆಯ ಪಂಜಾಬ್ ಚುನಾವಣೆಯು ಇನ್ನು ಕೇವಲ 13 ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈ ನಡುವೆ 21 ದಿನಗಳ ಪೆರೋಲ್ ಮೇಲೆ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೈಲಿನಿಂದ ಹೊರಬಂದಿದ್ದಾರೆ.
Breaking; ಕೊಲೆ ಪ್ರಕರಣ, ರಾಮ್ ರಹೀಮ್ ಸಿಂಗ್ಗೆ ಜೀವಾವಧಿ ಶಿಕ್ಷೆ
ಪಂಜಾಬ್ ಹೊರತುಪಡಿಸಿ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ವಿಧಾನ ಸಭೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ ರಾಜ್ಯದಲ್ಲೂ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ. ಫೆಬ್ರವರಿ 27 ರವರೆಗೆ ಜೈಲಿನಿಂದ ಹೊರಗುಳಿಯಲಿದ್ದಾರೆ. ವಿಧಾನಸಭೆ ಚುಣಾವಣೆಗೆ ಮುನ್ನ ರಾಮ್ ರಹೀಮ್ ಬಿಡುಗಡೆಯು ಅನೇಕ ಸುದ್ದಿಗಳಿಗೆ ಎಡೆ ಮಾಡಿ ಕೊಟ್ಟಿದೆ. ಆದರೆ ಈಗ ಹರಿಯಾಣ ಸರ್ಕಾರವು ಪೆರೋಲ್ ಒಂದು "ಸಾಮಾನ್ಯ ಕಾನೂನು ಪ್ರಕ್ರಿಯೆ" ಮತ್ತು "ಒಬ್ಬ ಅಪರಾಧಿಯ ಕಾನೂನುಬದ್ಧ ಹಕ್ಕು" ಎಂದು ಕರೆದಿದೆ.
ಹರಿಯಾಣ ಸರ್ಕಾರ ಹೇಳುವುದು ಹೀಗೆ...
"ಕೆಲವು ವಿಷಯಗಳು ವ್ಯವಸ್ಥೆ, ನಮ್ಮ ಕಾನೂನು ನಿಬಂಧನೆಗಳು ಮತ್ತು ಭಾರತದ ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುತ್ತವೆ. ಇದು ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ. ಯಾವುದೇ ಸಾಮಾನ್ಯ ಅಪರಾಧಿಯು ಪೆರೋಲ್ ಮೇಲೆ ಬಿಡುಗಡೆ ಹೊಂದುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾನೆ. ಮುಂಬರುವ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಯಾವುದೇ ಜೈಲು ಕೈದಿ ತನ್ನ ಮೂರು ವರ್ಷಗಳ ಜೈಲುವಾಸವನ್ನು ಪೂರ್ಣಗೊಳಿಸಿದ ಕಾನೂನಿನ ಅಡಿಯಲ್ಲಿ ಪೆರೋಲ್ ಕೋರಬಹುದು. ಕೈದಿಯ ಮನವಿಯ ನಂತರ, ಜಿಲ್ಲಾಡಳಿತ ಮತ್ತು ಜೈಲು ಅಧಿಕಾರಿಗಳು ಅದನ್ನು ಸ್ವೀಕಾರ ಮಾಡಬಹುದು ಅಥವಾ ತಿರಸ್ಕಾರ ಮಾಡಬಹುದು," ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಸಚಿವ ರಂಜಿತ್ ಸಿಂಗ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, "ರಾಮ್ ರಹೀಮ್ ಬಿಡುಗಡೆ ಮತ್ತು ಮುಂಬರುವ ಚುನಾವಣೆಗಳ ನಡುವೆ ಯಾವುದೇ ಸಂಬಂಧವಿಲ್ಲ. ಇದು ಒಂದು ಸಾಮಾನ್ಯವಾಗಿ ನಡೆಯುವ ಕಾನೂನು ಪ್ರಕ್ರಿಯೆ," ಎಂದಿದ್ದಾರೆ. ಡೇರಾ ಸಚ್ಚಾ ಸೌಧ ಮುಖ್ಯಸ್ಥರಾಗಿದ್ದ ರಾಮ್ ರಹೀಮ್ ಸಿಂಗ್ಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹಾಗೆಯೇ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ 20 ವರ್ಷದ ಜೈಲು ಶಿಕ್ಷೆ ಆಗಿದೆ.
