ಪಂಜಾಬ್ 2022 ಚುನಾವಣೆಯಲ್ಲಿ ಸ್ಪರ್ಧಿಸುವೆ: ಸಿಧು ವಿರುದ್ಧ ಅಮರಿಂದರ್ ವಾಗ್ದಾಳಿ
ಅಮೃತಸರ, ನವೆಂಬರ್ 22: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು 2022 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕುಟುಂಬದ ಭದ್ರಕೋಟೆಯಾಗಿರುವ ಪಟಿಯಾಲಾದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.ನಾನು ಎಲ್ಲಿಯೂ ಓಡಿಹೋಗುವುದಿಲ್ಲ. ಮುಂದಿನ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.
"ನಾನು ಪಟಿಯಾಲದಿಂದ ಸ್ಪರ್ಧಿಸುತ್ತೇನೆ. ಪಟಿಯಾಲ 400 ವರ್ಷಗಳಿಂದ ನಮ್ಮೊಂದಿಗಿದ್ದು, ಸಿಧು ಕಾರಣದಿಂದ ನಾನು ಅದನ್ನು ಬಿಡಲು ಹೋಗುವುದಿಲ್ಲ" ಎಂದು ಅಮರಿಂದರ್ ತಮ್ಮ ಅಧಿಕೃತ ಫೇಸ್ಬುಕ್ ಪುಟದಲ್ಲಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ನವಜೋತ್ ಸಿಂಗ್ ಸಿಧು ಅವರೊಂದಿಗಿನ ತೀವ್ರ ಅಧಿಕಾರದ ಜಗಳದಿಂದಾಗಿ ಅಮರಿಂದರ್ ಅವರು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಗಮನಾರ್ಹವೆಂದರೆ, ಅಮರಿಂದರ್ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರ ಪತ್ನಿ ಪ್ರಣೀತ್ ಕೌರ್ 2014 ರಲ್ಲಿ ಸ್ಥಾನದಿಂದ ಗೆದ್ದಿದ್ದಾರೆ. ಅಮರಿಂದರ್ ಅವರ ತಂದೆ ಮಹಾರಾಜ ಸರ್ ಯಾದವಿಂದರ್ ಸಿಂಗ್ ಅವರು ಪಟಿಯಾಲ ರಾಜ್ಯದ ಕೊನೆಯ ಮಹಾರಾಜರಾಗಿದ್ದರು ಎಂಬುದನ್ನು ಗಮನಾರ್ಹವಾಗಿದೆ.
ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಪಕ್ಷ ನನ್ನನ್ನು ಅವಮಾನಿಸಿದೆ, ರಾಜಿನಾಮೆ ಬಳಿಕ ಸಮಯ ಬಂದಾಗ ನನ್ನ ಅಧಿಕಾರವನ್ನು ಚಲಾಯಿಸುತ್ತೇನೆ ಎಂದು ಗುಡಗಿದ್ದರು. ಪಂಜಾಬ್ ಕಾಂಗ್ರೆಸ್ ಹಾಲಿ ಅಧ್ಯಕ್ಷರಾಗಿರುವ ನವಜೋತ್ ಸಿಂಗ್ ಸಿಧು, ಪಕ್ಷ ಸೇರಿದಾಗಿನಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜತೆಗಿನ ಸಂಬಂಧ ಅಷ್ಟಕ್ಕಷ್ಟೇ ಇದೆ. ಸರ್ಕಾರ ರಚನೆಯ ನಂತರ ಸಿಧುಗೆ ಉಪ ಮುಖ್ಯಮಂತ್ರಿ ಹುದ್ದೆ ಅಥವಾ ಪ್ರಮುಖ ಖಾತೆ ನೀಡಲು ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿರಾಕರಿಸಿದಂದಿನಿಂದ ಪಂಜಾಬ್ ಕಾಂಗ್ರೆಸ್ನಲ್ಲಿ ಗೊಂದಲ ಆರಂಭವಾಗಿತ್ತು.
ದಿನ ಕಳೆದಂತೆ ಅಮರಿಂದರ್ ಸಿಂಗ್ ವಿರೋಧಿ ಬಣವು ಸಿಧುಗೆ ಹತ್ತಿರವಾಯಿತು, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಜತೆಗೆ ಗುರುತಿಸಿಕೊಂಡಿರುವ ಸಿಧು, ಅಮರಿಂದರ್ ಸಿಂಗ್ ವಿರೋಧಿ ಬಣವನ್ನು ಗಟ್ಟಿಯಾಗಿಸತೊಗಿದರು. ಕ್ಯಾಪ್ಟನ್ ವಿರುದ್ಧ ಬಹಿರಂಗ ಹೇಳಿಕೆ ನೀಡಿಕೊಂಡೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ನೇಮಕಗೊಂಡರು. ಈ ನೇಮಕದ ಬಳಿಕ ಉಭಯ ನಾಯಕರ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತು. ಕ್ಯಾಪ್ಟನ್ ವಿರೋಧಿ ಬಣವನ್ನು ಮುಂದಿಟ್ಟುಕೊಂಡು, ಮುಖ್ಯಮಂತ್ರಿ ಬದಲಾವಣೆಗೆ ಸಿಧು ಗಾಳ ಬೀಸತೊಡಗಿದರು. ಕ್ಯಾಪ್ಟನ್ ಜನಪ್ರಿಯತೆಯಿಂದಲೇ 2017ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.
ಆಗ ಕಾಂಗ್ರೆಸ್ ಅಧಿಕಾರವಿರುವ ಬೆರಳೆಣಿಕೆ ರಾಜ್ಯಗಳಲ್ಲಿ ಪಂಜಾಬ್ ಕೂಡ ಒಂದಾಗಿತ್ತು. ಹಾಗೆಯೇ 2014ರ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ಗೆ ದೊರೆತ ಮೊದಲ ಜಯವೂ ಅದಾಗಿತ್ತು. ಆದರೆ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲೇ ಜನಪ್ರಿಯ ನಾಯಕ ಅಮರಿಂದರ್ ಸಿಂಗ್ನ್ನು ಬದಿಗಿರಿಸಿ ಸಿಧು ಬಣದ ನಾಯಕರಿಗೆ ಅವಕಾಶ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಪಕ್ಷದೊಳಗಿನ ಬೇಗುದಿಯಿಂದ ಬೇಸತ್ತಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ನವಜೋತ್ ಸಿಂಗ್ ಸಿಧು ಅವರ ಮೇಲಿನ ಸಿಟ್ಟು ಮಾತ್ರ ಹಾಗೇ ಮುಂದುವರೆದಿದೆ. ಅವರ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣರಾದ ಸಿಧು ವಿರುದ್ಧ ಜಯ ಸಾಧಿಸಲು ಅಮರಿಂದರ್ ಸಿಂಗ್ ಕಾಯುತ್ತಿದ್ದಾರೆ.
ರಾಜೀನಾಮೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಅಮರಿಂದರ್ ಮಗ ರಣೀಂದರ್ ಸಿಂಗ್ ನಮ್ಮ ಕುಟುಂಬದಿಂದ ಹೊಸ ಆರಂಭವಾಗಲಿದೆ ಎನ್ನುವ ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ.ಅಮರಿಂದರ್ ಸಿಂಗ್ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಕೂಡ ಕೇಳಿತ್ತು ಎನ್ನಲಾಗಿದ್ದು, ಇದು ಪಕ್ಷ ವಿಭಜನೆಗೆ ಕಾರಣವಾಗಿದೆ.