ತರಕಾರಿ ಮಾರುಕಟ್ಟೆಯಲ್ಲಿ ''ಪಾಸ್'' ಕೇಳಿದ ಪೊಲೀಸ್ ಕೈ ಕಟ್
ಚಂಡೀಗಢ, ಏಪ್ರಿಲ್ 12: ಕೊರೊನಾವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಜಾರಿಯಲ್ಲಿದೆ. 21ದಿನಗಳ ಲಾಕ್ ಡೌನ್ ಅವಧಿ ಏಪ್ರಿಲ್ 14ರಂದು ಮುಕ್ತಾಯವಾಗಲಿದೆ. ಆದರೆ ಪಂಜಾಬ್ ನಲ್ಲಿ ಏಪ್ರಿಲ್ 30ರ ತನಕ ಲಾಕ್ ಡೌನ್ ವಿಸ್ತರಣೆಗೆ ಮುಂದಾಗಲಿದೆ. ಈ ನಡುವೆ ಪಟಿಯಾಲ ಜಿಲ್ಲೆಯಲ್ಲಿ ಭಾನುವಾರದಂದು ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ನಿಹಾಂಗ್ ಸಿಖ್ ಸಮುದಾಯದಿಂದ ದಾಳಿ ನಡೆದಿದೆ.
ಪಂಜಾಬಿನ ಪಟಿಯಾಲ ಜಿಲ್ಲೆಯ ತರಕಾರಿ ಮಾರುಕಟ್ಟೆಯಲ್ಲಿ ಜನರನ್ನು ನಿಯಂತ್ರಿಸಲು ಬಂದಿದ್ದ ಪೊಲೀಸ್ ಪಡೆ ಮೇಲೆ ನಿಹಾಂಗ್ (ಶಸ್ತ್ರಧಾರಿ ಸಿಖ್ ಗುಂಪು) ಸಮುದಾಯದವರು ದಾಳಿ ನಡೆಸಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ ಕರ್ಫ್ಯೂ ಪಾಸ್ ಪರಿಶೀಲಿಸುತ್ತಿದ್ದಸಹಾಯಕ ಸನ್ ಇನ್ಸ್ ಪೆಕ್ಟರ್(ಎಎಸ್ಐ) ಹರ್ಜೀತ್ ಸಿಂಗ್ ಅವರು ನಿಹಾಂಗ್ ಗಳನ್ನು ಪಾಸ್ ತೋರಿಸುವಂತೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ನಿಹಾಂಗ್ ಗುಂಪು ತಮ್ಮ ಬಳಿ ಇದ್ದ ಕತ್ತಿಯಿಂದ ಇನ್ಸ್ ಪೆಕ್ಟರ್ ಕೈ ಕತ್ತರಿಸಿದ್ದಾರೆ. ನಿಹಾಂಗ್ ರನ್ನು ತಡೆಯಲು ಬಂದ ಇತರರ ಮೇಲೂ ದಾಳಿ ಮಾಡಿ ಪರಾರಿಯಾಗಿದ್ದಾರೆ ಎಂದು ಡಿಜಿಪಿ ದಿನಕರ್ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.
ತಕ್ಷಣವೇ ಎಎಸ್ ಐ ಹರ್ಜೀತ್ ಸಿಂಗ್ ರನ್ನು ಚಂಡೀಗಢದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ಲಾಸ್ಟಿಕ್ ಸರ್ಜರಿಗೊಳಪಡುವ ಸಾಧ್ಯತೆಯಿದೆ, ಘಟನೆಯಲ್ಲಿ ಗಾಯಗೊಂಡ ಇತರೆ ಪೊಲೀಸರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಡಿಜಿಪಿ ಹೇಳಿದ್ದಾರೆ.
ಪಟಿಯಾಲದ ಸಬ್ಜಿ ಮಂಡಿ ಕಚೇರಿಯ ಬಳಿ ಇರುವ ಗುರುದ್ವಾರವೊಂದರಲ್ಲಿ ನಿಹಾಂಗ್ ಗುಂಪು ಅಡಗಿರುವ ಮಾಹಿತಿ ಸಿಕ್ಕಿದ್ದು, ಸ್ಥಳೀಯ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.