ಪಂಜಾಬ್ ಚುನಾವಣೆಗೂ ಮುನ್ನ ಚನ್ನಿ ಸೋದರಳಿಯನ ಬಂಧನ
ಪಂಜಾಬ್ನಲ್ಲಿ ಡೇರಾ ಸಚ್ಚಾ ಸೌದಾದ ಭಾರೀ ಅನುಯಾಯಿಗಳು
ಡೇರಾ ಸಚ್ಚಾ ಸೌದಾವು ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ಪ್ರಧಾನ ಕಛೇರಿ ಹೊಂದಿದ್ದರೂ, ಪಂಜಾಬ್ನಲ್ಲಿ ಗಮನಾರ್ಹ ಅನುಯಾಯಿಗಳನ್ನು ಹೊಂದಿದೆ. ಅಲ್ಲಿ ಇದು ಮಾಲ್ವಾ, ಮಾಝಾ ಮತ್ತು ದೋಬಾ ಪ್ರದೇಶಗಳಲ್ಲಿ 23 ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದೆ. ಡೇರಾದ ಅನುಯಾಯಿಗಳು ಪಂಜಾಬ್ನ ಕನಿಷ್ಠ 69 ಅಸೆಂಬ್ಲಿ ಸ್ಥಾನಗಳಲ್ಲಿ, ವಿಶೇಷವಾಗಿ ಮಾಲ್ವಾ ಪ್ರದೇಶದಲ್ಲಿ ಹರಡಿದ್ದಾರೆ. ರಾಮ್ ರಹೀಮ್ ಅವರನ್ನು ಮಧ್ಯಾಹ್ನ ಸುನಾರಿಯಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಅವರನ್ನು ಬರಮಾಡಿಕೊಳ್ಳಲು ಹತ್ತಾರು ವಾಹನಗಳ ಬೆಂಗಾವಲು ತಂಡವು ಸಿರ್ಸಾದಲ್ಲಿರುವ ಡೇರಾ ಪ್ರಧಾನ ಕಛೇರಿಯಿಂದ ಬೆಳಿಗ್ಗೆ ಹೊರಟಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಮ್ ರಹೀಮ್ ಅವರ ಕುಟುಂಬ ಸದಸ್ಯರು ಅವರನ್ನು ಗುರ್ಗಾಂವ್ಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಬಿಗಿ ಪೊಲೀಸ್ ಭದ್ರತೆಯಲ್ಲಿ ಕೆಲವು ದಿನಗಳವರೆಗೆ ಇರಲಿದ್ದಾರೆ.
2007, 2012 ಮತ್ತು 2017ರ ವಿಧಾನಸಭೆ ಚುನಾವಣೆಗಳಲ್ಲಿ ಡೇರಾ ಮಹತ್ವದ ಪಾತ್ರ ವಹಿಸಿತ್ತು. 2014ರ ಲೋಕಸಭೆ ಚುನಾವಣೆ ಮತ್ತು ಹರಿಯಾಣದ ವಿಧಾನಸಭೆ ಚುನಾವಣೆಯಲ್ಲಿ ಡೇರಾ ಬಿಜೆಪಿಯನ್ನು ಬೆಂಬಲಿಸಿತ್ತು. ಲೋಕಸಭೆ ಚುನಾವಣೆಗೆ ಕೆಲವೇ ವಾರಗಳ ಮೊದಲು, ಡೇರಾ ಕೂಡ ಸ್ವಚ್ಛ ಭಾರತ್ ಮಿಷನ್ ಅನ್ನು ಬೆಂಬಲಿಸಿತು. ಪಂಜಾಬ್ನಲ್ಲಿ ಈ ವಿಧಾನಸಭೆ ಚುನಾವಣೆ ಘೋಷಣೆಯಾದ ಒಂದು ದಿನದ ನಂತರ, ಹಲವಾರು ಬಿಜೆಪಿ, ಕಾಂಗ್ರೆಸ್, ಎಎಪಿ ಮತ್ತು ಎಸ್ಎಡಿ ನಾಯಕರು ಸಲಾಬತ್ಪುರದಲ್ಲಿ ಡೇರಾ ಸಚ್ಚಾ ಸೌದಾ ಅನುಯಾಯಿಗಳ ಸಭೆಯಲ್ಲಿ ಕಾಣಿಸಿಕೊಂಡಿದ್ದರು. (ಒನ್ಇಂಡಿಯಾ ಸುದ್ದಿ)